ಇತ್ತ ದೆಹಲಿಯ ಮೈಕೊರೆಯುವ ಚಳಿಯಲ್ಲಿ ರೈತರು: ಅತ್ತ, ಕೋಲ್ಕತ್ತಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ
ರಾಂಚಿ, ಮಾರ್ಚ್ 7: ರಾಜಧಾನಿ ದೆಹಲಿಯ ಮೈಕೊರೆಯುವ ಚಳಿಯಲ್ಲಿ ನೂರು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ಭೇಟಿಯಾಗಲು ನಮ್ಮ ಪ್ರಧಾನಿಗೆ ಸಮಯವಿಲ್ಲ. ಬದಲಿಗೆ, ಕೋಲ್ಕತ್ತಾದಲ್ಲಿ ಪಕ್ಷದ ರ್ಯಾಲಿಯಲ್ಲಿ ಭಾಗವಹಿಸಲು ಸಮಯವಿದೆ"ಎಂದು ಶರದ್ ಪವಾರ್ ಲೇವಡಿ ಮಾಡಿದರು.
"ಪಶ್ಚಿಮ ಬಂಗಾಳ ಚುನಾವಣೆಯನ್ನು ಗೆಲ್ಲಲೇ ಬೇಕೆಂದು ಸಾಲುಸಾಲು ಚುನಾವಣಾ ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿದ್ದಾರೆ. ಈ ದೇಶದ ಅನ್ನದಾತನ ಕಷ್ಟ ಅವರಿಗೆ ಬೇಕಾಗಿಲ್ಲ"ಎಂದು ಎನ್ಸಿಪಿ ಮುಖಂಡ ಶರದ್ ಪವಾರ್ ಬೇಸರ ವ್ಯಕ್ತ ಪಡಿಸಿದರು.
ನಗರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಶರದ್ ಪವಾರ್, "ಭಾರತೀಯ ಜನತಾ ಪಕ್ಷ ಎನ್ನುವುದು ಈ ದೇಶದ ಕೋಮು ವಿಷಬೀಜ ಬಿತ್ತುವ ಪಕ್ಷ. ಇದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ"ಎಂದು ಬಿಜೆಪಿ ವಿರುದ್ದ ಪವಾರ್ ವಾಗ್ದಾಳಿ ನಡೆಸಿದರು.

"ರೈತರು ತಮ್ಮ ಬೆಳೆಯ ಬಗ್ಗೆ ಯೋಚಿಸದೇ ದೆಹಲಿ ಗಡಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ನೂರು ದಿನಕ್ಕೂ ಹೆಚ್ಚು ದಿನದಿಂದ ಈ ಪ್ರತಿಭಟನೆ ನಡೆಯುತ್ತಿದೆ. ಈ ದೇಶದ ಪ್ರಧಾನಿಯಾಗಿ ಅವರನ್ನು ಭೇಟಿಯಾಗುವಷ್ಟು ಸೌಜನ್ಯ ಪ್ರಧಾನಿ ಮೋದಿಗೆ ಬೇಡವೇ"ಎಂದು ಶರದ್ ಪವಾರ್ ಪ್ರಶ್ನಿಸಿದರು.
"ಮೋದಿ ಸರಕಾರಕ್ಕೆ ರೈತರ ಬಗ್ಗೆ ಯಾವುದೇ ರೀತಿಯ ಕಾಳಜಿಯಿಲ್ಲ ಎನ್ನುವುದು ಸಾಬೀತಾಗಿ ಹೋಗಿದೆ. ಈ ವಿವಾದೀತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ"ಎಂದು ಶರದ್ ಪವಾರ್ ಅವರು ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ಕೋಲ್ಕತ್ತಾದಲ್ಲಿ ಭಾನುವಾರ (ಮಾ 7) ಬೃಹತ್ ಸಾರ್ವಜನಿಕ ಸಭೆಯನ್ನು ಪ್ರಧಾನಿ ಮೋದಿ ನಡೆಸಿದ್ದರು. ಇದರ ಬೆನ್ನಲ್ಲೇ, ಮಾರ್ಚ್ 13ರಂದು ಬಂಗಾಳದ ರೈತರೊಂದಿಗೆ ಸಂವಾದ ನಡೆಸಲು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಅಲ್ಲಿಗೆ ಪಯಣಿಸಲಿದ್ದಾರೆ.












Click it and Unblock the Notifications