ರಾಮನಗರದ ವೀರಶೈವರು ಜೆಡಿಎಸ್ ಬೆಂಬಲಿಸಲು ಕಾರಣಗಳೇನು?
ರಾಮನಗರ, ಏಪ್ರಿಲ್ 27: ರಾಜ್ಯದಲ್ಲಿ ಬಿಜೆಪಿಯ ಓಟ್ ಬ್ಯಾಂಕ್ ಆಗಿದ್ದ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆದು ಪ್ರತ್ಯೇಕ ಧರ್ಮದ ಕಿಡಿ ಹಚ್ಚಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಚುನಾವಣೆಯಲ್ಲಿ ಅನುಕೂಲವಾಗುತ್ತದೆಯಾ ಎಂಬುದನ್ನು ಸದ್ಯದ ಮಟ್ಟಿಗೆ ಹೇಳುವುದು ಕಷ್ಟ.
ಆದರೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಜಾತಿಯನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪವಂತೂ ಇದ್ದೇ ಇದೆ. ಅಷ್ಟೇ ಅಲ್ಲ ಅದು ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿಯೂ ಬಿಂಬಿತವಾಗುತ್ತಿದೆ. ಈ ವಿಚಾರದಲ್ಲಿ ಅವತ್ತು ತಟಸ್ಥಗೊಂಡಿದ್ದ ಬಿಜೆಪಿ ನಾಯಕರ ನಡೆಯ ಬಗ್ಗೆಯೂ ಕೆಲವು ವೀರಶೈವ ಮುಖಂಡರಿಗೆ ಅಸಮಾಧಾನವಿದೆ.
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿಯ ಉಪಯೋಗವನ್ನು ಜೆಡಿಎಸ್ ಪಡೆದುಕೊಳ್ಳಲು ಹವಣಿಸುತ್ತಿರುವುದು ಇದೀಗ ಕಂಡು ಬರುತ್ತಿದೆ. ಅದರ ಮೊದಲ ಎಫೆಕ್ಟ್ ರಾಮನಗರದಲ್ಲಿ ಆದಂತೆ ಕಂಡು ಬರುತ್ತಿದೆ.

ಇದೀಗ ರಾಮನಗರದ ವೀರಶೈವ ಲಿಂಗಾಯಿತ ಸಮುದಾಯವು ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಮುಂದಾಗಿದ್ದು ಈ ತೀರ್ಮಾನವನ್ನು ಇತ್ತೀಚೆಗೆ ವಿಶ್ವ ವೀರಶೈವ ಒಕ್ಕೂಟದ ರಾಜ್ಯಾಧ್ಯಕ್ಷ ಜ್ಯೋತಿಪ್ರಕಾಶ್ ಮಿರ್ಜಿರವರ ನೇತೃತ್ವದಲ್ಲಿ ನಡೆದ ವಿಶ್ವ ವೀರಶೈವ ಒಕ್ಕೂಟದ ಸಮಾವೇಶದಲ್ಲಿ ಕೈಗೊಳ್ಳಲಾಗಿದೆಯಂತೆ.
ಈ ವಿಚಾರವನ್ನು ವೀರಶೈವ ಲಿಂಗಾಯತ ಸಮುದಾಯದ ಮುಖಂಡ, ಗ್ರಾಪಂ ಸದಸ್ಯರೂ ಆದ ವೀರಶೈವ ಮುಖಂಡ ಎಚ್.ಎಸ್.ಯೋಗಾನಂದ ಬಿಡದಿಯಲ್ಲಿ ಮಾಧ್ಯಮದವರ ಮುಂದೆ ಬಿಚ್ಚಿಟ್ಟಿದ್ದಾರೆ.
ಇನ್ನು ಈ ಬಾರಿಯ ಚುನಾವಣೆಯಲ್ಲಿ ಏಕೆ ಜೆಡಿಎಸ್ನ್ನು ಬೆಂಬಲಿಸುತ್ತಿದ್ದೇವೆ ಎಂಬುದಕ್ಕೆ ಕಾರಣಗಳನ್ನು ಅವರು ನೀಡಿದ್ದಾರೆ. ಅದೇನೆಂದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ವೀರಶೈವ-ಲಿಂಗಾಯಿತ ಸಮುದಾಯವನ್ನು ಒಡೆಯುವ ಮೂಲಕ ಧರ್ಮ ರಾಜಕಾರಣ ಮಾಡುತ್ತಿದೆ. ರಾಮನಗರ ಜಿಲ್ಲೆಯಲ್ಲಿ ವೀರಶೈವರಿಗೆ ಕಾಂಗ್ರೆಸ್ ಏನೂ ಕೊಡುಗೆ ನೀಡಿಲ್ಲ, ಅಲ್ಲದೆ ರಾಜಕೀಯವಾಗಿ ಯಾವುದೇ ಹುದ್ದೆಗಳು ಕಾಂಗ್ರೆಸ್ನಿಂದ ಲಭ್ಯವಾಗಿಲ್ಲ ಎಂದಿದ್ದಾರೆ.
ಆದರೆ ಜೆಡಿಎಸ್ ಪಕ್ಷದಿಂದ ವೀರಶೈವ-ಲಿಂಗಾಯಿತ ಸಮುದಾಯಕ್ಕೆ ಸಾಕಷ್ಟು ಅನುಕೂಲಗಳಾಗಿವೆ. ತಾಪಂ ಹಾಗೂ ವಿಎಸ್ಎಸ್ಎನ್ಗಳಲ್ಲಿ ಜನಾಂಗಕ್ಕೆ ಸೂಕ್ತ ಪ್ರಾತಿನಿಧ್ಯ ದೊರಕಿಸಿಕೊಟ್ಟಿದೆ. ಹೀಗಾಗಿ ಸಮುದಾಯದ ಜನರು ಜೆಡಿಎಸ್ಗೆ ಮತ ನೀಡುವಂತೆ ನಿರ್ಣಯ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.
ಇದೀಗ ರಾಮನಗರ ಜಿಲ್ಲೆಯಲ್ಲಿ ವೀರಶೈವ-ಲಿಂಗಾಯಿತ ಸಮಾಜ ಜೆಡಿಎಸ್ನ್ನು ಬೆಂಬಲಿಸಬೇಕೆನ್ನುವ ಮುಖಂಡರ ಮಾತು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಇಂತಹ ನಿರ್ಧಾರಗಳು ಚುನಾವಣೆ ಸಂದರ್ಭದಲ್ಲಿ ಬೀರುವ ಪರಿಣಾಮಗಳು ದೊಡ್ಡ ಮಟ್ಟದಲ್ಲಿರುವುದರಿಂದಾಗಿ ಯಾವುದನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ಹೀಗಾಗಿಯೇ ರಾಮನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಆತಂಕಗೊಂಡಿರುವುದಂತೂ ನಿಜ.












Click it and Unblock the Notifications