"ನಮ್ಮನ್ನು ರಕ್ಷಣೆ ಮಾಡುವವರಿಗೆ ಮೊದಲು ರಕ್ಷಣೆ ನೀಡಬೇಕು"
ರಾಮನಗರ, ಏಪ್ರಿಲ್ 04: "ನಮ್ಮನ್ನು ಯಾರು ರಕ್ಷಣೆ ಮಾಡುತ್ತಾರೋ ನಾವು ಮೊದಲು ಅವರನ್ನು ರಕ್ಷಣೆ ಮಾಡಬೇಕು. ಸರ್ಕಾರ, ಹಲ್ಲೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿ" ಎಂದು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹಲ್ಲೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್.
ರಾಮನಗರಕ್ಕೆ ಇಂದು ಭೇಟಿ ನೀಡಿದ್ದ ಅವರು, ಜಿಲ್ಲಾಧಿಕಾರಿಗಳಿಗೆ ಸ್ಯಾನಿಟೈಜರ್, ಮಾಸ್ಕ್ ಗಳನ್ನು ಹಸ್ತಾಂತರಿಸುವ ಮೂಲಕ ಜಿಲ್ಲಾದ್ಯಂತ ಅವುಗಳ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು. ಸಂಸದ ಡಿ.ಕೆ.ಸುರೇಶ್ ಅಧ್ಯಕ್ಷತೆಯಲ್ಲಿ ವಿತರಣೆ ಕಾರ್ಯ ನಡೆಯಿತು. ಡಿ.ಕೆ.ಎಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜನರಿಗೆ ಇಂದು ಮಾಸ್ಕ್, ಸ್ಯಾನಿಟೈಜರ್ ವಿತರಿಸಲಾಯಿತು.

"ನಗರ ಭಾಗಕ್ಕೆ ಹೆಚ್ಚು ಮಾಸ್ಕ ಗಳ ಅವಶ್ಯಕತೆ"
"17 ಸಾವಿರ ಲೀಟರ್ ಸ್ಯಾನಿಟೈಜರ್, 2 ಲಕ್ಷ ಮಾಸ್ಕ್ ಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿದ್ದೇವೆ. ಜಿಲ್ಲೆಯ ಎಲ್ಲಾ ತಾಲೂಕಿನ ನಗರ ವ್ಯಾಪ್ತಿಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ವಿತರಣೆಯಾಗಲಿದೆ. ನಗರ ಪ್ರದೇಶದಲ್ಲಿ ಪ್ರತಿ ಮನೆಗೂ ಸ್ಯಾನಿಟೈಜರ್, ಮಾಸ್ಕ್ ತಲುಪಲಿದೆ
ಗ್ರಾಮೀಣ ಭಾಗದಲ್ಲಿ ಜನರು ಆರೋಗ್ಯವಾಗಿದ್ದಾರೆ. ಹಾಗಾಗಿ ಅವರಿಗೆ ಹೆಚ್ಚು ಅವಶ್ಯಕವಿಲ್ಲ ಎಂದು ವಿತರಿಸಿಲ್ಲ. ಗ್ರಾಮಾಂತರ ಭಾಗದ ಜನರು ತಪ್ಪು ತಿಳಿದುಕೊಳ್ಳುವುದು ಬೇಡ" ಎಂದು ತಿಳಿಸಿದ್ದಾರೆ ಡಿ.ಕೆ.ಶಿವಕುಮಾರ್.

ಸಿಎಂಗೆ ಅಭಿನಂದನೆ ಸಲ್ಲಿಸಿದ ಡಿಕೆಶಿ
ರಾಮನಗರ ರೇಷ್ಮೆ ಮಾರ್ಕೆಟ್ ನಲ್ಲಿ ರೈತರ ಜನಜಂಗುಳಿ ಇರುವ ಕುರಿತು ಮಾತನಾಡಿದ ಅವರು, "ಅಲ್ಲಿ ಯಾವುದೇ ಸಮಸ್ಯೆ ಇಲ್ಲ. ಅಧಿಕಾರಿಗಳು ಮುಂಜಾಗ್ರತೆ ವಹಿಸುತ್ತಾರೆ. ಸಿಎಂ ಗೆ ಮಾರ್ಕೆಟ್ ಓಪನ್ ಮಾಡಲು ನಾನೇ ಸಲಹೆ ಕೊಟ್ಟಿದ್ದೆ. ಮಾರುಕಟ್ಟೆ ತೆರೆದಿದ್ದಕ್ಕೆ ಯಡಿಯೂರಪ್ಪ ಅವರಿಗೆ ಅಭಿನಂದಿಸುತ್ತೇನೆ. ರೈತರು ಮುಂಜಾಗ್ರತೆಯಿಂದ ವ್ಯಾಪಾರ ಮಾಡುತ್ತಾರೆ" ಎಂದು ತಿಳಿಸಿದರು.

"ಸರ್ಕಾರಕ್ಕೆ ಸಹಕಾರ ನೀಡಲು ಸಿದ್ಧ"
"ಕೊರೊನಾ ವಿಚಾರವಾಗಿ ನಮ್ಮ ಪಕ್ಷ ರಾಷ್ಟ್ರ ಮಟ್ಟದಲ್ಲಿ ತನ್ನದೇ ನಿಲುವು ತೆಗೆದುಕೊಂಡಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಹಕಾರ ಕೊಡಲು ನಾವು ಸಿದ್ಧ. ಸರ್ಕಾರಕ್ಕೆ ಅನೇಕ ಸಲಹೆ ಕೊಟ್ಟಿದ್ದೇವೆ. ರೈತರು, ಕಾರ್ಮಿಕರು, ಉದ್ಯಮಿಗಳ ವಿಚಾರವಾಗಿ ಸಲಹೆ ನೀಡಿದ್ದೇವೆ" ಎಂದು ಹೇಳಿದರು.

ದೇಶಪಾಂಡೆ ನೇತೃತ್ವದಲ್ಲಿ ತಂಡ ರಚನೆ
"ಕೊರೊನಾ ಸಲುವಾಗಿ ಕಾಂಗ್ರೆಸ್ ಪಕ್ಷದಿಂದ ವಿಶೇಷ ತಂಡ ರಚನೆಯಾಗುತ್ತಿದೆ. ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ ತಂಡ ರಚನೆಯಾಗುತ್ತಿದೆ. ದೇಶದ ಆರ್ಥಿಕತೆಯ ಬಗ್ಗೆ ಸಲಹೆಗಳನ್ನು ಕೊಟ್ಟಿದ್ದೇವೆ" ಎಂದು ತಿಳಿಸಿದ್ದಾರೆ.












Click it and Unblock the Notifications