ಯುಪಿಎಸ್ಸಿ ಪರೀಕ್ಷೆಯಲ್ಲಿ 115ನೇ ಸ್ಥಾನ ಗಳಿಸಿದ ಕನಕಪುರದ ಯತೀಶ್: ಡಿಕೆಶಿ ಅಭಿನಂದನೆ
ರಾಮನಗರ, ಅಕ್ಟೋಬರ್ 1: ಕೇಂದ್ರ ಲೋಕಸೇವಾ ಆಯೋಗದ 2020ನೇ ಸಾಲಿನ ನಾಗರಿಕಾ ಸೇವಾ ಪರೀಕ್ಷೆಯಲ್ಲಿ ಕನಕಪುರದ ಯತೀಶ್. ಆರ್ ರಾಜ್ಯಕ್ಕೆ 2ನೇ ಹಾಗೂ ದೇಶದಲ್ಲಿ 115ನೇ ಸ್ಥಾನ ಪಡೆದಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ಯುವಕ ಯತೀಶ್. ಆರ್ ಸಾಧನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದು, ಕನಕಪುರದ ಯತೀಶ್. ಆರ್. ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ, ನಮ್ಮ ತಾಲೂಕು ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಭವಿಷ್ಯದಲ್ಲಿ ದೇಶ ಸೇವೆಯ ಅಮೂಲ್ಯ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜನರ ಹಿತಕ್ಕಾಗಿ ಶ್ರಮಿಸಲಿ ಎಂದು ಡಿಕೆಶಿ ಹಾರೈಸಿದ್ದಾರೆ.
ಮೂಲತಃ ಇಂಜಿನಿಯರ್ ಪದವಿ ಮಾಡಿರುವ ಯತೀಶ್ 2017ರಿಂದ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು ಎಂದು ತಿಳಿಯಿತು. ಅವರ ಸುದೀರ್ಘ ಪರಿಶ್ರಮಕ್ಕೆ ಈಗ ತಕ್ಕ ಪ್ರತಿಫಲ ಸಿಕ್ಕಿದೆ, ಅವರ ಮುಂದಿನ ವೃತ್ತಿ ಜೀವನ ಯಶಸ್ವಿಯಾಗಲಿ. ಅವರ ಸೇವೆಯಿಂದ ಜನರಿಗೆ ಒಳಿತಾಗಲಿ ಎಂದು ಡಿ.ಕೆ. ಶಿವಕುಮಾರ್ ಹಾರೈಸಿದರು.

ಯತೀಶ್ ಸಾಧನೆ ಯುವ ಸಮುದಾಯಕ್ಕೆ ಸ್ಫೂರ್ತಿ ತಂದಿದೆ. ಇವರಿಂದ ಮತ್ತಷ್ಟು ಯುವಕರು ಪ್ರೇರಿತರಾಗಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲಿ. ರಾಜ್ಯ ಹಾಗೂ ದೇಶಕ್ಕೆ ಉತ್ತಮ ಹೆಸರು ತರಲಿ ಎಂದರು ಹಾಗೂ ಕೇಂದ್ರ ಲೋಕಸೇವಾ ಆಯೋಗದ ಸಿವಿಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಕರ್ನಾಟಕದ ಎಲ್ಲ 18 ಅಭ್ಯರ್ಥಿಗಳಿಗೂ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರದ ರಾಧಾಕೃಷ್ಣ ಮತ್ತು ರಜನಿ ದಂಪತಿ ಪುತ್ರರಾದ ಯತೀಶ್ ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ವಿಷಯದಲ್ಲಿ ಪದವಿ ಪಡೆದ್ದಾರೆ.

2019ರಲ್ಲಿ ಐಪಿಎಸ್ಗೆ ಆಯ್ಕೆಯಾಗಿದ್ದರು. ಇದೀಗ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 115 ಶ್ರೇಣಿ ಪಡೆದಿದ್ದಾರೆ. ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ತರಬೇತಿ ಪಡೆದಿದ್ದಾರೆ. ಯತೀಶ್ರವರ ಈ ಸಾಧನೆ ರಾಜ್ಯ ಮತ್ತು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಇವರ ಯಶಸ್ಸಿನ ಹಾದಿ ಉಳಿದ ಯುವ ಜನಾಂಗಕ್ಕೂ ಸ್ಫೂರ್ತಿಯಾಗಲಿ ಎಂದು ಯತೀಶ್ ಕುಟುಂಬದವರು ಆಶಯ ವ್ಯಕ್ತಪಡಿಸಿದ್ದಾರೆ.
707ನೇ ಶ್ರೇಯಾಂಕ ಪಡೆದ ಹೊಸದುರ್ಗದ ಮಮತಾ
ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಇದೀಗ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೇವಪುರ ಬೋವಿಹಟ್ಟಿ ಗ್ರಾಮದ ಯುವತಿ ಜಿ. ಮಮತಾ 707ನೇ ಶ್ರೇಯಾಂಕ ಪಡೆದು ತೇರ್ಗಡೆಯಾಗುವ ಮೂಲಕ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಭೋವಿಹಟ್ಟಿ ಗ್ರಾಮದ ಗೋವಿಂದಪ್ಪ ಹಾಗೂ ಚಂದ್ರಮ್ಮ ದಂಪತಿಯ ಪುತ್ರಿ ಜಿ. ಮಮತಾ ಪ್ರಾಥಮಿಕ ಶಿಕ್ಷಣವನ್ನು ದೇವಪುರ ಗ್ರಾಮದಲ್ಲಿ ಪೂರೈಸಿ, ಶಿವಮೊಗ್ಗದಲ್ಲಿ ಪಿಯುಸಿ ಓದಿ, ಬಳಿಕ ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಶಿಕ್ಷಣ ಮುಗಿಸಿದ್ದಾರೆ.

2020ನೇ ಸಾಲಿನಲ್ಲಿ ಯುಪಿಎಸ್ಸಿ ತೇರ್ಗಡೆಯಾದ ಕನ್ನಡಿಗರು
ಅಕ್ಷಯ್ ಸಿಂಹ- 77ನೇ ಸ್ಥಾನ
ನಿಶ್ಚಯ ಪ್ರಸಾದ್- 130ನೇ ಸ್ಥಾನ
ಸಿರಿವೆನೆಲಾ- 204ನೇ ಸ್ಥಾನ
ಅನಿರುಧ್- ಗಂಗಾವರಂ 252ನೇ ಸ್ಥಾನ
ಸೂರಜ್. ಡಿ- 255ನೇ ಸ್ಥಾನ
ನೇತ್ರಾ ಮೇಟಿ- 326ನೇ ಸ್ಥಾನ
ಮೇಘಾ ಜೈನ್- 354ನೇ ಸ್ಥಾನ
ಪ್ರಜ್ವಲ್- 367ನೇ ಸ್ಥಾನ
ಸಾಗರ್. ಎ. ವಾಡಿ- 385ನೇ ಸ್ಥಾನ
ನಾಗರೋಜೆ ಶುಭಂ ಬಾವುಸಾಬ್- 453ನೇ ಸ್ಥಾನ
ಶಕೀರ್ ಅಹಮದ್- 583ನೇ ಸ್ಥಾನ
ಪ್ರಮೋದ್ ಆರಾಧ್ಯ- 601ನೇ ಸ್ಥಾನ
ಸೌರಭ್- 725ನೇ ಸ್ಥಾನ
ವೈಶಾಖ ಬಾಗಿ- 744ನೇ ಸ್ಥಾನ
ಸಂತೋಷ್. ಎಚ್- 751ನೇ ಸ್ಥಾನ












Click it and Unblock the Notifications