ಕನಕಪುರ; ಸರಣಿ ಅಪಘಾತಕ್ಕೆ ಇಬ್ಬರು ಬಲಿ, ಇಬ್ಬರಿಗೆ ಗಂಭೀರ ಗಾಯ
ರಾಮನಗರ, ಅಕ್ಟೋಬರ್ 24: ಕಾರು ಡಿಕ್ಕಿ ಹೊಡೆದು ಓರ್ವ ಬಲಿಯಾದರೆ, ಅಪಘಾತ ನೋಡಲು ಗುಂಪು ಸೇರಿದ್ದ ಜನರ ಮೇಲೆ ಲಾರಿ ಹರಿದ ಪರಿಣಾಮ ಮತ್ತೋರ್ವ ಬಲಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು - ಕೋಳ್ಳೆಗಾಲ ಹೆದ್ದಾರಿಯ ಅಚ್ಚಲು ಗ್ರಾಮದಲ್ಲಿ ಅ.23ರಂದು ನಡೆದಿದೆ.
ಕಾರು ಡಿಕ್ಕಿಗೆ ಬಲಿಯಾದವ ಬಳೆಬಸಪ್ಪನದೊಡ್ಡಿ ಗ್ರಾಮದ ಸಂಪಂಗಿ ರಾಮೇಗೌಡ ಎನ್ನಲಾಗಿದೆ. ಲಾರಿ ಹರಿದು ಪ್ರಾಣ ಕಳೆದುಕೊಂಡವರನ್ನು ಅಚ್ಚಲು ಗ್ರಾಮದ ಸುರೇಶಾಚಾರ್ ಎಂದು ಗುರುತಿಸಲಾಗಿದೆ.
ಸಾತನೂರ್ ಬಳಿಯ ಅಚ್ಚಲು ಗೇಟ್ ಬಳಿ ರಸ್ತೆ ದಾಟುತ್ತಿದ್ದ ಸಂಪಂಗಿ ರಾಮೇಗೌಡ ಎನ್ನುವವರಿಗೆ ಕನಕಪುರದ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅದದೇ ಸಮಯ, ಕಾರು ಅಪಘಾತವಾದುದನ್ನು ನೋಡುತ್ತಾ ರಸ್ತೆಯ ಮೇಲೆ ನಿಂತಿದ್ದ ಗುಂಪಿನ ಮೇಲೆ ವಾಟರ್ ಟ್ಯಾಂಕ್ ಲಾರಿ ನುಗ್ಗಿದ ಪರಿಣಾಮ ಅಚ್ಚಲು ಗ್ರಾಮದ ಸುರೇಶಾಚಾರ್ ಬಲಿಯಾಗಿದ್ದು, ಇನ್ನಿಬ್ಬರು ಅಪರಿಚಿತರು ಸ್ಥಿತಿ ಗಂಭೀರವಾಗಿದೆ. ಅವರನ್ನು ಕನಕಪುರ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ.

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಾತನೂರು ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications