ಮಳೆಯಲ್ಲೂ ಮುಂದುವರೆದ ಟೊಯೋಟಾ ಕಾರ್ಮಿಕರ ಹೋರಾಟ
ರಾಮನಗರ, ಜನವರಿ 06: ಭಾರಿ ಮಳೆಯ ನಡುವೆಯೋ ಬಿಡದಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಘಟಕದ ಕಾರ್ಮಿಕರು ಹೋರಾಟವನ್ನು ಮುಂದುವರೆಸಿದ್ದಾರೆ. ಕಾರ್ಮಿಕರು ನಡೆಸುತ್ತಿರುವ ಹೋರಾಟ 59ನೇ ದಿನಕ್ಕೆ ಕಾಲಿಟ್ಟಿದೆ.
ಬುಧವಾರ ಸುರಿದ ಮಳೆಯನ್ನು ಲೆಕ್ಕಿಸದೆ ಮಳೆಯಲ್ಲಿ ನೆನೆಯುತ್ತಲೇ ಆಡಳಿತ ವರ್ಗ ಹಾಗೂ ಸರ್ಕಾರದ ವಿರುದ್ಧ ಕಾರ್ಮಿಕರು ತಮ್ಮ ಆಕ್ರೋಶವನ್ನು ಹೊರಹಾಕಿದರು. ಕಾರ್ಮಿಕರ ಹೋರಾಟ ಎರಡು ತಿಂಗಳಿನಿಂದ ನಡೆಯುತ್ತಿದ್ದರೂ ಕಾರ್ಖಾನೆಯ ಆಡಳಿತ ಮಂಡಳಿ, ಜಿಲ್ಲಾಡಳಿತ ಹೋರಾಟಕ್ಕೆ ಮಣಿಯುತ್ತಿಲ್ಲ.
ಟೊಯೋಟಾ ಘಟಕದ ಕಾರ್ಮಿಕರ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ನಾಡಿನ ಹಲವು ಗಣ್ಯರು ಕಾರ್ಮಿಕ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಕಾರ್ಮಿಕರ ಹೋರಾಟದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಬುಧವಾರ ಪಾಲ್ಗೊಂಡಿದ್ದರು. ಕನಾರ್ಟಕ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮಧ್ಯಸ್ಥಿಕೆವಹಿಸಿ ಶೀಘ್ರವಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು.
"59 ದಿನದಿಂದ ನಡೆಸುತ್ತಿರುವ ಹೋರಾಟ ಕೇವಲ ಟೊಯೋಟಾ ಕಾರ್ಮಿಕರ ಸಮಸ್ಯೆ ಅಲ್ಲಾ. ಇದು ಇಡೀ ದೇಶದ ಕಾರ್ಮಿಕರ ಸಮಸ್ಯೆ. ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳ ಈ ಧೋರಣೆಯನ್ನು ತಡೆಯಲು ಸೂಕ್ತ ಕಾನೂನನ್ನು ಜಾರಿಗೊಳಿಸಬೇಕು" ಎಂದು ಸರ್ಕಾರವನ್ನು ರವಿಕೃಷ್ಣಾ ರೆಡ್ಡಿ ಆಗ್ರಹಿಸಿದರು.
"ರಾಜಕರಣಿಗಳು ಹಾಗೂ ಸರ್ಕಾರದ ಮುಖ್ಯಮಂತ್ರಿ, ಕಾರ್ಮಿಕ ಸಚಿವರು ಕಂಪನಿ ಮಾಲೀಕರಿಗೆ ಬುದ್ಧಿ ಹೇಳಿ, ಕಾರ್ಮಿಕರು ಮತ್ತು ಕಂಪನಿಯ ಅಡಳಿತ ಮಂಡಳಿ ನಡುವಿನ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಸಂಪೂರ್ಣ ಬೆಂಬಲ ಕಾರ್ಮಿಕ ಹೋರಾಟಕ್ಕೆ ಇದೆ" ಎಂದು ಹೇಳಿದರು.












Click it and Unblock the Notifications