ಎನ್ಕೌಂಟರ್ ಮಾಡುವ ಕಾಲ ಸನ್ನಿಹಿತ: ಅಶ್ವತ್ಥ್ ನಾರಾಯಣ ಎಚ್ಚರಿಕೆ
ರಾಮನಗರ, ಜುಲೈ, 29: ರಾಜ್ಯದಲ್ಲಿ ಕೆಲವರು ಜನರ ತಾಳ್ಮೆಯನ್ನು ಪ್ರಚೋಧಿಸುವ ಕೆಲಸ ಮಾಡುತ್ತಿದ್ದಾರೆ. ಅತಂವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ದೃಢ ನಿರ್ಧಾರ ಮಾಡಿದೆ. "ಕೊಲೆಗಡುಕರನ್ನು ಹುಡುಕಿ ಎನ್ಕೌಂಟರ್ ಮಾಡುವ ಕಾಲ ಸನ್ನಿಹಿತವಾಗಿದೆ" ಎಂದು ರಾಮನಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಸಂದೇಶ ರವಾನಿಸಿದರು.
ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಗಾಳಿಪಟ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಚಾಲನೆ ನೀಡಿದ ನಂತರ ಮಾತನಾಡಿ, "ಯಾವುದೇ ಕಾರಣಕ್ಕೂ ಕೊಲೆಗಡುಕರರನ್ನು ಸುಮ್ಮನೆ ಬಿಡುವ ಪ್ರಶ್ನೆಯಿಲ್ಲ". ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಎಂದರು.
"ಕರಾವಳಿ ಭಾಗದಲ್ಲಿ ಪ್ರವೀಣ್ ಹತ್ಯೆಯ ಘಟನೆ ಮಾಸುವ ಮೂದಲೇ ಮುಸ್ಲಿಂ ಯುವಕನ ಹತ್ಯೆ ಆಗಿದೆ. ಇದು ನಿಜಕ್ಕೂ ಕೂಡ ಕೆಲವರು ಜನರ ತಾಳ್ಮೆಯನ್ನು ಪ್ರಚೋಧಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ಮುಖ್ಯಮಂತ್ರಿಗಳು ಹಾಗೂ ನಮ್ಮ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಎನ್ಕೌಂಟರ್ ಮಾಡುವುದಕ್ಕೂ ನಾವು ತಯಾರಿದ್ದೇವೆ ಎಂದು ತಿಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಹತ್ಯೆಕೋರರಿಗೆ ನಡುಕ ಹುಟ್ಟಿಸುವಂತಹ ಕೆಲಸ ಆಗುತ್ತದೆ" ಎಂದು ಸಚಿವ ಅಶ್ವತ್ಥ್ ನಾರಾಯಣ ಕಿಡಿಕಾರಿದರು.
ಯಾವುದೇ ವ್ಯಕ್ತಿ ಕನಸು ಮನಸ್ಸಿನಲ್ಲೂ ಕೊಲೆ ಮಾಡುವ ಬಗ್ಗೆ ಯೋಚನೆ ಸಹ ಮಾಡಬಾರದು. ತೀವ್ರವಾಗಿ ಕ್ರಮ ಜರುಗಿಸುವಂತಹ ಕೆಲಸಗಳನ್ನ ಮಾಡಿ ಜಾಗೃತಿ ಮೂಡಿಸುತ್ತೇವೆ. ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ಗಳ ಜೊತೆಗೆ ಇನ್ನು ಹಲವು ಎಚ್ಚರಿಕೆ ಕ್ರಮಗಳನ್ನ ಮಾಡುವ ಮೂಲಕ ನಮ್ಮ ಗೃಹ ಇಲಾಖೆಯಿಂದ ಅಮಾಯಕರ ಜೀವ ರಕ್ಷಣೆ ಮಾಡಲಾಗುತ್ತಿದೆ. ಪ್ರವೀಣ್ ನೆಟ್ಟಾರು ಅವರ ಮನೆಗೆ ಬಂದಂತಹ ಪರಿಸ್ಥಿತಿ ಬೇರೆಯವರಿಗೆ ಬರದಂತಹ ಕ್ರಮ ಆಗುತ್ತದೆ ಎಂದರು.

ಕಾರ್ಯಕರ್ತರ ಆಕ್ರೋಶವನ್ನು ಗೌರವಿಸುವಂತೆ ಕ್ರಮ
ಅಮಾಯಕರ ಹತ್ಯೆಯಿಂದ ತುಂಬಾ ನೋವಾಗಿದೆ. ಹಾಗಾಗಿ ಕಾರ್ಯಕರ್ತರು ಆಕ್ರೋಶಕ್ಕೆ ಒಳಗಾಗಿರುತ್ತಾರೆ. ಕೊಲೆಯಂತಹ ಪ್ರಕರಣಗಳು ನಡೆದಾಗ ಬಂಧಿಸುವಂತಹ ಕೆಲಸಗಳು ಆಗಿವೆ, ಈ ಬಾರಿಯೂ ಕ್ರಮ ಕೈಗೊಂಡಿದ್ದೇವೆ. ನಮ್ಮ ಸರ್ಕಾರದ ಹಾಗೂ ಗೃಹ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕಾರ್ಯಕರ್ತರ ಆಕ್ರೋಶವನ್ನು ಗೌರವಿಸುವಂತೆ ತೀವ್ರವಾಗಿ ಕ್ರಮ ಜರುಗಿಸುತ್ತೇವೆ. ಕೊಲೆಯಲ್ಲಿ ಭಾಗಿಯಾಗಿದ್ದವರನ್ನು ಈಗಾಗಲೇ ಬಂಧಿಸುವಂತಹ ಕಾರ್ಯ ಆಗಿದೆ. ಜನರು ಮತ್ತು ಕಾರ್ಯಕರ್ತರ ಅಪೇಕ್ಷೆಯಂತೆ ಆರೋಪಿಗಳ ವಿರುದ್ಧ ತೀವ್ರವಾಗಿ ಕ್ರಮ ಜರುಗಿಸುವಂತಹ ಕೆಲಸ ಆಗಲಿದೆ ಎಂದರು

ಕಾಂಗ್ರೆಸ್ ವಿರುದ್ಧ ಅಶ್ವತ್ಥ್ ನಾರಾಯಣ ಕಿಡಿ
ಪಿಎಪ್ಐ ಸಂಘಟನೆಗಳ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನು ಕೈಬಿಟ್ಟ ಕಾಂಗ್ರೆಸ್ ಪಕ್ಷದವರು ಮತೀಯ ಸಂಘಟನೆಗಳನ್ನು ನಿಷೇಧಿಸುವಂತೆ ಹೇಳುವ ಯಾವ ನೈತಿಕತೆ ಇದೆ. ಕಾಂಗ್ರೆಸ್ ಪಕ್ಷದವರಿಗೂ, ಸಮಾಜ ದ್ರೋಹಿಗಳಿಗೂ ವ್ಯತ್ಯಾಸವಿಲ್ಲ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು. ನೈತಿಕತೆ ಇಲ್ಲದ ಯಾವುದಾದರೂ ಒಂದು ಪಕ್ಷ ಇದ್ರೆ ಅದು ಕಾಂಗ್ರೆಸ್ ಪಕ್ಷ. ಸಮಾಜಕ್ಕೆ ಈ ರೀತಿಯ ಪರಿಸ್ಥಿತಿ ಬರೋದಕ್ಕೆ ಮುಖ್ಯ ಕಾರಣಕರ್ತರು ಕಾಂಗ್ರೆಸ್ನವರೇ ಎಂದು ಆರೋಪಿಸಿದರು. ಅಗಲೂ ಒಂದು ಸಮಾಜದ ಸೃಷ್ಟೀಕರಣದ ರಾಜಕಾರಣ ಮಾಡಿಕೊಂಡು ಬಂದವರು ಕಾಂಗ್ರೆಸ್ ಪಕ್ಷದವರು. ಈ ಘಟನೆ ವಿಚಾರದಲ್ಲಿ ಮಾತಾಡುವ ಯಾವುದೇ ನೈತಿಕತೆ ಅವರಿಗೆ ಇಲ್ಲ. ಎಂದು ಸಚಿವ ಅಶ್ವತ್ಥ್ ನಾರಾಯಣ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

'ಕರ್ನಾಟಕ ಇತರ ರಾಜ್ಯಗಳಿಗೂ ಮಾದರಿಯಾಗುತ್ತದೆ'
ಉತ್ತರಪ್ರದೇಶಕ್ಕಿಂತ ಒಳ್ಳೆಯ ಮಾಡಲ್ ಸರ್ಕಾರ ಮಾಡುತ್ತೇವೆ. ಕರ್ನಾಟಕ ಮುಂದುವರೆದ ರಾಜ್ಯ, ಪ್ರಗತಿಪರ ರಾಜ್ಯ, ಎಲ್ಲರಿಗೂ ಮಾದರಿ ರಾಜ್ಯವಾಗಿರುತ್ತದೆ. ರಾಜ್ಯಕ್ಕೆ ಯೋಗಿ ಸರ್ಕಾರ ಮಾದರಿಯಲ್ಲ. ಕರ್ನಾಟಕ ಸರ್ಕಾರ ಇತರರಿಗೆ ಮಾದರಿಯಾಗುತ್ತದೆ. ಯೋಗಿ ಸರ್ಕಾರಕ್ಕಿಂತಲೂ 5 ಹೆಜ್ಜೆ ಮುಂದೆಹೋಗಿ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಕರ್ನಾಟಕ ಏನು ಅನ್ನುವುದನ್ನು ನಾವು ತೋರಿಸುತ್ತೇವೆ ಎಂದು ಚಾಲೆಂಜ್ ಮಾಡಿದರು.

ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದ ಸಚಿವ
ಡಿಕೆಶಿಯನ್ನು ಯಾರು ಖೆಡ್ಡಕ್ಕೆ ಕೆಡುಗುವುದಿಲ್ಲ ಅವರೇ ಕೆಡವಿಕೊಂಡಿದ್ದಾರೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.
"ಯಾರೂ ಯಾರನ್ನೂ ಕೆಡವುದೇನಿಲ್ಲ. ಎಲ್ಲಾ ಅವರವರೇ ಕೆಡವಿಕೊಂಡಿದ್ದಾರೆ. ಅವರವರ ನಡವಳಿಕೆ ಅವರವರ ಭವಿಷ್ಯವನ್ನ ನಿರ್ಧಾರ ಮಾಡುತ್ತದೆ. ಏನೇನು ಕರ್ಮ ಮಾಡಿರುತ್ತೇವೆ ಅದನ್ನ ಅನುಭವಿಸುತ್ತೇವೆ ಅಷ್ಟೇ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.












Click it and Unblock the Notifications