ಆಗಷ್ಟೇ ಡ್ರಾ ಮಾಡಿದ್ದ ಗರಿಗರಿ ನೋಟುಗಳ ಲಪಟಾಯಿಸಿದ ಕಳ್ಳರು
ಕನಕಪುರ, ನವೆಂಬರ್ 27: ವ್ಯಕ್ತಿಯೊಬ್ಬರು ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಕಳ್ಳರು ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ನಗರದ ಬ್ಯಾಂಕೊಂದರಿಂದ 4 ಲಕ್ಷ ರೂಪಾಯಿಗಳನ್ನು ಡ್ರಾ ಮಾಡಿಕೊಂಡು ಬರುತ್ತಿದ್ದ ನಿವೃತ್ತ ಲೈಬ್ರೆರಿಯನ್ ತಿಮ್ಮಗೌಡ ಎಂಬುವರಿಂದ ಹಣ ಇದ್ದ ಬ್ಯಾಗನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ನಗರದ ರೂರಲ್ ಕಾಲೇಜಿನ ಮುಂಭಾಗ ಘಟನೆ ನಡೆದಿದ್ದು, ಕಳೆದುಕೊಂಡ ಆ ಹಣವು ಕಾಲೇಜಿಗೆ ಸಂಬಂಧಿಸಿದ ಸಂಬಳದ ಹಣ ಎನ್ನಲಾಗಿದೆ. ಇಬ್ಬರು ಸಿಬ್ಬಂದಿಗೆ ಮೂರು ತಿಂಗಳ ಸಂಬಳವನ್ನು ನಿನ್ನೆ ಕಾಲೇಜು ಆಡಳಿತ ಮಂಡಳಿ ಅವರವರ ಖಾತೆಗೆ ಹಾಕಿತ್ತು. ಇಂದು ತಮ್ಮ ಸಂಬಳದ ಹಣ ಡ್ರಾ ಮಾಡಿಕೊಳ್ಳಲು ಇಬ್ಬರು ಕನಕಪುರದಲ್ಲಿನ ಬ್ಯಾಂಕ್ ಗೆ ಹೋಗಿದ್ದ ಸಂದರ್ಭ, ಬ್ಯಾಂಕ್ ಗೆ ಬಂದಿದ್ದ ರಿಟೈರ್ಡ್ ಲೈಬ್ರೇರಿಯನ್ ತಿಮ್ಮಗೌಡ, ತಾವೇ ಇಬ್ಬರ ಹಣ ತರುವುದಾಗಿ ಹೇಳಿ ಚೆಕ್ ಪಡೆದು ಅವರನ್ನು ಕಳುಹಿಸಿದ್ದರು. ನಂತರ ನಾಲ್ಕು ಲಕ್ಷ ಹಣ ಡ್ರಾ ಮಾಡಿಕೊಂಡು ನಡೆದುಕೊಂಡು ಹೋಗುವ ವೇಳೆ ಬೈಕ್ ನಲ್ಲಿ ಬಂದ ಕಳ್ಳರು ಹಣ ಕಿತ್ತೊಯ್ದಿದ್ದಾರೆ.

ತಿಮ್ಮಗೌಡ ಪ್ರಶ್ನೆ ಪತ್ರಿಕೆ ಇದ್ದ ಬ್ಯಾಗ್ ವೊಂದರಲ್ಲಿ ಹಣ ತರುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಕಾಲೇಜು ಆವರಣ ಪ್ರವೇಶಿಸಲಿದ್ದರು. ಅದೇ ಸಮಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.












Click it and Unblock the Notifications