ಟೊಯೊಟಾ ಕಾರ್ಮಿಕರ ಪ್ರತಿಭಟನೆಗೆ ರಾಜ್ಯ ರೈತ ಸಂಘದ ಸಾಥ್
ರಾಮನಗರ, ನವೆಂಬರ್ 12: ಏಷ್ಯಾದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆ ನೌಕರರ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಕಾರ್ಮಿಕರು ಪಟ್ಟು ಬಿಡದೆ ಮೂರನೇ ದಿನವು ಪ್ರತಿಭಟನೆಯನ್ನು ಮುಂದುವರೆಸಿದ್ದು, ಪ್ರತಿಭಟನೆಗೆ ಇಂದು ರಾಜ್ಯ ರೈತ ಸಂಘ ಸಾಥ್ ನೀಡಿದೆ. ರೈತ ಸಂಘದ ನೂರಾರು ರೈತರು ಗುರುವಾರ ಧರಣಿಯಲ್ಲಿ ಭಾಗವಹಿಸಿ ತಮ್ಮ ನೈತಿಕ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ರೈತ ಮುಖಂಡರು, ಬಹಳ ಹಿಂದಿನಿಂದಲೂ ಬಹುರಾಷ್ಟ್ರೀಯ ಕಂಪನಿಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಅಳವಡಿಸಿಕೊಂಡು, ಕಾರ್ಮಿಕರನ್ನು ಶೋಷಣೆ ಮಾಡುತ್ತಿವೆ. ನಮ್ಮನ್ನು ಆಳುವ ಜನರು ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದು ಅವರ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ಆರೋಪಿಸಿದರು.

ಬಹುರಾಷ್ಟ್ರೀಯ ಕಂಪನಿಗಳು ಕಾರ್ಮಿಕರನ್ನು ಪ್ರಾಣಿಗಳಂತೆ ದುಡಿಸಿಕೊಳ್ಳುತ್ತಿವೆ. ಅಲ್ಲದೇ ಕಂಪನಿಗಳು ಕಾರ್ಮಿಕರಲ್ಲಿನ ಒಗ್ಗಟ್ಟನ್ನು ಸಹಿಸುವುದಿಲ್ಲ, ಬಂಡವಾಳಶಾಹಿಗಳು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಶ್ರಮಿಕ ವರ್ಗ ಮೊದಲು ತಮ್ಮ ಒಗ್ಗಟ್ಟು ಕಾಪಾಡಿಕೊಂಡರೆ ಕಾರ್ಮಿಕರ ಹೋರಾಟಕ್ಕೆ ಜಯ ಖಂಡಿತ ಸಿಗುತ್ತದೆ ಎಂದು ಕಾರ್ಮಿಕರಿಗೆ ಕಿವಿ ಮಾತು ಹೇಳಿದರು.












Click it and Unblock the Notifications