ಆನೆ ದಾಳಿಗೆ ನೊಂದವರಿಂದ ಅರಣ್ಯಾಧಿಕಾರಿಗಳ ವಾಹನ ತಡೆದು ಪ್ರತಿಭಟನೆ
ರಾಮನಗರ, ಅಕ್ಟೋಬರ್ 10: ಕಾಡಾನೆಗಳ ನಿರಂತರ ದಾಳಿಯಿಂದ ಬೇಸತ್ತ ಜನರು ಗ್ರಾಮಕ್ಕೆ ಬಂದ ಅರಣ್ಯಾಧಿಕಾರಿಗಳ ವಾಹನ ತಡೆದು ಘೇರಾವ್ ಹಾಕಿದ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಸಿಂಗರಾಜಿಪುರ ಗ್ರಾಮದಲ್ಲಿ ಇಂದು ನಡೆದಿದೆ.
ರೈತರು ವರ್ಷವಿಡೀ ಶ್ರಮದಿಂದ ಬೆಳೆಸಿದ್ದ ಬೆಳೆ ಇನ್ನೇನು ಕೈ ಬಂತು ಅನ್ನುವಷ್ಟರಲ್ಲೇ ಕಾಡಾನೆಗಳು ದಾಳಿ ನಡೆಸಿ ಅವುಗಳನ್ನು ಸಂಪೂರ್ಣ ನಾಶಗೊಳಿಸುತ್ತಿವೆ. ಆನೆ ದಾಳಿಯಿಂದ ನಷ್ಟಕ್ಕೊಳಗಾದ ಸ್ಥಳ ವೀಕ್ಷಣೆಗೆ ಇಂದು ಬಂದ ಅರಣ್ಯಾಧಿಕಾರಿಗಳ ಜೀಪ್ ಮುಂಭಾಗ ಮಲಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ವಿರೂಪಾಕ್ಷಪುರ, ಬಿವಿ ಹಳ್ಳಿ ಕೊಡಂಬಳ್ಳಿ, ಸಿಂಗರಾಜಿಪುರ, ಹನಿಯೂರು, ಕಬ್ಬಾಳು, ಸಾತನೂರು ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಗಳಲ್ಲಿ ನಿರಂತರವಾಗಿ ಕಾಡಾನೆಗಳು ದಾಳಿ ಮಾಡಿ ನೂರಾರು ಬಾಳೆಗಿಡ, ಮಾವಿನ ಮರ, ತೆಂಗಿನ ಮರಗಳು ಸೇರಿದಂತೆ ಇನ್ನಿತರ ಬೆಳೆಗಳನ್ನು ನಾಶ ಮಾಡುತ್ತಿರುವುದರಿಂದ ರೈತರು ಹೈರಾಣಾಗಿದ್ದಾರೆ.

ಕಾವೇರಿ ವನ್ಯ ಜೀವಿ ವಲಯದ ಮುತ್ತತಿ ಅರಣ್ಯ ಪ್ರದೇಶದಿಂದ ಬಂದಿರುವ ಆನೆಗಳ ಹಿಂಡು ಕಬ್ಬಾಳು ವಲಯದಲ್ಲಿ ಬೀಡುಬಿಟ್ಟಿದೆ. ಪದೇ ಪದೇ ಆನೆ ದಾಳಿ ನಡೆಸಿದ್ದರು ಕೂಡ ಅರಣ್ಯಾಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ ಎಂದು ರೈತರು ಆರೋಪಿಸಿದರು.

ರೈತರ ಮನವೊಲಿಸಲು ಪ್ರಯತ್ನ ನಡೆಸಿದ ಅರಣ್ಯಾಧಿಕಾರಿಗಳು, ಈ ವರ್ಷದ ಬೇಸಿಗೆ ಪ್ರಾರಂಭದಿಂದಲೂ ಸಾತನೂರು ಮತ್ತು ಚನ್ನಪಟ್ಟಣ ಅರಣ್ಯ ವಲಯದಲ್ಲಿ 45 ಆನೆಗಳು ಬೀಡುಬಿಟ್ಟಿದ್ದು, ಪದೇಪದೇ ರೈತರ ಜಮೀನಿಗೆ ನುಗ್ಗಿ ಫಸಲುನ್ನು ನಾಶ ಮಾಡುತ್ತಿವೆ. ಸೆ.06 ರಿಂದ ಇಂದಿನವರೆಗೆ ಸುಮಾರು 30 ಆನೆಗಳನ್ನು ಕಾವೇರಿ ವನ್ಯ ಜೀವಿ ವಲಯಕ್ಕೆ ಓಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನು ಕಬ್ಬಾಳು ವಲಯದಲ್ಲಿ 15 ಆನೆಗಳು ಉಳಿದುಕೊಂಡಿದ್ದು, ಅವುಗಳನ್ನು ಕಾಡಿಗೆ ಓಡಿಸಲು ಕಾರ್ಯಾಚರಣೆ ಮುಂದುವರೆದಿದೆ ಎಂದು ವಲಯ ಅರಣ್ಯಾಧಿಕಾರಿ ಮನ್ಸೂರು ಸ್ಪಷ್ಟಪಡಿಸಿದರು.












Click it and Unblock the Notifications