ಸಾವನದುರ್ಗದ ಲಕ್ಷೀನರಸಿಂಹಸ್ವಾಮಿ ದೇಗುಲದ ಹುಂಡಿಯಲ್ಲಿ 32 ಲಕ್ಷ ಸಂಗ್ರಹ
ಮಾಗಡಿ (ರಾಮನಗರ), ಜುಲೈ 26: ಮಾಗಡಿ ತಾಲೂಕಿನ ಪ್ರಸಿದ್ಧವಾದ ಸಾವನದುರ್ಗ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಹುಂಡಿಯಲ್ಲಿ ಈಗಾಗಲೇ ನಿಷೇಧವಾಗಿರುವ 1000 ಮತ್ತು 500 ಮುಖಬೆಲೆಯ ನೋಟುಗಳು ಆರು ಸಾವಿರ ರುಪಾಯಿಯಷ್ಟು ಪತ್ತೆಯಾಗಿವೆ.
1000 ಹಾಗೂ 500 ಮುಖಬೆಲೆಯ ಹಳೆ ನೋಟುಗಳನ್ನು ನಿಷೇಧಿಸಿ ಎರಡು ವರ್ಷ ಒಂಬತ್ತು ತಿಂಗಳು ಕಳೆದಿವೆ ಹಾಗೂ ಅಮಾನ್ಯಗೊಂಡ ನೋಟುಗಳನ್ನು ಸಂಗ್ರಹ ಎಂಬ ಕಾರಣಕ್ಕೆ ಒಂದೆರಡು ಇರಿಸಿಕೊಳ್ಳ ಬಹುದೇ ವಿನಾ ಅದಕ್ಕಿಂತ ಹೆಚ್ಚು ನೋಟು ತಮ್ಮ ಬಳಿ ಇಟ್ಟುಕೊಳ್ಳುವುದು ಅಪರಾಧ ಎಂದು ಘೋಷಣೆ ಮಾಡಿದ್ದರೂ ಕೆಲ ದೇವಾಲಯಗಳ ಹುಂಡಿಯಲ್ಲಿ ಅಮಾನ್ಯಗೊಂಡ ನೋಟುಗಳು ಸಿಗುತ್ತಿವೆ.
ಸಾವನದುರ್ಗದ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಹುಂಡಿ ಹಣವನ್ನು ಎಣಿಕೆ ಮಾಡುವ ವೇಳೆ 1 ಸಾವಿರ ಮುಖ ಬೆಲೆಯ 2 ನೋಟು ಹಾಗೂ 500 ಮುಖಬೆಲೆಯ 8 ಅಮಾನ್ಯಗೊಂಡ ಹಳೇ ನೋಟುಗಳು ಸೇರಿ, 6 ಸಾವಿರ ಮೌಲ್ಯದ ಹಣ ದೊರೆತಿವೆ.
ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ತಹಸೀಲ್ದಾರ್ ಸಮ್ಮುಖದಲ್ಲಿ ಹುಂಡಿ ಹಣದ ಎಣಿಕೆ ಕಾರ್ಯ ನಡೆಯಿತು. ಹುಂಡಿಯಲ್ಲಿ 32,50,045 ರುಪಾಯಿ ಹಣ ಸಂಗ್ರಹವಾಗಿದೆ. ಕಳೆದ ಬಾರಿ ಅಂದರೆ 8 ತಿಂಗಳ ಹಿಂದೆ ಸುಮಾರು 30,39,053 ರುಪಾಯಿ ಸಂಗ್ರಹವಾಗಿತ್ತು.
ಮುಜರಾಯಿ ನಿಯಾಮದ ಪ್ರಕಾರ ಹುಂಡಿಯಲ್ಲಿ ಸಂಗ್ರಹವಾಗಿರುವ ಹಣವನ್ನು ಎಣಿಕೆ ಮಾಡಲಾಗಿದೆ. ಈ ಬಾರಿ ಶಸ್ತ್ರಸಜ್ಜಿತ ಪೊಲೀಸರ ಬಂದೋಬಸ್ತ್ ನಲ್ಲಿ ಹಣ ಎಣಿಕೆ ನಡೆಸಿದ್ದು, ಎಸ್ ಬಿಐ ಬ್ಯಾಂಕ್ ನ ಸಿಬ್ಬಂದಿ ಹಾಜರಿದ್ದರು. ಸಂಗ್ರಹವಾದ ಹಣವನ್ನು ಸಂಜೆ 6 ಗಂಟೆಗೆ ಬ್ಯಾಂಕ್ ಗೆ ಜಮಾ ಮಾಡಲಾಗಿದೆ.
ಹುಂಡಿ ಹಣ ಎಣಿಕೆ ವೇಳೆ ಸಿಕ್ಕ 6 ಸಾವಿರ ಮೌಲ್ಯದ ನಿಷೇಧಿತ ನೋಟುಗಳನ್ನು ಮತ್ತೆ ಹುಂಡಿಯಲ್ಲಿ ಹಾಕಲಾಗಿದೆ.