ರಾಮನಗರ: ಅಕಾಲಿಕ ಮಳೆಗೆ ನಲುಗಿದ ರೈತರು, 27 ಕೋಟಿ ರೂ. ಮೌಲ್ಯದ ಬೆಳೆ ನಷ್ಟ
ರಾಮನಗರ, ನವೆಂಬರ್ 24: ಕೈಗೆ ಬಂದು ತುತ್ತು ಬಾಯಿಗೆ ಬರಲಿಲ್ಲ ಎಂಬಂತಹ ಸ್ಥಿತಿ ರೇಷ್ಮೆನಾಡು ರಾಮನಗರ ಜಿಲ್ಲೆಯ ರೈತರದ್ದಾಗಿದೆ. ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಅನ್ನದಾತ ತತ್ತರಿಸಿದ್ದು, ಕೈಗೆ ಬರಬೇಕಿದ್ದ ಫಸಲು ಕಣ್ಣ ಮುಂದೆಯೇ ನೆಲಕಚ್ಚುತ್ತಿದೆ. ಜಿಲ್ಲೆಯಲ್ಲಿ 41 ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ರಾಗಿ, ಭತ್ತ ಸೇರಿದಂತೆ ವಿವಿಧ ಬೆಳೆ ನಷ್ಟವಾಗಿದೆ.
ಜಿಲ್ಲೆಯಾದ್ಯಂತ ಸುರಿದ ಅಕಾಲಿಕ ಮಳೆಯಿಂದಾಗಿ ಕೋಟ್ಯಂತರ ಮೌಲ್ಯದ ಬೆಳೆ ನಷ್ಟ ಉಂಟಾಗಿದೆ. ಇನ್ನು ಕಳೆದ ಹದಿನೈದು ದಿನಗಳಿಂದ ಬೀಳುತ್ತಿರುವ ಭಾರಿ ಮಳೆಯಿಂದ ಕೆರೆ- ಕಟ್ಟೆಗಳು ಒಡೆದು ಅಪಾರ ಪ್ರಮಾಣದ ನೀರು ಕೃಷಿ ಜಮೀನಿಗೆ ನುಗ್ಗಿದೆ ಅಪಾರ ಬೆಳೆ ಹಾನಿ ಸಂಭವಿಸಿದೆ.
ಮಳೆಯಿಂದಾಗಿ ರಾಗಿ, ಭತ್ತ, ಮುಸುಕಿನ ಜೋಳ, ತೊಗರಿ, ರೇಷ್ಮೆ ಮತ್ತಿತರ ಬೆಳೆಗಳು ಮಣ್ಣು ಪಾಲಾಗುತ್ತಿವೆ ಎಂದು ರೈತರ ಆಳಲು ತೋಡಿಕೊಂಡಿದ್ದಾರೆ. ಅಲ್ಲದೇ ಗದ್ದೆ ಒಳಗೆ ಕಾಲಿಡಲು ಸಹ ತೊಂದರೆಯಾಗಿದ್ದು, ರಾಗಿ ಭತ್ತ ವಡೆ ಕಡೆದು ನೀರಿಗೆ ಬಿದ್ದು ಕೊಳೆಯುವ ಸ್ಥಿತಿಗೆ ತಲುಪಿದೆ.

ಶ್ರಮಪಟ್ಟು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ನೆರವಿಗೆ ಬರಬೇಕಾದ ಕೃಷಿ ಹಾಗೂ ಕಂದಾಯ ಇಲಾಖೆಯವರು ಮಳೆಯಿಂದಾದ ಬೆಳೆ ಹಾನಿ ಕುರಿತು ಸರ್ವೇಗೆ ಮುಂದಾಗಿಲ್ಲ ಎಂದು ರೈತಾಪಿ ವರ್ಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕೂಡಲೇ ರಾಮನಗರ ಜಿಲ್ಲಾಡಳಿತ ನಮ್ಮ ನೆರವಿಗೆ ಧಾವಿಸಿ ಪರಿಹಾರ ನೀಡದಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ 27 ಕೋಟಿ ರೂ. ಮೌಲ್ಯದ ಬೆಳೆ ಹಾನಿ
ಅಕಾಲಿಕ ಮಳೆಯ ವೈಪರೀತ್ಯದಿಂದಾಗಿ ಎಲ್ಲ ವಿಧದ ಬೆಳೆಗಳಿಗೂ ಮಾರಕವಾಗಿ ಪರಿಣಮಿಸಿದ್ದು ರೈತರು ಹೈರಾಣಾಗಿದ್ದಾರೆ. 41 ಸಾವಿರಕ್ಕೂ ಹೆಚ್ಚು ಹೆಕ್ಟೇರ್ನಲ್ಲಿ ರಾಗಿ ಬೆಳೆದಿದ್ದು, 178 ಹೆಕ್ಟೇರ್ ಪ್ರದೇಶದ ಭತ್ತ, 454 ಹೆಕ್ಟೇರ್ನ ಮುಸುಕಿನ ಜೋಳ, 370 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗಿತ್ತು.

ಇನ್ನು ಅತಿವೃಷ್ಟಿಯಿಂದಾಗಿ 41 ಸಾವಿರ ಹೆಕ್ಟೇರ್ನಲ್ಲಿ ಬೆಳೆದಿದ್ದ ಹೆಚ್ಚು ಪ್ರದೇಶದಲ್ಲಿದ್ದ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಬಿತ್ತನೆ ಮಾಡಿದ ಸುಮಾರು 58% ಬೆಳೆ ಹಾನಿಯಾಗಿದೆ. ಇನ್ನು ನವೆಂಬರ್ನಲ್ಲಿ ವಾಡಿಕೆಗಿಂತ 270 ಮಿಲಿಲೀಟರ್ ಹೆಚ್ಚು ಮಳೆ ಸುರಿದಿದೆ. ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸರ್ವೆಗೆ ಮುಂದಾಗಿದ್ದು, ಪ್ರಾಥಮಿಕ ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ರವಾನಿಸಿದ್ದೇವೆ. ಅಂದಾಜು 27 ಕೋಟಿಗೂ ಹೆಚ್ಚು ಬೆಳೆ ನಷ್ಟವಾಗಿದೆ ಎಂದು ರಾಮನಗರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಸೋಮಸುಂದ್ರ ತಿಳಿಸಿದರು.

ಒಟ್ಟಾರೆ ಹಿಂಗಾರು ಅವಧಿ ಮುಗಿದಿದ್ದರೂ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬೆಳೆಗಳು ನೆಲಕಚ್ಚಿದ್ದು, ಇದರಿಂದಾಗಿ ರೈತ ಸಮುದಾಯ ಆತಂಕಕ್ಕೀಡಾಗಿದೆ. ಮಳೆಹಾನಿ ಕುರಿತು ಸರ್ವೇಗೆ ಮುಂದಾಗಬೇಕಿದ್ದ ಅಧಿಕಾರಿಗಳು ಅವೈಜ್ಞಾನಿಕವಾಗಿ ಕೇವಲ ಪ್ರಾಥಮಿಕ ವರದಿ ಸಲ್ಲಿಸಿದೆ ಎಂದು ರಾಮನಗರ ಜಿಲ್ಲೆಯ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸರ್ಕಾರ ಅನ್ನದಾತನ ನೆರವಿಗೆ ಧಾವಿಸಬೇಕಿದೆ ಎಂಬುದು ರೈತಾಪಿ ವರ್ಗದ ಒತ್ತಾಸೆಯಾಗಿದೆ.












Click it and Unblock the Notifications