ರಾಮನಗರ: 2ಲಕ್ಷ ಮನೆಗೆ ನೀರಿನ ಸಂಪರ್ಕಕ್ಕೆ 2,000 ಕೋಟಿ ರೂ. ಖರ್ಚು
ರಾಮನಗರ, ಡಿಸೆಂಬರ್ 16: ಜಿಲ್ಲೆಯ ಎರಡು ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸಲು ನೀರಿನ ಸಂಪರ್ಕಕ್ಕಾಗಿ ಒಟ್ಟು 2,000 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ ಹೇಳಿದರು.
ಬಿಡದಿಯಲ್ಲಿ ಶುಕ್ರವಾರ ಯುವಜನ ಇಲಾಖೆಯಿಂದ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರಾಮನಗರ ಜಿಲ್ಲೆಯ 6 ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯಲಿರುವ 125 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಡಾ.ಸಿ ಎನ್ ಅಶ್ವಥ್ ನಾರಾಯಣ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ, ರಾಮನಗರ ಭೇಟಿಗೆ ಆಹ್ವಾನಿಸಿದ ಸಿ.ಎನ್. ಅಶ್ವಥ್ ನಾರಾಯಣ್
ಜಿಲ್ಲೆಯ ಎರಡು ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಲು ಒಟ್ಟು 2 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಅದರಲ್ಲಿ ಈಗಾಗಲೇ 1,300 ಕೋಟಿ ರೂ. ವ್ಯಯಿಸಿದ್ದು, ಇನ್ನೂ 500 ಕೋಟಿ ರೂ. ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ರಾಮನಗರ ಜಿಲ್ಲೆಯು ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎರಡನೇ ಜಿಲ್ಲೆಯಾಗಿದೆ. ಇಲ್ಲಿ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಬೇಕು ಎಂದರೆ, ಜನರು ಕೂಡ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.
ಅಭಿವೃದ್ಧಿ ಸಾಧಿಸಲು ಒಳ್ಳೆಯ ಗುಣಮಟ್ಟದ ಮೂಲ ಸೌಲಭ್ಯ ಇರಬೇಕು. ಹೀಗಾಗಿ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ರಾಜಕಾಲುವೆ, ತಡೆಗೋಡೆ, ಸೇತುವೆ, ಉದ್ಯಾನ, ಶೌಚಾಲಯ, ಸಮುದಾಯ ಭವನ, ಅಂಗನವಾಡಿಗಳನ್ನು ನಿರ್ಮಿಸಲಾಗುತ್ತಿದೆ.
ಜಿಲ್ಲೆಯಲ್ಲಿ ನೆಲೆಯೂರಿರುವ ಟೊಯೋಟಾ ಮತ್ತು ಸುಜುಕಿ ಕಂಪನಿಗಳು ಇನ್ನೂ 50 ಸಾವಿರ ಜನರಿಗೆ ಉದ್ಯೋಗ ಕೊಡಲು ಸಿದ್ಧವಾಗಿವೆ. ಅರ್ಹ ಆಕಾಂಕ್ಷಿ ಅರ್ಹರಿಗೆ ಕೌಶಲ್ಯಾಭಿವೃದ್ಧಿ ಒದಗಿಸಲಾಗುವುದು ಎಂದರು.
ಮಾಗಡಿ ಶಾಸಕ ಮಂಜುನಾಥ್ ಮಾತನಾಡಿ, ಅಶ್ವಥ್ ನಾರಾಯಣರು ಮತ್ತು ನಾವಿಬ್ಬರೂ ಬೇರೆಬೇರೆ ಪಕ್ಷಗಳಿಗೆ ಸೇರಿರಬಹುದು. ಆದರೆ ಸಚಿವರು ಜಿಲ್ಲೆಯ ಅಭಿವೃದ್ಧಿಯಲ್ಲಿ ಎಂದೂ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಹಾಕುವುದಿಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಪ್ರಶಸಂಸಿದರು.