ಮಾಗಡಿ ಕಂಚುಗಲ್ ಬಂಡೆ ಮಠದ ಸ್ವಾಮೀಜಿ ನೇಣಿಗೆ ಶರಣು
ರಾಮನಗರ, ಅಕ್ಟೋಬರ್ 24: ರಾಜ್ಯದಲ್ಲಿ ಸ್ವಾಮೀಜಿಗಳ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ವಾಮೀಜಿಗಳ ಆತ್ಮಹತ್ಯೆ ಪ್ರಕರಣಗಳು ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಶ್ರೀ ಕಂಚುಗಲ್ ಬಂಡೆ ಮಠದ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಸವಲಿಂಗ ಸ್ವಾಮೀಜಿ (45) ಮೃತ ದುರ್ದೈವಿಗಳು.
ಶ್ರೀ ಕಂಚುಗಲ್ ಬಂಡೆ ಮಠದ ಸ್ವಾಮೀಜಿಯಾಗಿದ್ದ ಬಸವಲಿಂಗ ಸ್ವಾಮೀಜಿ ಅವರು ಯಾವುದೋ ವಿಚಾರಕ್ಕೆ ಮನನೊಂದು ಮಠದಲ್ಲೇ ಕಿಟಕಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಸ್ವಾಮೀಜಿ ಆತ್ಮಹತ್ಯೆಗೆ ನಿಖರ ಕಾರಣ ಈವರೆಗೂ ತಿಳಿದುಬಂದಿಲ್ಲ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು ಮಾಗಡಿ ತಾಲೂಕಿನ ಶ್ರೀ ಕಂಚುಗಲ್ ಬಂಡೆ ಮಠ ಮಾಗಡಿ ತಾಲೂಕಿನಲ್ಲೇ ದೊಡ್ಡ ಮಠ ಎನ್ನುವ ಪ್ರಖ್ಯಾತಿ ಪಡೆದಿದೆ. ಈ ಮಠದ ಬಸವಲಿಂಗ ಸ್ವಾಮೀಜಿ ನೇಣಿಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ವಾಮೀಜಿ ಮೂರು ಪುಟಗಳ ಡೆತ್ ನೋಟ್ ಸಹ ಬರೆದಿದ್ದಾರೆ ಎನ್ನಲಾಗಿದೆ. ಸ್ವಾಮೀಜಿಗಳ ಆತ್ಮಹತ್ಯೆ ಆತ್ಮಹತ್ಯೆಯ ಬಗ್ಗೆ ಇನ್ನಷ್ಟು ಮಾಹಿತಿ ಹೊರಬರಬೇಕಿದೆ.
ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಚಿಲುಮೆ ಮಠದ ಬಸವಲಿಂಗಸ್ವಾಮೀಜಿ ಅವರ ಖಿನ್ನತೆಗೆ ಒಳಾಗಾಗಿ ಸಾವಿಗೆ ಶರಣಾದ ಘಟನೆ ಮಾಸುವ ಮುನ್ನವೇ, ಕಂಚುಗಲ್ ಬಂಡೆ ಮಠದ ಸ್ವಾಮೀಜಿ ಸಾವಿಗೆ ಶರಣಾಗಿದ್ದಾರೆ. ಕಾಕತಾಳೀಯ ಎಂಬಂತೆ ಇಬ್ಬರು ಸ್ವಾಮೀಜಿಗಳ ದೇಹವೂ ಕಿಟಕಿಯ ಸರಳುಗಳಿಗೆ ನೇತು ಬಿದ್ದ ಸ್ಥಿತಿಯಲ್ಲೇ ಪತ್ತೆಯಾಗಿವೆ.
ಇನ್ನು ಶ್ರೀಗಳ ಮೃತದೇಹ ಸಿಕ್ಕ ಕೊಠಡಿಯಲ್ಲಿ ಶ್ರೀಗಳು ಡೆತ್ ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಇದರಲ್ಲಿ ಏನಿದೆ ಎನ್ನುವುದು ಇನ್ನು ಬಹಿರಂಗಗೊಂಡಿಲ್ಲ. ಈ ಪತ್ರ ಘಟನಾ ಸ್ಥಳದಲ್ಲಿ ಪೊಲೀಸರಿಗೆ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕುದೂರು ಪೊಲೀಸ್ ಠಾಣೆ
ಸಿಪಿಐ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಶ್ರೀಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ವಾಮೀಜಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ವಿವಿಧ ಮಠಗಳ ಸ್ವಾಮೀಜಿಗಳು ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿದ್ದು, ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಅನ್ನ ಹಾಗೂ ಅಕ್ಷರ ದಾಸೋಹಕ್ಕೆ ಹರಸರಾಗಿದ್ದ ಕಂಚುಗಲ್ ಬಂಡೆ ಮಠಕ್ಕೆ 1997ರಲ್ಲಿ ಬಸವಲಿಂಗ ಸ್ವಾಮಿಗಳು ಅಧ್ಯಕ್ಷರಾಗಿ ಪೀಠವನ್ನೇರಿದ್ದರು. ಪೀಠಾಧ್ಯಕ್ಷರಾದ ದಿನದಿಂದಲೂ ಇಂದಿನವರೆಗೂ ಬಂಡೆ ಮಠ ಮತ್ತು ಭಕ್ತರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು. ಇತ್ತೀಚಿಗಷ್ಟೇ ಮಠದಲ್ಲಿ 25ನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಿದ್ದರು.
ಬಂಡೆ ಮಠದ ಚನ್ನಮಲ್ಲಯ್ಯ, ಪುಟ್ಟಗೌರಮ್ಮ ದಂಪತಿಯ 5 ಪುತ್ರರು ಮತ್ತು ಮೂವರು ಪುತ್ರಿಯರಲ್ಲಿ ಶ್ರೀ ಬಸವಲಿಂಗ ಸ್ವಾಮೀಜಿಗಳು ಸಹ ಒಬ್ಬರು. 8ನೇ ತರಗತಿವರೆಗೂ ಬಂಡೆ ಮಠದಲ್ಲಿಯೇ ಅಭ್ಯಾಸ ಮಾಡಿದ್ದ ಶ್ರೀಗಳು, ನಂತರ ಶ್ರೀ ಸಿದ್ದಗಂಗಾ ಮಠದಲ್ಲಿ ವಿಧ್ಯಾಭ್ಯಾಸ ಮಾಡಿದ್ದರು. ಹೋರಾಟದ ಮನೋಭಾವ ಹೊಂದಿದ್ದ ಶ್ರೀಗಳು 2015-16 ರಲ್ಲಿ ಮಠದ ಸಮೀಪದ ಗೂರೂರು ಗ್ರಾಮದ ಬಳಿ ಸರ್ಕಾರ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿದ್ದ ಸಮಯದಲ್ಲಿ ಹೋರಾಟ ನಡೆಸಿದ್ದರು.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.












Click it and Unblock the Notifications