ರಾಮನಗರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಯಾರಿಗೆ?
ರಾಮನಗರ, ನವೆಂಬರ್ 08; ರಾಮನಗರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ನವೆಂಬರ್ 9ರಂದು ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸಿರುವ ಕಾಂಗ್ರೆಸ್ ಪಕ್ಷದ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಾಗಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಕಾಂಗ್ರೆಸ್ನಲ್ಲಿ 8 ಮಂದಿ ಮಹಿಳೆಯರು ಹಾಗೂ ಪರಿಶಿಷ್ಟ ಜಾತಿಯ ಇಬ್ಬರು ಸದಸ್ಯರು ಆಯ್ಕೆಯಾಗಿದ್ದು, ಇವರ ಪೈಕಿ ಯಾರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಪಟ್ಟ ಒಲಿಯಲಿದೆ? ಎಂಬುದು ಕುತೂಹಲ ಮೂಡಿಸಿದೆ.
ರಾಮನಗರದ ನಗರಸಭೆಯ ಒಟ್ಟು 31 ಸದಸ್ಯರ ಪೈಕಿ ಕಾಂಗ್ರೆಸ್ನ 19, ಜೆಡಿಎಸ್ನ 11 ಹಾಗೂ ಒಬ್ಬರು ಪಕ್ಷೇತರ ಸದಸ್ಯರು ಇದ್ದಾರೆ. ಈಗಾಗಲೇ ಪಕ್ಷೇತರ ಸದಸ್ಯ ಫೈರೋಜ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ಸಂಸದ ಡಿ. ಕೆ. ಸುರೇಶ್ ಸೇರಿ ಕಾಂಗ್ರೆಸ್ ಬಲ 21 ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಸೇರಿ ಜೆಡಿಎಸ್ ಬಲ 12ಕ್ಕೆ ಏರಿಕೆ ಆಗಲಿದೆ. ಅಧಿಕಾರ ನಡೆಸಲು ನಿಚ್ಚಳ ಬಹುಮತ ಹೊಂದಿರುವ ಕಾಂಗ್ರೆಸ್ ಅಧಿಕಾರಕ್ಕೆ ಸಿಗಲಿದೆ.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯ ಅವಧಿ 30 ತಿಂಗಳು. ಆಕಾಂಕ್ಷಿಗಳು ಹೆಚ್ಚಾಗಿರುವ ಕಾರಣ ಬಡಂಬಡಿಕೆಯ ಮೂಲಕ ಅಧಿಕಾರ ಹಂಚಿಕೆಯಾಗುವ ಸಾಧ್ಯತೆಗಳಿವೆ. ಸ್ಥಳೀಯ ಕಾಂಗ್ರೆಸ್ ಮಟ್ಟಿಗೆ ಡಿಕೆಶಿ ಸಹೋದರರೇ ಹೈಕಮಾಂಡ್ ಆಗಿರುವುದರಿಂದ ಅವರ ನಿರ್ಧಾರವೇ ಅಂತಿಮವಾಗಲಿದೆ. ಚುನಾವಣೆಯ ದಿನದಂದೇ ಎರಡೂ ಸ್ಥಾನಗಳಿಗೆ ಹೆಸರು ಘೋಷಣೆಯಾಗುತ್ತವೆ ಎಂಬುದು ಕಾಂಗ್ರೆಸ್ ಮೂಲಗಳ ಮಾಹಿತಿ.
ಕಾಂಗ್ರೆಸ್ ಪಕ್ಷದಿಂದ ನಗರಸಭೆಗೆ 1ನೇ ವಾರ್ಡ್ನಿಂದ ಟಿ. ಜಯಲಕ್ಷ್ಮಮ್ಮ , 4ನೇ ವಾರ್ಡ್ನಿಂದ ತೇಜಸ್ವಿನಿ , 10ನೇ ವಾರ್ಡ್ನಿಂದ ಮಜತ್ ಜಹಾ, 17ನೇ ವಾರ್ಡ್ನಿಂದ ಗಿರಿಜಮ್ಮ, 20ನೇ ವಾರ್ಡ್ನಿಂದ ಆಯಿಷಾ ಬಾನು, 27ನೇ ವಾರ್ಡ್ನಿಂದ ಬಿ. ಕೆ. ಪವಿತ್ರ , 30ನೇ ವಾರ್ಡ್ನಿಂದ ಬಿ. ಸಿ. ಪಾರ್ವತಮ್ಮ, 31ನೇ ವಾರ್ಡ್ನಿಂದ ವಿಜಯಕುಮಾರಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಎಲ್ಲಾ ಮಹಿಳೆಯರು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಪೈಪೋಟಿ ಹೆಚ್ಚಾಗಿದೆ. ಮಹಿಳಾ ಸದಸ್ಯರ ಪೈಕಿ ಒಕ್ಕಲಿಗರು, ಲಿಂಗಾಯಿತು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತರಿದ್ದಾರೆ.
ರಾಮನಗರ ನಗರಸಭೆಯ ಅಧ್ಯಕ್ಷ ಸ್ಥಾನ ಇಲ್ಲಿಯವರಿಗೆ ಲಿಂಗಾಯಿತರಿಗೆ ದೊರಕಿಲ್ಲ. ಹೀಗಾಗಿ ಲಿಂಗಾಯಿತರನ್ನು ಪರಿಗಣಿಸಿ ಎಂದು ವೀರಶೈವ ಲಿಂಗಾಯತರು ಆಗ್ರಹಿಸಿದ್ದಾರೆ. ಪಂಜಾಬ್ ರಾಜ್ಯದಲ್ಲಿ ಮುಖ್ಯ ಮಂತ್ರಿ ಸ್ಥಾನವನ್ನು ದಲಿತರಿಗೆ ಕೊಟ್ಟಿದ್ದೀರಿ. ಇಲ್ಲಿಯೂ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಯವರಿಗೆ ನೀಡಿ ಮಾದರಿಯಾಗುವಂತೆ ದಲಿತ ಮುಖಂಡರು ಒತ್ತಾಯಿಸುತ್ತಿದ್ದಾರೆ.
ಈ ಮಧ್ಯೆ ಅಧ್ಯಕ್ಷ ಸ್ಥಾನಕ್ಕೆ ಅಲ್ಪಸಂಖ್ಯಾತ ಸದಸ್ಯರನ್ನು ಪರಿಗಣಿಸಿ ಎಂದು ಆಗ್ರಹಿಸುತ್ತಿರುವವರು ಹೆಚ್ಚಾಗಿದ್ದಾರೆ. ಹೀಗಾಗಿ 8 ಮಂದಿಯ ಪೈಕಿ ಯಾರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಬೇಕು ಎಂಬುದು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಸದ್ಯಕ್ಕೆ ಅಧ್ಯಕ್ಷ ಸ್ಥಾನಕ್ಕೆ 6 ಮಂದಿಯ ನಡುವೆ ತೀವ್ರ ಪೈಪೋಟಿ ಇದೆ.
ಇನ್ನು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, 1ನೇ ವಾರ್ಡಿನ ಜಯಲಕ್ಷ್ಮಮ್ಮ ಮತ್ತು 6ನೇ ವಾರ್ಡಿನ ಸೋಮಶೇಖರ್ (ಮಣಿ) ಪರಿಶಿಷ್ಟ ಜಾತಿ ಸದಸ್ಯರಾಗಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ಪೈಪೋಟಿ ಇರಲಿದೆ.
ಒಡಬಂಡಿಕೆ ಮೂಲಕ ಹಂಚಿಕೆ; ರಾಮನಗರ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ಮತ್ತು ಅರ್ಹತೆ ಇರುವವರ ಸಂಖ್ಯೆ ಸಾಕಷ್ಟಿರುವುದರಿಂದ ತಲಾ 10 ತಿಂಗಳ ಅವಧಿಗೆ ಒಡಂಬಡಿಕೆಯ ಮೂಲಕ ಅಧಿಕಾರ ಹಂಚಬಹುದು ಎಂಬ ಸುದ್ದಿ ಇದೆ.
ಕಳೆದ ನಗರಸಭೆ ಅವಧಿಯಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗಲೂ ಇದೇ ರೀತಿ ಒಡಂಬಡಿಕೆ ರಾಜಕರಣವನ್ನು ಕಾಂಗ್ರೆಸ್ ಅನುಸರಿಸಿತ್ತು. ಆದರೆ ಹೀಗೆ ಅಧಿಕಾರ ಹಂಚಿದರೆ ಯಾರೊಬ್ಬರೂ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಕಳೆದ ಬಾರಿಯ ಅಧಿಕಾರದ ಉದಾಹರಣೆಯನ್ನು ಕಾಂಗ್ರೆಸ್ ಕಾರ್ಯಕರ್ತರೇ ಕೊಡುತ್ತಿದ್ದಾರೆ. ಹೀಗಾಗಿ ಒಗ್ಗಟ್ಟಿನ ಮಂತ್ರ ಜಪಿಸಿ ಪೂರ್ಣಾವಧಿಗೆ ಒಬ್ಬರೇ ಅಧ್ಯಕ್ಷರನ್ನು ಆಯ್ಕೆ ಮಾಡಿದರೆ ಕಾಂಗ್ರೆಸ್ಗೆ ಉತ್ತಮ ಭವಿಷ್ಯವಿರಲಿದೆ ಎಂಬ ಅಭಿಪ್ರಾಯಗಳು ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರುತ್ತಿದೆ.












Click it and Unblock the Notifications