ರಾಮನಗರದಲ್ಲಿ ರಾಜ್ಯ ಬಿಜೆಪಿ ಮುಖಂಡರೇ 'ಬಿಜೆಪಿಯನ್ನು ಬಕ್ರಾ' ಮಾಡಿದ್ರಾ?
Recommended Video

ಬೆಂಗಳೂರು ಜಯನಗರ ಅಸೆಂಬ್ಲಿಯ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪರ ಹೊರಬಿದ್ದ ನಂತರ, ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಮುಖಂಡರ ವಿರುದ್ದ ಆಕ್ರೋಶ ಹೊರಹಾಕಿದ್ದರು. ಈಗ, ರಾಮನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಕೊನೇ ಕ್ಷಣದಲ್ಲಿ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಆ ಮೂಲಕ, ಬಿಜೆಪಿಗೆ ಇನ್ನಿಲ್ಲದ ಮುಜುಗರ ತಂದೊಡ್ಡಿದ್ದಾರೆ.
ನರೇಂದ್ರ ಮೋದಿ, ಅಮಿತ್ ಶಾ ಅಂತಹ ವರ್ಚಸ್ವೀ ನಾಯಕರಿದ್ದರೂ, ರಾಜ್ಯ ಬಿಜೆಪಿ ನಾಯಕರಲ್ಲಿ ಹೊಂದಾಣಿಕೆಯ ಕೊರತೆ ಕಾಡುತ್ತಿರುವುದು ಇದೇನು ಹೊಸತಲ್ಲ. ಇತ್ತೀಚಿನ ದಿನಗಳಲ್ಲಿ ಹಲವು ವಿಷಯಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲು ಇದೇ ಕಾರಣವಾಗಿದ್ದರೂ, ಇನ್ನೂ ಈ ನಾಯಕರು ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಿಲ್ಲ.
ಐದು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ಕಾಂಗ್ರೆಸ್ - ಜೆಡಿಎಸ್ ಮುಖಂಡರು ಆತ್ಮವಿಶ್ವಾಸದಿಂದ ಹೇಳುತ್ತಿದ್ದರೂ, ಅದರ ಒಳಮರ್ವವನ್ನು ಅರಿಯದೇ, ರಾಮನಗರದಲ್ಲಿ ಬಿಜೆಪಿ ಈ ಮುಖಭಂಗ ಅನುಭವಿಸಿತೇ ಎನ್ನುವುದಿಲ್ಲಿ ಪ್ರಶ್ನೆ.
ರಾಮನಗರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ಚಂದ್ರಶೇಖರ್ ಒಂದು ವೇಳೆ ಕಣದಲ್ಲಿದ್ದರೂ, ಜೆಡಿಎಸ್-ಕಾಂಗ್ರೆಸ್ ಜಂಟಿ ಅಭ್ಯರ್ಥಿಯಾಗಿರುವ ಅನಿತಾ ಕುಮಾರಸ್ವಾಮಿಯ ವಿರುದ್ದ ಗೆಲ್ಲುವುದು ಕಷ್ಟದ ಮಾತಾಗಿದ್ದರೂ, ಚುನಾವಣಾ ಪ್ರಚಾರದ ವೇಳೆ ಬಿಜೆಪಿಯ ಹಿರಿಯ ಮುಖಂಡರು ಹಾಜರಾಗದೇ ಶಸ್ತ್ರತ್ಯಾಗ ಮಾಡಿದ್ದರು.
ಈಗ, ಕಣದಿಂದ ಅಧಿಕೃತವಾಗಿ ಬಿಜೆಪಿ ಅಭ್ಯರ್ಥಿ ಹಿಂದಕ್ಕೆ ಸರಿಯುವ ಮೂಲಕ, ಡಿ ಕೆ ಶಿವಕುಮಾರ್ ಸಹೋದರರು ತಮ್ಮ ಪ್ರಭಾವವನ್ನು ಮತ್ತೆ ಬಿಜೆಪಿಗೆ ತೋರಿಸಿಕೊಟ್ಟಿದ್ದಾರೆ. ಇವತ್ತಿನ ಬೆಳವಣಿಗೆ, ದೇವೇಗೌಡರ ಕುಟುಂಬ ಮತ್ತು ಡಿಕೆಶಿ ನಡುವಿನ ಸಂಬಂಧವನ್ನು ಬಲಪಡಿಸಲು ಖಂಡಿತ ಕಾರಣವಾಗಲಿದೆ. ಬಿಜೆಪಿಯವರೇ 'ಬಿಜೆಪಿಯನ್ನು ಬಕ್ರಾ' ಮಾಡಿದ್ರಾ ಎನ್ನುವ ಪ್ರಶ್ನೆ ಈ ಸಂದರ್ಭದಲ್ಲಿ ಕಾಡುವುದು ಸಹಜ, ಮುಂದೆ ಓದಿ..

ರಾಜ್ಯ ಬಿಜೆಪಿ ಮುಖಂಡರ ಹೊಂದಾಣಿಕೆ ರಾಜಕೀಯ
ಬೆಂಗಳೂರು ವ್ಯಾಪ್ತಿಯಲ್ಲಿ ರಾಜ್ಯ ಬಿಜೆಪಿ ಮುಖಂಡರ 'ಹೊಂದಾಣಿಕೆ ರಾಜಕೀಯ'ದ ಬಗ್ಗೆ ಅದೆಷ್ಟೋ ಬಾರಿ ಪಕ್ಷದ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದುಂಟು. ರಾಮನಗರದ ಅಭ್ಯರ್ಥಿ ಚಂದ್ರಶೇಖರ್ ಕಣದಿಂದ ಹಿಂದಕ್ಕೆ ಸರಿಯಲು ನೀಡಿರುವ ಕಾರಣ ಒಂದು ವೇಳೆ ನಿಜವಾಗಿದ್ದೇ ಆಗಿದ್ದಲ್ಲಿ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಇದರ ಬಿಸಿ ತಟ್ಟದೇ ಇರದು. ಮತ್ತೊಂದು ಅವಧಿಗೆ ಮೋದಿ ಬರಬೇಕಿದ್ದಲ್ಲಿ, ಬಿಜೆಪಿ ರಾಷ್ಟ್ರಾಧ್ಯಕ್ಷರು ರಾಜ್ಯ ಬಿಜೆಪಿ ಮುಖಂಡರನ್ನು ಕರೆಸಿ ಸರಿಯಾದ ಕ್ಲಾಸ್ ನೀಡಬೇಕಿದೆ.

ದಕ್ಷಿಣದಲ್ಲಿ ಬಿಜೆಪಿಯ ಹೆಬ್ಬಾಗಿಲನ್ನು ಬಂದ್ ಮಾಡುತ್ತೇನೆ
ದಕ್ಷಿಣದಲ್ಲಿ ಬಿಜೆಪಿಯ ಹೆಬ್ಬಾಗಿಲನ್ನು ಬಂದ್ ಮಾಡುತ್ತೇನೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ್ರು, ಉಪಚುನಾವಣೆಯ ವೇಳೆ ಸಾರಿಸಾರಿ ಹೇಳಿದ್ದಾರೆ. ಬಿಬಿಎಂಪಿ ಮತ್ತು ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಅಧಿಕಾರದ ಹತ್ತಿರಕ್ಕೆ ಬಂದಿದ್ದರೂ, ಬಿಜೆಪಿ ಗದ್ದುಗೇರಲು ಆಗಲಿಲ್ಲ. ಡಿ ಕೆ ಶಿವಕುಮಾರ್ ಮತ್ತು ಗೌಡರ ರಾಜಕೀಯ ತಂತ್ರಗಾರಿಕೆಯ ಮುಂದೆ, ಬಿಜೆಪಿ ಹಿನ್ನಡೆ ಅನುಭವಿಸುತ್ತಲೇ ಬರುತ್ತಿದೆ. ಈಗ, ರಾಮನಗರದ ಸರದಿ.

ರಾಮನಗರದ ಬಿಜೆಪಿ ಅಭ್ಯರ್ಥಿ ಮೂಲತಃ ಕಾಂಗ್ರೆಸ್ಸಿನವರು
ರಾಮನಗರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಮೂಲತಃ ಕಾಂಗ್ರೆಸ್ಸಿನವರು. ಅವರನ್ನು ಮನವೊಲಿಸಿ ಪಕ್ಷಕ್ಕೆ ಕರೆತಂದು ಶಾಲುಹೊದಿಸಿ, ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದವರು ಸಿ ಪಿ ಯೋಗೇಶ್ವರ್. ಇವರ ವಿರುದ್ದವೇ ಚಂದ್ರಶೇಖರ್ ಆರೋಪ ಹೊರಿಸಿದ್ದಾರೆ. ಯೋಗೇಶ್ವರ್ ಮತ್ತು ಡಿಕೆಶಿ/ಎಚ್ಡಿಕೆ ಕುಟುಂಬಕ್ಕೆ ಆಗಿಬರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಡಿಕೆಶಿ/ಎಚ್ಡಿಕೆ ಒಳಗೊಳಗೆ ಹೂಡಿದ ರಾಜಕೀಯ ದಾಳಕ್ಕೆ ಬಿಜೆಪಿ ನಿಬ್ಬೆರಗಾಗಿದೆ.

ರಾಜ್ಯ ಬಿಜೆಪಿಗೆ ಎಚ್ಚರಿಕೆಯ ಗಂಟೆ
ಚಂದ್ರಶೇಖರ್ ಕಣದಿಂದ ಹಿಂದಕ್ಕೆ ಸರಿಯಲು ಬಿಜೆಪಿಯ ಮೊದಲ ಸಾಲಿನ ಮುಖಂಡರೇ ಕಾರಣ ಎಂದು ಆರೋಪಿಸಿರುವುದು ರಾಜ್ಯ ಬಿಜೆಪಿಗೆ ಎಚ್ಚರಿಕೆಯ ಗಂಟೆ. ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡವರೇ ಕಾರು ನಿಲ್ಲಿಸದೇ ಮಂಡ್ಯದ ಕಡೆಗೆ ಸಾಗುತ್ತಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆಯೂ ಅವರು ಕಿಡಿಕಾರಿದ್ದಾರೆ. ಸದಾನಂದ ಗೌಡರ ವಿರುದ್ದವೂ ಸಿಟ್ಟಾಗಿದ್ದಾರೆ.

ಅಮಿತ್ ಶಾ ಚಾಣಕ್ಯತನಕ್ಕೆ ಸವಾಲು
ಇವತ್ತಿನ ಬೆಳವಣಿಗೆ, ಅಮಿತ್ ಶಾ ಚಾಣಕ್ಯತನಕ್ಕೆ ಸವಾಲಾಗಿದೆ. ರಾಮನಗರದಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿಯನ್ನು ಮತ್ತು ಅಲ್ಲಿ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರನ್ನು ಬಕ್ರಾ ಮಾಡಿದ್ದು ಪಕ್ಷದ ರಾಜ್ಯ ಮುಖಂಡರು ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿರುವ ರಾಜಕೀಯ. ರಾಜ್ಯ ಬಿಜೆಪಿ ಮುಖಂಡರ ಸಂವಹನದ ಕೊರತೆ, ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯಿಂದ ಚುನಾವಣೆ ಎದುರಿಸುತ್ತಿರುವುದು, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ ತಂದುಕೊಟ್ಟರೆ ಆಶ್ಚರ್ಯ ಪಡಬೇಕಾಗಿಲ್ಲ.












Click it and Unblock the Notifications