ಅವಳಿ ನಗರವಾಗಿ ಚನ್ನಪಟ್ಟಣ-ರಾಮನಗರ ಅಭಿವೃದ್ಧಿ; ಎಚ್ಡಿಕೆ
ರಾಮನಗರ, ಜನವರಿ 20: " ರಾಮನಗರ ಮತ್ತು ಚನ್ನಪಟ್ಟಣವನ್ನು ಹುಬ್ಬಳ್ಳಿ-ಧಾರವಾಡ ಮಾದರಿಯಲ್ಲಿ ಅವಳಿ ನಗರವಾಗಿ ಅಭಿವೃದ್ಧಿ ಮಾಡಿ, ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಕೆಯಾಗಿ ಮಾಡಲಾಗುತ್ತದೆ" ಎಂದು ಚನ್ನಪಟ್ಟಣ ಶಾಸಕ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಬುಧವಾರ ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, "ರಾಮನಗರ ಮತ್ತು ಚನ್ನಪಟ್ಟಣ ಎರಡೂ ನನ್ನ ಎರಡು ಕಣ್ಣುಗಳು. ಅವುಗಳನ್ನು ಕಳೆದುಕೊಂಡರೆ ಕುರುಡನಾಗಿ ಹೋಗುತ್ತೇನೆ. ನಾನು ಬದುಕಿರುವ ತನಕ ಈ ಎರಡೂ ಕ್ಷೇತ್ರಗಳ ಜನತೆ ನನ್ನ ಕೈಬಿಡಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಮನಗರದಿಂದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸ್ಪರ್ಧೆ ಮಾಡುವ ಸುದ್ದಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಬಹಳ ಸಂತೋಷ ಯಾರು ಎಲ್ಲಿಂದ ಬೇಕಾದರೂ ಸ್ಪರ್ಧೆ ಮಾಡಲಿ. ಚುನಾವಣೆ ಎದುರಿಸಬೇಕಲ್ಲ. ನಮ್ಮ ವೈಯಕ್ತಿಕ ವಿಶ್ವಾಸಗಳು ಬೇರೆ, ರಾಜಕಾರಣ ರಾಜಕಾರಣವೇ. ಅದರಲ್ಲಿ ಯಾವುದೇ ರಾಜಿ ಇಲ್ಲ" ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

"ಯಾರು ಬೇಕಾದರೂ ಬಂದು ಸ್ಪರ್ಧೆ ಮಾಡಲಿ. ನನ್ನ ವಿರೋಧವಿಲ್ಲ. ಆದರೆ, ನಾನು ಬದುಕಿರೋವರೆಗೂ ರಾಮನಗರ-ಚನ್ನಪಟ್ಟಣದ ಜನ ನನ್ನ ಕೈಬಿಡಲ್ಲ. ಅವರೇ ಬೆಳೆಸಿದ ಮಗು ನಾನು, ಕೊನೆಗೆ ಅವರೇ ಚಿವುಟುತ್ತಾರಾ?. ನನಗೆ ವಿಶ್ವಾಸವಿದೆ ರಾಮನಗರ-ಚನ್ನಪಟ್ಟಣದ ಜನ ನನ್ನ ಕೈಬಿಡಲ್ಲ" ಎಂದು ಕುಮಾರಸ್ವಾಮಿ ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಾದರಿಯಲ್ಲಿ ರಾಮನಗರ ಮತ್ತು ಚನ್ನಪಟ್ಟಣವನ್ನು ಅವಳಿ ನಗರವಾಗಿ, ಮಹಾನಗರ ಪಾಲಿಕೆಯಾಗಿ ಮಾಡಲಾಗುತ್ತದೆ ಎಂದು ಚನ್ನಪಟ್ಟಣ ಶಾಸಕ, ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.@hd_kumaraswamy #Ramanagara #channapatna pic.twitter.com/cvGCSml36M
— oneindiakannada (@OneindiaKannada) January 20, 2021
"ನನ್ನ ದೇಹ ಅಂತಿಮವಾಗಿ ಭೂಮಿಗೆ ಹೋಗೋದು ರಾಮನಗರದಲ್ಲೇ. ರಾಮನಗರ ಜಿಲ್ಲೆ ಬಿಟ್ಟು ನಾನು ಹೊರಗೆ ಹೋಗಲ್ಲ. ನಾನು ಎಂದಿಗೂ ಚನ್ನಪಟ್ಟಣ ಕ್ಷೇತ್ರ ಬಿಡಲ್ಲ. ಕೆಲವರು ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರ ಬಿಡುವುದಿದ್ದರೆ ನಾನು ಚನ್ನಪಟ್ಟಣದಲ್ಲಿ ಯಾಕೆ ಓಡಾಡುತ್ತಿದ್ದೆ?. ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಯತ್ನ ಪಡುತ್ತಿದ್ದೇನೆ" ಎಂದರು.












Click it and Unblock the Notifications