ಕುದೂರಿನಲ್ಲಿ ಪ್ರಚಾರ ನಡೆಸಿದ ನಿಖಿಲ್ ಸಿಡಿ ಬಗ್ಗೆ ಹೇಳಿದ್ದೇನು?
ರಾಮನಗರ, ಮೇ 5 : ಮಾಗಡಿ ಶಾಸಕ ಬಾಲಕೃಷ್ಣ ನನ್ನ ವಿರುದ್ಧ ಸಿಡಿ ಬಿಡುಗಡೆ ಮಾಡ್ತೀನಿ ಎಂದಿದ್ದಾರೆ. ಆದರೆ ಅದು ಜಾಗ್ವಾರ್ ಚಿತ್ರದ ಸಿಡಿ ಇರಬೇಕು ಎಂದು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಎಚ್.ಸಿ.ಬಾಲಕೃಷ್ಣಗೆ ಟಾಂಗ್ ಕೊಟ್ಟಿದ್ದಾರೆ.
ರಾಮನಗರ ಜಿಲ್ಲೆ ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜು ಪರವಾಗಿ ಪ್ರಚಾರ ನಡೆಸಿ ಮಾತನಾಡಿದ ಅವರು ಸಿನಿಮಾ ಶೈಲಿಯಲ್ಲಿ ಬಾಲಕೃಷ್ಣ ವಿರುದ್ಧ ಗುಡುಗಿದ್ದಾರೆ. ನಾನು ಅವರಿಂದ ಸಿಡಿ ಬಿಡುಗಡೆ ಮಾಡಿಸಿಕೊಳ್ಳುವ ಕೆಲಸವೇನು ಮಾಡಿಲ್ಲ. ಇಂತಹ ದೊಡ್ಡ ಕುಟುಂಬದಲ್ಲಿ ಹುಟ್ಟಿ ಕೀಳುಮಟ್ಟದ ಕೆಲಸ ಮಾಡಲ್ಲ ಎಂದು ತಿಳಿಸಿದ್ದಾರೆ.

ಸ್ವಲ್ಪವಾದರೂ ಸತ್ಯ ಇರಲಿ
ಯಾವುದೇ ಅರೋಪ ಮಾಡಿದಾಗ ಸ್ವಲ್ಪವಾದರೂ ಸತ್ಯ ಇರಬೇಕು. ರಾಜ್ಯದಲ್ಲೇ ಜೆಡಿಎಸ್ ಪರವಾದ ಅಲೆಯಿದೆ. ಅದೇ ರೀತಿ ನಾನು ಮೂರು ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಮುಗಿಸಿದ್ದೇನೆ. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಮಾಗಡಿಯಲ್ಲೂ ಎ.ಮಂಜು ಅವರ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೋಲೋದು ಖಚಿತ
ಪ್ರಚಾರದ ವೇಳೆ ಮಾಗಡಿ ಜೆಡಿಎಸ್ ಅಭ್ಯರ್ಥಿ ಎ.ಮಂಜು ಮಾತನಾಡಿ, ಬಾಲಕೃಷ್ಣ ಈ ಬಾರಿ ಸೋಲೋದು ಖಚಿತ. ಹಾಗೇ ಚುನಾವಣೆಯಲ್ಲಿ ಪ್ರಕಟಣೆಯಾಗಿರುವ ನನ್ನ ಕ್ರಮಸಂಖ್ಯೆಯನ್ನ ಬದಲಿಸಿರುವ ಕರಪತ್ರಗಳನ್ನ ಮುದ್ರಿಸಿ ಕ್ಷೇತ್ರದಲ್ಲಿ ಹಂಚಿಸುತ್ತಿದ್ದಾರೆ.

ಕೇಸ್ ದಾಖಲಿಸುತ್ತೇನೆ
ಮತದಾರರಿಗೆ ದಾರಿತಪ್ಪಿಸಲು ಈ ಕೆಲಸಕ್ಕೆ ಕೈಹಾಕಿದ್ದಾರೆ. ಅವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇನೆ ಎಂದು ಕಿಡಿಕಾರಿದರು.

ಭರ್ಜರಿ ರೋಡ್ ಶೋ
ನಿಖಿಲ್ ಪ್ರಚಾರಕ್ಕೆ ಸಾವಿರಾರು ಜನ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು. ಕುದೂರು ಜಿಪಂ ವ್ಯಾಪ್ತಿಯಲ್ಲಿ ನಿಖಿಲ್ ಭರ್ಜರಿ ರೋಡ್ ಶೋ ನಡೆಸಿದರು.












Click it and Unblock the Notifications