ರಾಮನಗರ ಜಿಲ್ಲಾ ಕಾರಾಗೃಹದ ಕೈದಿಗಳಿಂದ ನಿಷೇಧಿತ ಮಾದಕ ವಸ್ತು, ಮೊಬೈಲ್ ವಶ
ರಾಮನಗರ, ಮಾರ್ಚ್ 30: ಮಂಗಳವಾರ ಬೆಳ್ಳಂಬೆಳಿಗ್ಗೆ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ನಿರ್ಬಂಧಿತ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ರಾಮನಗರ ಎಸ್ಪಿ ಎಸ್.ಗಿರೀಶ್ ನೇತೃತ್ವದಲ್ಲಿ ಡಿವೈಎಸ್ಪಿ, ಸಿಪಿವೈ, ಪಿಎಸ್ಐಗಳು ಸೇರಿದಂತೆ 30ಕ್ಕೂ ಹೆಚ್ಚು ಪೊಲೀಸರ ತಂಡ ಜಿಲ್ಲಾ ಕಾರಾಗೃಹದ ಮೂಲೆ ಮೂಲೆಗಳನ್ನು ತಪಾಸಣೆ ನಡೆಸಿ, ವಿಚಾರಣಾಧೀನ ಕೈದಿಗಳಿಂದ ಹಣ, ಬೀಡಿ, ಸಿಗರೇಟ್, ಗುಟ್ಕಾ, ಬ್ಲೇಡ್, ಚಾಕು ಸೇರಿದಂತೆ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರಾಗೃಹದಲ್ಲಿ ಅಕ್ರಮಗಳು ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರಿನ ಹಿನ್ನಲೆಯಲ್ಲಿ ದಾಳಿ ನಡೆಸಿದ ಪೊಲೀಸ್ ಅಧಿಕಾರಿಗಳು, ಕಾರಾಗೃಹದಲ್ಲಿ 54 ಸಾವಿರ ಹಣ, 5 ಮೊಬೈಲ್ ಫೋನ್, 6 ಸಿಮ್ ಕಾರ್ಡುಗಳು, 70ಕ್ಕೂ ಹೆಚ್ಚು ಸಿಗರೇಟ್ ಮತ್ತು ಬೀಡಿ ಪ್ಯಾಕೇಟ್ ಗಳು, ಗುಟ್ಕಾ ಪ್ಯಾಕೇಟ್, ಬ್ಲೇಡ್, ಚಾಕು, ಸೀಜರ್ ಹಾಗೂ ಇತರೆ ವಸ್ತುಗಳು ಸಹ ಪರಿಶೀಲನೆ ವೇಳೆ ಸಿಕ್ಕಿದೆ.

ಜೈಲಿನಲ್ಲಿ ಇವುಗಳನ್ನು ಉಪಯೋಗಿಸಲು ಅವಕಾಶವಿಲ್ಲ. ನಿರ್ಬಂಧಿತ ವಸ್ತುಗಳು ಜೈಲಿನ ಒಳಗೆ ಯಾರು ತೆಗೆದುಕೊಂಡು ಹೋಗಿದ್ದಾರೆ? ಈ ಪ್ರಕರಣದಲ್ಲಿ ಯಾರ ಯಾರ ಕೈವಾಡವಿದೆ ಎಂಬುದನ್ನು ತನಿಖೆಯಿಂದ ತಿಳಿದುಕೊಳ್ಳಬೇಕಾಗಿದೆ. ಅದಕ್ಕಾಗಿ ಜೈಲಿನಲ್ಲಿ ಸಿಕ್ಕ ಮಾದಕ ವಸ್ತುಗಳನ್ನೆಲ್ಲಾ ವಶಕ್ಕೆ ಪಡೆದು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಪೊಲೀಸ್ ಅಧಿಕಾರಿಗಳು ಮುಂದಾಗಿದ್ದಾರೆ.

ಕೊಲೆ ಆರೋಪಿ ಬಳಿ ಮೋಬೈಲ್ ಪತ್ತೆ
ಕಾರಾಗೃಹದಲ್ಲಿರುವ ಕೊಲೆ ಪ್ರಕರಣದ ವಿಚಾರಣಾಧೀನ ಕೈದಿ ಕೇಬಲ್ ಕಿಟ್ಟಿ ಎಂಬುವನ ಬಳಿ 2 ಮೊಬೈಲ್ ಗಳು ಹಾಗೂ 2 ಸಿಮ್ ಗಳು ಸಹ ಪತ್ತೆಯಾಗಿದೆ. ಈತ ಬ್ಯಾಡರಹಳ್ಳಿ ಮೂಲದ ನಿವಾಸಿಯಾಗಿದ್ದು, 8ಕ್ಕೂ ಹೆಚ್ಚು ಅಪರಾಧ ಪ್ರಕರಣ ಹಾಗೂ 3-4 ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಜೈಲಿನಲ್ಲಿದ್ದುಕೊಂಡೇ ಮೊಬೈಲ್ ಬಳಸಿಕೊಂಡು, ತನ್ನ ರೌಡಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಎಂಬ ಮಾಹಿತಿಗಳು ಪೊಲೀಸರಿಗೆ ಸಿಕ್ಕಿವೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಎಸ್.ಗಿರೀಶ್ ತಿಳಿಸಿದ್ದಾರೆ.












Click it and Unblock the Notifications