ಪರಿಷತ್ ಚುನಾವಣೆ; ಕನಕಪುರದಲ್ಲಿ ಮರು ಮತದಾನಕ್ಕೆ ಆದೇಶ!
ರಾಮನಗರ, ಡಿಸೆಂಬರ್ 12; ವಿಧಾನ ಪರಿಷತ್ ಚುನಾವಣೆಗೆ ಡಿಸೆಂಬರ್ 10ರಂದು ಮತದಾನ ನಡೆದಿತ್ತು. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮತಗಟ್ಟೆ ಸಂಖ್ಯೆ 205ರಲ್ಲಿ ಸೋಮವಾರ ಮರು ಮತದಾನಕ್ಕೆ ಆದೇಶ ನೀಡಲಾಗಿದೆ.
ರಾಮನಗರ ಜಿಲ್ಲಾಡಳಿತ ಸೋಮವಾರ ಈ ಕುರಿತು ಆದೇಶ ಹೊರಡಿಸಿದೆ. ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಸಂಬಂಧಿಸಿದಂತೆ ಕನಕಪುರ ತಾಲ್ಲೂಕಿನ ನಾರಾಯಣಪುರ ಮತಗಟ್ಟೆ ಸಂಖ್ಯೆ 205ರಲ್ಲಿ ಡಿಸೆಂಬರ್ 13 ರಂದು ಮರು ಮತದಾನ ನಡೆಯಲಿದೆ.
ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮರು ಮತದಾನ ನಡೆಯಲಿದೆ ಎಂದು ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ. ಚುನಾವಣಾ ಆಯೋಗ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ನಾರಾಯಣಪುರ ಮತಗಟ್ಟೆ ಸಂಖ್ಯೆ 205ರಲ್ಲಿ ಡಿಸೆಂಬರ್ 10 ರಂದು ನಡೆದ ಮತದಾನವನ್ನು ಅಸಿಂಧು ಎಂದು ಘೋಷಣೆ ಮಾಡಿದೆ. ಆದ್ದರಿಂದ ಡಿಸೆಂಬರ್ 13ರಂದು ಮರು ಮತದಾನಕ್ಕೆ ನಡೆಸಲು ನಿರ್ದೇಶನ ನೀಡಲಾಗಿದೆ.

ಡಿ.10 ನಡೆದ ಚುನಾವಣೆ ಅಸಿಂಧು; ಡಿಸೆಂಬರ್ 10ರ ಶುಕ್ರವಾರ ಕನಕಪುರ ತಾಲ್ಲೂಕಿನ ನಾರಾಯಣಪುರ ಮತಗಟ್ಟೆ ಸಂಖ್ಯೆ 205 ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮತದಾನ ಮಾಡುಗ ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದರು.
ಜೆಡಿಎಸ್ ಅಭ್ಯರ್ಥಿಯ ಏಜೆಂಟ್ ನೀತಿಸಂಹಿತೆ ಉಲ್ಲಂಘನೆ ನಡೆದಿದೆ ಹಾಗಾಗಿ ಚುನಾವಣೆಯನ್ನು ಅಸಿಂಧು ಮಾಡುವಂತೆ ದೂರು ಸಲ್ಲಿಸಿದ್ದರು. ನಾರಾಯಣಪುರ ಮತ ಕೇಂದ್ರದಲ್ಲಿ ಕಾಂಗ್ರಸ್ ಪರವಾಗಿ ಮತ ಚಲಾಯಿಸಿದ ಮತದಾರ ಮತಗಟ್ಟೆಯಲ್ಲಿದ್ದ ಕಾಂಗ್ರಸ್ ಏಜೆಂಟ್ಗೆ ತೋರಿಸಿದ್ದಲ್ಲದೇ ತಮ್ಮ ಮೊಬೈಲ್ ವಿಡಿಯೋ ಮಾಡಿಕೊಂಡಿದನ್ನು ಜೆಡಿಎಸ್ ಚುನಾವಣಾ ಏಜೆಂಟ್ ಆಕ್ಷೇಪಿಸಿದ್ದರು. ಈ ಸಮಯದಲ್ಲಿ ಜೆಡಿಎಸ್ ಏಜೆಂಟ್ ರಮೇಶ ಮತ್ತು ಕಾಂಗ್ರಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆದಿತ್ತು.
ಮತಗಟ್ಟೆಯ ಅಧಿಕಾರಿಗಳು ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿದ್ದು, ಮತಕೇಂದ್ರದಲ್ಲಿ ಮೊಬೈಲ್ ಬಳಕೆಗೆ ನಿಷೇಧವಿದ್ದರೂ ಚುನಾವಣಾ ಸಿಬ್ಬಂದಿ ಕಾಂಗ್ರಸ್ ಸದಸ್ಯರಿಗೆ ಮೊಬೈಲ್ ಬಳಕೆಗೆ ಅವಕಾಶ ಮಾಡುಕೊಟ್ಟು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಜೆಡಿಎಸ್ನವರು ಆರೋಪಿಸಿದ್ದರು.
ನಾರಾಯಣಪುರ ಮತಗಟ್ಟೆ ಸಂಖ್ಯೆ 205ರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು ಹಾಗೂ ಕಾಂಗ್ರಸ್ ದಬ್ಬಾಳಿಕೆಗೆ ಸಹಕಾರ ನೀಡಿದ ಚುನಾವಣಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಅಭ್ಯರ್ಥಿ ಎಚ್. ಎಂ. ರಮೇಶಗೌಡ ಚುನಾವಣಾ ಏಜೆಂಟ್ ರವೇಶ್ ವಿಡಿಯೋ ಹೇಳಿಕೆಯನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದರು, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಜೆಡಿಎಸ್ ಏಜೆಂಟ್ ರಮೇಶ್ ದೂರಿನ ಮೇರಿಗೆ ಪರಿಶೀಲನೆ ನಡೆಸಿದ ಚುನಾವಣಾ ಆಯೋಗ ಮೇಲ್ನೋಟಕ್ಕೆ ಚುನಾವಣಾ ಅಕ್ರಮ ಕಂಡು ಬಂದ ಹಿನ್ನಲೆಯಲ್ಲಿ ಡಿಸೆಂಬರ್ 10ರಂದು ನಡೆದ ಮತದಾನವನ್ನು ಅಸಿಂಧುಗೊಳಿಸಿ ಸೋಮವಾರ ಮರು ಮತದಾನಕ್ಕೆ ಆದೇಶ ಮಾಡಿದೆ.
ಶೇ 99ರಷ್ಟು ಮತದಾನ; ಡಿಸೆಂಬರ್ 10ರಂದು ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 99.95 ರಷ್ಟು ಮತದಾನವಾಗಿತ್ತು. ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಸ್ಥಾನಕ್ಕೆ ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆ ನಡೆದ ಮತದಾನದಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದ್ದರು. ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ಕನಕಪುರ ತಾಲೂಕಿನಲ್ಲಿ ಮಾತ್ರ ಒಬ್ಬ ಮತದಾರರ ಮತಚಲಾವಣೆ ಮಾಡಿರಲಿಲ್ಲ. ಮಾಗಡಿ ತಾಲ್ಲೂಕಿನಲ್ಲಿ 879, ರಾಮನಗರ ತಾಲ್ಲೂಕಿನಲ್ಲಿ 390, ಕನಕಪುರ ತಾಲ್ಲೂಕಿನಲ್ಲಿ 677 ಹಾಗೂ ಚನ್ನಪಟ್ಟಣ ತಾಲ್ಲೂಕಿಲ್ಲಿ 513 ಮಂದಿ ಮತದಾನ ಮಾಡಿದ್ದರು. 2059 ಮತಗಳಲ್ಲಿ 2058 ಮತಗಳು ಚಲಾವಣೆಗೊಂಡಿದ್ದವು.












Click it and Unblock the Notifications