ಸಿದ್ದರಾಮಯ್ಯರನ್ನು ಹಣಿಯಲು ಡಿಕೆಶಿ ಯತ್ನ: ಸಿ.ಪಿ. ಯೋಗೇಶ್ವರ್ ಗಂಭೀರ ಆರೋಪ
ರಾಮನಗರ, ಜನವರಿ 6: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಾಂಗ್ರೆಸ್ನಲ್ಲೇ ರಾಜಕೀಯವಾಗಿ ಮುಗಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಹಾಲಿ ಎಂಎಲ್ಸಿ ಸಿ.ಪಿ. ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದರು.
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರದಲ್ಲಿ ಮಾಧ್ಯಮಗಳಿಂದ ದೂರ ಉಳಿದಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಇಂದು ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಮುಖಂಡರ ಮೇಲೆ ಹರಿಹಾಯ್ದರು.
"ಕಾಂಗ್ರೆಸ್ನಲ್ಲಿ ಇತ್ತೀಚಿನ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಮಾಡುವ ಸಭೆ, ಮೀಟಿಂಗ್ಗಳಲ್ಲಿ ನಾನೇ ಮುಂದಿನ ಕಾಂಗ್ರೆಸ್ ಅಧಿಪತಿ ಅನ್ನುವ ರೀತಿ ಬಿಂಬಿಸಿಕೊಳ್ತಿದ್ದಾರೆ. ಇದೆಲ್ಲವನ್ನು ನೋಡಿದರೆ ಸಿದ್ದರಾಮಯ್ಯನವರನ್ನು ಸೈಡ್ಲೈನ್ ಮಾಡಲು ಡಿ.ಕೆ. ಶಿವಕುಮಾರ್ ತೀರ್ಮಾನ ಮಾಡಿದಂತೆ ಕಾಣುತ್ತಿದೆ," ಎಂದು ಆರೋಪಿಸಿದರು.

"ನಾನು ಕೂಡ ಇಷ್ಟು ದಿನ ಈ ಬಗ್ಗೆ ಮಾತನಾಡದೆ ಸುಮ್ಮನೆ ಇದ್ದೆ. ನಮ್ಮ ಪಕ್ಷದ ಕೆಲವರು ಡಿ.ಕೆ. ಶಿವಕುಮಾರ್ಗೆ ಬೆಂಬಲ ಕೊಡುತ್ತಿರುವ ವಿಷಯಗಳೂ ನಮ್ಮ ಹೈಕಮಾಂಡ್ಗೆ ಗೊತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಬಿಜೆಪಿ ಬೆಳೆಯುತ್ತಿದೆ. ಇದೆಲ್ಲಾ ಡಿಕೆ ಬ್ರದರ್ಸ್ಗೆ ಆತಂಕ ಮೂಡುತ್ತಿದೆ," ಎಂದು ಸಿಪಿವೈ ಹೇಳಿದರು.
ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಕುಂಠಿತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯೋಗೇಶ್ವರ್, "ಪಕ್ಷ ನನಗೆ ಒಂದು ಜವಾಬ್ದಾರಿ ನೀಡಬೇಕಾಗಿತ್ತು ಎಂದು ಪಕ್ಷದ ಮೇಲಿನ ಅಸಮಾಧಾನ ವ್ಯಕ್ತಪಡಿಸಿದರು. ಜನವರಿ 15ರ ನಂತರ ಏನೆಲ್ಲಾ ಆಗುತ್ತದೆ ನೋಡೋಣ ಎನ್ನುವ ಮೂಲಕ ಸಂಕ್ರಾಂತಿ ನಂತರ ಅಧಿಕಾರ ಸಿಕ್ಕುವ," ವಿಶ್ವಾಸ ವ್ಯಕ್ತಪಡಿಸಿದರು.
"ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸುದೀರ್ಘವಾಗಿ ಜಿಲ್ಲೆಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಜಿಲ್ಲೆಗೆ ಎಚ್ಡಿಕೆ ಹಾಗೂ ಡಿಕೆಶಿ ಕೆಲವೊಂದು ಅಭಿವೃದ್ಧಿ ಮಾಡಿದ್ದಾರೆ. ಅದನ್ನೇ ದೊಡ್ಡ ರೀತಿಯಲ್ಲಿ ಬಿಂಬಿಸುವ ಅವಶ್ಯಕತೆ ಇಲ್ಲ. ಸಚಿವ ಅಶ್ವಥ್ ನಾರಾಯಣರವರು ರಾಮನಗರ ಜಿಲ್ಲೆಯವರು. ಸಾರ್ವಜನಿಕ ಜೀವನದಲ್ಲಿ ಬಹಳ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ," ಎಂದು ತಿಳಿಸಿದರು.

ಇದಲ್ಲದೇ ಕಳೆದ ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷದಿಂದ ಸುಮಾರು 300 ಜನರು ಬಿಜೆಪಿ ಬೆಂಬಲಿತ ಸದಸ್ಯರು ಇದ್ದರು. ನಮಗೆ ಸಮರ್ಥ ಅಭ್ಯರ್ಥಿ ಸಿಗದೇ ಇರುವ ಕಾರಣ ಹಿನ್ನಡೆಯಾಗಿದೆ. ನಮಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಾನ ಬದ್ಧವೈರಿಗಳು ಎಂದು ಇದೇ ವೇಳೆ ಸಿಪಿವೈ ಸ್ಪಷ್ಟಪಡಿಸಿದರು.
ಮುಳುಗುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಸೇರಲ್ಲ
"ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡರೆ ಸೂಸೈಡ್ ಮಾಡಿಕೊಂಡಂತೆ ಎಂದು ಸಿ.ಪಿ. ಯೋಗೇಶ್ವರ್ ತಿಳಿಸಿದ್ದಾರೆ. ಕೆಲ ಮಾಧ್ಯಮ, ಪತ್ರಿಕೆಗಳಲ್ಲಿ ಈ ಬಗ್ಗೆ ವಿಚಾರ ಪ್ರಸ್ತಾಪ ಆಗಿತ್ತು. ನಾನು ಬಹಳ ಹಿಂದೆಯೇ ಪಕ್ಷಾಂತರ ಮಾಡಿ ಪಕ್ಷಾಂತರಿ ಆಗಿದ್ದೇನೆ. ನಾನು ಭಾರತೀಯ ಜನತಾ ಪಾರ್ಟಿಯಲ್ಲೇ ಇರುತ್ತೇನೆ. ಪಕ್ಷ ಬಿಡುವ ಯಾವುದೇ ಚಿಂತನೆ ಇಲ್ಲ," ಎಂದು ವದಂತಿಗಳನ್ನು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಳ್ಳಿ ಹಾಕಿದರು.
"ನಾನು ರಾಜಕೀಯ ಆರಂಭ ಮಾಡಿ 25 ವರ್ಷಗಳೇ ಕಳೆದಿದೆ. ಕಾಂಗ್ರೆಸ್ ಪಕ್ಷದಿಂದಲೇ ನಾನು ರಾಜಕಾರಣ ಆರಂಭ ಮಾಡಿದ್ದೇನೆ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದ ಸಂದರ್ಭದಲ್ಲೇ ಡಿ.ಕೆ. ಶಿವಕುಮಾರ್ ನನ್ನ ಬೆಳವಣಿಗೆ ಸಹಿಸಿರಲಿಲ್ಲ. ನಂತರದ ದಿನಗಳಲ್ಲಿ ನಾನು ಬಿಜೆಪಿ ಪಕ್ಷ ಸೇರ್ಪಡೆಯಾದೆ. ಡಿ.ಕೆ. ಶಿವಕುಮಾರ್ ನಿರಂತರವಾದ ಕಿರುಕುಳದಿಂದ ನಾನು ಮತ್ತೆ ಬೇರೆ ಪಕ್ಷದಿಂದ ಚುನಾವಣೆ ಎದುರಿಸಿದ್ದೇನೆ," ಎಂದರು.

ಇದಲ್ಲದೆ ನಮ್ಮ ರಾಜಕೀಯ ಏಳಿಗೆ, ನನ್ನ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಡಿಕೆಶಿಗೆ ಚಿಂತನೆ ಇಲ್ಲ. ನಾನು ಯಾವುದೇ ಕಾರಣಕ್ಕೂ ಡಿಕೆ ಬ್ರದರ್ಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ. ಬಿಜೆಪಿ ಸರ್ಕಾರದಿಂದ ನನ್ನ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿಯಾಗಿದೆ. ಬಿಜೆಪಿ ಪಕ್ಷದ ಋಣ ನನ್ನ ತಾಲ್ಲೂಕಿನ ಮೇಲೆ ಇದೆ, ನಾನು ಬಿಜೆಪಿಯಲ್ಲೇ ಮುಂದುವರಿಯುತ್ತೇನೆ. ನಾನು ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡರೆ ಸೂಸೈಡ್ ಮಾಡಿಕೊಂಡಂತೆ ಎಂದು ಸಿಪಿವೈ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೇಕೆದಾಟು ಪಾದಯಾತ್ರೆ ರಾಜಕೀಯ ಪ್ರೇರಿತ
ಮೇಕೆದಾಟು ಇರುವುದು ಡಿ.ಕೆ. ಶಿವಕುಮಾರ್ ಕ್ಷೇತ್ರದಲ್ಲಿ. ಪಾದಯಾತ್ರೆ ವಿಚಾರ, ಮೇಕೆದಾಟು ಬಗ್ಗೆ ಮಾತನಾಡುತ್ತಿದ್ದಾರೆ. ಬೇರೆ ಯಾವುದೇ ದಿನಗಳಲ್ಲಿ ಅವರು ಈ ಬಗ್ಗೆ ಮಾತನಾಡಿಲ್ಲ. ಈ ಹಿಂದೆ ಅವರೇ ಸಾಕಷ್ಟು ಬಾರಿ ಸಚಿವರಾಗಿದ್ದರು. ಆ ವೇಳೆ ಅವರು ಮೇಕೆದಾಟು ಬಗ್ಗೆ ಮಾತನಾಡಲಿಲ್ಲ. ರಾಜಕೀಯ ಉದ್ದೇಶದಿಂದ ಪಾದಯಾತ್ರೆ ಮಾಡಲು ಹೊರಟಿದ್ದಾರೆ ಎಂದು ಎಂಎಲ್ಸಿ ಸಿ.ಪಿ. ಯೋಗೇಶ್ವರ್ ತಿಳಿಸಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಕೆಲವೊಂದು ಟೆಕ್ನಿಕಲ್ ಸಮಸ್ಯೆ ಇದೆ. ಸಿದ್ದರಾಮಯ್ಯರನ್ನು ಕರೆದುಕೊಂಡು ತಮಿಳುನಾಡು ಸಿಎಂ ಜೊತೆ ಮಾತನಾಡಿ ಕೇಸ್ ವಾಪಸ್ಗೆ ಒತ್ತಾಯ ಮಾಡಲಿ. ಸುಪ್ರೀಂ ಕೋರ್ಟ್ನಲ್ಲಿ ಈ ಬಗ್ಗೆ ಕೇಸ್ ನಡೆಯುತ್ತಿದೆ. ಅದನ್ನು ಬಿಟ್ಟು ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡಬಾರದು.
ಎಲ್ಲರೂ ಹೇಳುವ ಹಾಗೆ ಪಾದಯಾತ್ರೆ ರಾಜಕೀಯ ಗಿಮಿಕ್ ಆಗಿದೆ. ಮೇಕೆದಾಟು ಪಾದಯಾತ್ರೆಯಿಂದ ರಾಜಕೀಯವಾಗಿ ಬೆನಿಫಿಟ್ ಆಗುತ್ತದೆ ಅಂದುಕೊಂಡಿದ್ದಾರೆ. ನಮ್ಮ ಭಾಗದ ಜನರು ಇದಕ್ಕೆ ಬೆಂಬಲ ಕೊಡಬಾರದು ಕೊಡುವುದಿಲ್ಲ ಎಂದು ಕೊಂಡಿದ್ದೇನೆಂದು ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷ ಸೂಚಿಸಿದರೆ ಕನಕಪುರದಿಂದಲೇ ಸ್ಪರ್ಧೆ
ಬಿಜೆಪಿ ಹೈಕಮಾಂಡ್ ಕನಕಪುರ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಸೂಚಿಸಿದರೆ ಕನಕಪುರ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದ್ದಾರೆ. ಚನ್ನಪಟ್ಟಣ ನನಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ. ಮುಂದಿನ ಚುನಾವಣೆ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ಅದು ಚನ್ನಪಟ್ಟಣ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದರು.
ಒಂದು ವೇಳೆ ಬಿಜೆಪಿ ಹೈಕಮಾಂಡ್ ಕನಕಪುರ ಕ್ಷೇತ್ರದಿಂದ ನೀವು ಸ್ಪರ್ಧಿಸಬೇಕೆಂದು ತೀರ್ಮಾನ ತೆಗೆದುಕೊಂಡರೆ ನನಗೆ ಯಾವುದೇ ಭಯ ಇಲ್ಲ ಕನಕಪುರದಿಂದಲೇ ಸ್ಪರ್ಧೆ ಮಾಡುತ್ತೇನೆ ಅಥವಾ ಪಕ್ಷ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡು ಎಂದರೆ ಅದಕ್ಕೂ ನಾನು ಸಿದ್ಧ ಎಂದು ಸಿ.ಪಿ. ಯೋಗೇಶ್ವರ್ ತಿಳಿಸಿದರು.












Click it and Unblock the Notifications