ಲೋಕಾಯುಕ್ತದ ಅಧಿಕಾರ ಕಿತ್ತುಕೊಂಡು ಭ್ರಷ್ಟಾಚಾರಕ್ಕೆ ಅನುಕೂಲ ಮಾಡಿದ್ದರು-ಅಶ್ವತ್ಥ್ ನಾರಾಯಣ್
ರಾಮನಗರ ಜನವರಿ18: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಡೀ ವಿಶ್ವದಲ್ಲಿ ಈ ವರ್ಷವನ್ನು ಸಿರಿಧಾನ್ಯದ ವರ್ಷವನ್ನಾಗಿ ಆಚರಣೆ ಮಾಡಲು ನಿರ್ಧರಿಸಿದ್ದಾರೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಬುಧವಾರ ನಗರದ ಕೂಟಗಲ್ ರಸ್ತೆಯ ಶ್ರೀ ಮಂಜುನಾಥ ಕನ್ವೆನ್ಷನ್ ಹಾಲ್ನಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಕಾರ್ಯಗಾರ -2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರು ಹೆಚ್ಚು ಹೆಚ್ವು ಸಿರಿಧಾನ್ಯವನ್ನು ಬಳಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.
ಆಫ್ರಿಕಾ ಹಾಗೂ ಏಷ್ಯಖಂಡಗಳಲ್ಲಿ ಅತಿ ಹೆಚ್ಚಾಗಿ ಸಿರಿಧಾನ್ಯವನ್ನು ಬೆಳೆಯುತ್ತಾರೆ. ಈ ಸಿರಿಧಾನ್ಯವನ್ನು ಭಾರತಕ್ಕೆ ರಫ್ತು ಮಾಡಿ, ದಾಸ್ತಾನು ಮಾಡಬೇಕು, ಬಳಕೆ ಮಾಡಿ ಹೆಚ್ಚು ಮೌಲ್ಯಗಳಿಸಬೇಕು. ಸಿರಿಧಾನ್ಯವನ್ನು ಬೆಳೆಯುತ್ತಿರುವ ರೈತರಿಗೆ ಅನುಕೂಲ ಮಾಡಿಕೊಡಲು ಭಾರತ ಸರ್ಕಾರವು ಬಹಳ ದೊಡ್ಡ ಪ್ರಯತ್ನ ಮಾಡಿದೆ. ಯೋಗವನ್ನು ವಿಶ್ವದೆಲ್ಲೆಡೆ ಹೇಗೆ ಆಚರಿಸಲಾಗುತ್ತಿದೆಯೋ ಹಾಗೆ ಈ ವರ್ಷವನ್ನು ಸಿರಿಧಾನ್ಯ ವರ್ಷವನ್ನಾಗಿ ಆಚರಣೆ ಮಾಡಲಾಗುತ್ತದೆ.
ರಾಮನಗರ ಜಿಲ್ಲೆಯನ್ನು ಆಕರ್ಷಣೆಗೊಳಿಸುವಂತೆ ಮಾಡಿ
ಸಿರಿಧಾನ್ಯವನ್ನು ಏಕೆ ಬಳಕೆ ಮಾಡಬೇಕು, ಸಿರಿಧಾನ್ಯ ಬಳಕೆ ಮಾಡುವುದರಿಂದ ಯಾವ ರೋಗ-ರುಜಿನಗಳಿಲ್ಲದೆ ಆರೋಗ್ಯಕರವಾಗಿರಲು ಸಾಧ್ಯ. ಎಂಬುದನ್ನು ಇಡೀ ವಿಶ್ವಕ್ಕೆ ತಿಳಿಸುವ ಮೂಲಕ ಎಲ್ಲರೂ ಸಿರಿಧಾನ್ಯಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂಬ ಸಂದೇಶವನ್ನು ನೀಡುವುದೆ ಈ ಆಚರಣೆಯ ಉದ್ದೇಶ ಎಂದರು.
ಜಿಲ್ಲೆಯಲ್ಲಿ ಸಿರಿಧಾನ್ಯಗಳನ್ನು ಬಳಸಿಕೊಂಡು ವಿವಿಧ ಬಗೆಯ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡಿ ರಾಜ್ಯದಲ್ಲಿ ರಾಮನಗರ ಜಿಲ್ಲೆಯನ್ನು ಆಕರ್ಷಣೆಗೊಳಿಸುವಂತೆ ಮಾಡಿ ಎಂದು ತಿಳಿಸಿದರು. ಸಿರಿಧಾನ್ಯಗಳ ತಿಂಡಿಯನ್ನು ಮಾಡಿ ಮಾರಾಟ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಹಾಗೂ ಜನರು ಕೂಡ ಆರೋಗ್ಯಕರವಾಗಿರಬಹುದು ಎಂದರು.
ಸಿರಿಧಾನ್ಯ ವ್ಯವಹಾರಕ್ಕೆ ಆ್ಯಪ್
ಸಿರಿಧಾನ್ಯಗಳನ್ನು ಮಾರಾಟ ಮಾಡಲು ಹೆಚ್ಚಿನ ಸಂಖ್ಯೆಯ ಮಾರುಕಟ್ಟೆಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು. ಸಿರಿಧಾನ್ಯಗಳನ್ನು ಬೆಳೆಯಲು ರೈತರಿಗೆ ಸಹಕಾರ ನೀಡಲಾಗುವುದು, ಮಾರುಕಟ್ಟೆಯನ್ನು ನೀಡಲಾಗುವುದು ಹಾಗೂ ಒಳ್ಳೆಯ ಬೆಲೆ ಸಿಗುವ ಹಾಗೆ ಕ್ರಮಕೈಗೊಳ್ಳಲಾಗುವುದು ಸಿರಿಧಾನ್ಯ ಬೆಳೆಗಾರರು ನೇರವಾಗಿ ಮಾರಾಟ ಮಾಡಲು ಹಾಗೂ ಬಳಕೆದಾರರು ನೇರವಾಗಿ ಖರೀದಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಆ್ಯಂಗ್ರಿಯಾನ್ ಆ್ಯಪ್ ಅನ್ನು ಆರಂಭಿಸಲಾಗಿದೆ. ಇದನ್ನು ಸಿರಿಧಾನ್ಯ ಬೆಳೆಗಾರರು ಹಾಗೂ ಬಳಕೆದಾರರು ಉಪಯೋಗಿಸುವಂತೆ ತಿಳಿಸಿದರು.
ಬಿಜೆಪಿ ಬಗ್ಗೆ ಮಾತನಾಡಲು ಕಾಂಗ್ರೆಸ್ಗೆ ಯೋಗ್ಯತೆ ಇಲ್ಲ
ರಾಮನಗರದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಚಿವ ಅಶ್ವಥ್ ನಾರಾಯಣ್, ಮೈತ್ರಿ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಅನುಷ್ಠಾನ ಮಾಡಿರಲಿಲ್ಲ. ರೈತರ ಯಶಸ್ವಿನಿ ಕಾರ್ಯಕ್ರಮ ಮುಂದಿವರೆಸಲಿಲ್ಲ. ರೈತರಿಗೆ ಅನಾನುಕೂಲ ಮಾಡಿ 120ರಿಂದ 80ಕ್ಕೆ ಬಂದರು. ಮುಂದೆ 20 ಸ್ಥಾನಕ್ಕೆ ಬರುತ್ತಾರೆ. ಲೋಕಾಯುಕ್ತ ಅಧಿಕಾರಿ ಕಿತ್ತುಕೊಂಡು ಭ್ರಷ್ಟಾಚಾರಕ್ಕೆ ಅನುಕೂಲ ಮಾಡಿದ್ದರು. ಬಿಜೆಪಿ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ. ಈಗ ಪವರ್ 200ಯೂನಿಟ್ ಉಚಿತ ಎಂದು ಹೇಳುತ್ತಾರೆ. ಆದರೆ ಕತ್ತಲಲ್ಲಿ ಬಜೆಟ್ ಮಂಡಿಸಿದವರು, ಉಚಿತ ವಿದ್ಯುತ್ ಕೊಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಅಂಕಿ ಅಂಶ ಬಿಡುಗಡೆ ಮಾಡಲಿ
ಬೆಲೆ ಏರಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ ಅಶ್ವಥ್ ನಾರಾಯಣ್,
ಸನ್ಮಾನ್ಯ ಕೆಪಿಸಿಸಿ ಅಧ್ಯಕ್ಷರು ಬಹಳ ಬುದ್ಧಿವಂತರು. ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಹಾಗೂ ಬಿಜೆಪಿ ಸರ್ಕಾರದ ಬೆಲೆ ಏರಿಕೆಯ ಅಂಕಿ ಅಂಶ ತೆಗೆದಿಡಲಿ. ಯಾವ ಸರ್ಕಾರದಲ್ಲಿ ಬೆಲೆ ಏರಿಕೆ ಎಷ್ಟಿತ್ತು. ಅಂಕಿ ಅಂಶ ಬಿಡುಗಡೆ ಮಾಡಲಿ. ಕೋವಿಡ್, ರಷ್ಯಾ-ಉಕ್ರೇನ್ ಯುದ್ದ ಹೀಗೆ ಅನೇಕ ಸವಾಲುಗಳನ್ನು ನಾವು ಎದುರಿಸಿದ್ದೇವೆ ಎಂದು ಹೇಳಿದರು.