ಕನಕಪುರದಲ್ಲಿ ರಸ್ತೆಗೆ ಉರುಳಿ ಬಿದ್ದ ಬಸ್, ತಪ್ಪಿದ ಭಾರೀ ಅನಾಹುತ
ಕನಕಪುರ, ಡಿಸೆಂಬರ್ 15: ಪ್ರವಾಸಿಗರು ಪ್ರಯಾಣಿಸುತ್ತಿದ್ದ ಮಿನಿಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿಬಿದ್ದ ಪರಿಣಾಮ ಹಲವರು ಗಾಯಗೊಂಡ ಘಟನೆ ರಾಮನಗರ ಜಿಲ್ಲೆ ಕನಕಪುರದ ಸಂಗಮದಲ್ಲಿ ನಡೆದಿದೆ.
ಬಸ್ ರಸ್ತೆಯ ಅಂಚಿಗೆ ತಾಗಿಕೊಂಡು ನಿಂತಿದ್ದು ಒಂದೊಮ್ಮೆ ಅಂಚಿನಿಂದ ಕೆಳಗೆ ಬಿದ್ದಿದ್ದರೆ ಭಾರೀ ಅನಾಹುತವೇ ನಡೆಯುತ್ತಿತ್ತು. ಕೂದಲೆಳೆ ಅಂತರದಲ್ಲಿ ಅಪಾಯ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕನಕಪುರ ತಾಲೂಕಿನ ಪ್ರೇಕ್ಷಣೀಯ ಸ್ಥಳವಾದ ಸಂಗಮವನ್ನು ನೋಡಲು ಬೆಂಗಳೂರಿನ ಯಲಹಂಕ ವ್ಯಾಪ್ತಿಯ ಆವಲಹಳ್ಳಿಯ ವ್ಯಾಪ್ತಿಯ ನಿವಾಸಿಗಳು ಹಾಗೂ ಸ್ತ್ರೀಶಕ್ತಿ ಸಂಘದ ಸದಸ್ಯರು ಆಗಮಿಸಿದ್ದರು.
ಸುಮಾರು 19 ಜನ ಸದಸ್ಯರಿದ್ದ ಮಿನಿಬಸ್ ಗುರುವಾರ ಬೆಳಿಗ್ಗೆ 5 ಗಂಟೆಗೆ ಆವಲಹಳ್ಳಿಯಿಂದ ಹೊರಟು ಕನಕಪುರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕಬ್ಬಾಳಮ್ಮನ ದೇವಾಲಯಕ್ಕೆ ತಲುಪಿತ್ತು. ಬಳಿಕ ಮುತ್ತತ್ತಿಯಿಂದ ಸಾತನೂರು ಮಾರ್ಗವಾಗಿ ದೊಡ್ಡಾಲಹಳ್ಳಿಯಿಂದ ಸಂಗಮವನ್ನು ನೋಡಲು ತೆರಳಿದ ವೇಳೆ ಸಂಗಮದ ಮೊದಲನೆಯ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿದ ಮಿನಿ ಬಸ್ ರಸ್ತೆಯಲ್ಲಿ ಉರುಳಿ ಬಿದ್ದಿದೆ. ಈ ವೇಳೆ ಬಸ್ ರಸ್ತೆ ಅಂಚಿಗೆ ತಾಗಿ ನಿಂತಿದೆ.
ಒಂದು ವೇಳೆ ಮತ್ತೊಂದು ಪಲ್ಟಿ ಹೊಡೆದಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಆದರೆ ಬಸ್ ಮಗುಚಿ ಬೀಳದ ಕಾರಣ ಸಣ್ಣಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರಾಗಿದ್ದಾರೆ.
ಬಸ್ನಲ್ಲಿದ್ದ ಆವಹಲಳ್ಳಿ ನಿವಾಸಿಗಳಾದ ಸುನಿತಾ, ಪ್ರತಿಭಾ, ಚನ್ನಮ್ಮ, ನಳಿನಾ, ವಾಣಿ, ಇಂದ್ರ, ಲಲಿತಾ, ಅನಿತಾ, ವಸಂತಾ, ರಾಜಮ್ಮ, ಗೌರಮ್ಮ, ಚಿಕ್ಕಮ್ಮ, ಸುಶೀಲಾ, ಸುಮಾ, ಗಂಗಮ್ಮ, ಕಲಾ, ಜಯಮ್ಮ ಮೊದಲಾದವರು ಗಾಯಗೊಂಡಿದ್ದು ಅವರನ್ನು ಆ್ಯಂಬುಲೆನ್ಸ್, ಖಾಸಗಿ ಕಾರು, ವಾಹನಗಳಲ್ಲಿ ಕನಕಪುರ ಹಾಗೂ ದೊಡ್ಡಾಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್, ವಿಕ್ಟೋರಿಯಾ ಹಾಗೂ ಎಂ.ಎಸ್. ರಾಮಯ್ಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಚಾಲಕ ನಾಗರಾಜು ಸೇರಿದಂತೆ ಚನ್ನಮ್ಮ, ವಸಂತ ಅವರಿಗೆ ದೊಡ್ಡಾಲಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಸಾತನೂರು ಪೊಲೀಸರು ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.