25 ಬಿಜೆಪಿ ಸಂಸದರಿಗೆ ಸವಾಲು ಹಾಕಿದ ಡಿ. ಕೆ. ಶಿವಕುಮಾರ್
ರಾಮನಗರ, ಆಗಸ್ಟ್ 15; "ರಾಜ್ಯದ 25 ಸಂಸದರು ಹೋರಾಟ ಮಾಡಿ, ಧರಣಿ ಮಾಡಿ ಮೇಕೆದಾಟು ಯೋಜನೆ ಪ್ರಾರಂಭ ಮಾಡಿಸಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬಿಜೆಪಿ ಸಂಸದರಿಗೆ ಸವಾಲು ಹಾಕಿದರು.
ಭಾನುವಾರ ಕನಕಪುರದಲ್ಲಿ ಮಾತನಾಡಿದ ಅವರು, "ಮೇಕೆದಾಟು ವಿಚಾರದಲ್ಲಿ ಸಚಿವರುಗಳು ಪ್ರಚಾರಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಧೈರ್ಯ, ಭದ್ದತೆ ಇದ್ದರೆ ಪ್ರಧಾನಮಂತ್ರಿ ಹಾಗೂ ಕೇಂದ್ರ ನೀರಾವರಿ ಸಚಿವರನ್ನು ಭೇಟಿ ಮಾಡಲಿ" ಎಂದರು.
"ರಾಜ್ಯದ 25 ಸಂಸದರು ಹೋರಾಟ ಮಾಡಿ, ಧರಣಿ ಮಾಡಿ ಮೇಕೆದಾಟು ಯೋಜನೆ ಪ್ರಾರಂಭ ಮಾಡಿಸಬೇಕು. ಬೆಂಗಳೂರಿನಲ್ಲಿರುವ 3 ಮಂದಿ ಸಂಸದರು ಹೋರಾಟ ಮಾಡಬೇಕು. ಕಾರಣ ಈ ಯೋಜನೆಯಿಂದ ಬೆಂಗಳೂರಿನ ಜನರಿಗೆ ಕುಡಿಯುವ ನೀರು ಸಿಗುತ್ತದೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.

"ಈ ಯೋಜನೆಗೆ ಕ್ಷೇತ್ರದ ಜನರಾಗಿ ನಾವು ತಕರಾರು ಮಾಡಬೇಕು. ನಾವೇ ಯೋಜನೆ ಮಾಡಿ ಎಂದು ಹೇಳುತ್ತಿದ್ದೇವೆ. ಎಷ್ಟು ಜಮೀನು ಹೋದರು ಹೋಗಲಿ ಜನರನ್ನ ನಾನು ಒಪ್ಪಿಸುತ್ತೇನೆ. ಈ ಯೋಜನೆಯಲ್ಲಿ ಒಂದು ಎಕರೆಗು ನೀರು ಬಳಸಿಕೊಳ್ಳುವುದಿಲ್ಲ. ಎಲ್ಲವು ಕುಡಿಯುವ ನೀರಿಗಾಗಿ ಅಷ್ಟೇ" ಎಂದು ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
"ಈ ಯೋಜನೆಯಲ್ಲಿ ವಿದ್ಯುತ್ ತಯಾರು ಮಾಡಿದರೆ ತಮಿಳುನಾಡಿನ ಸರಕಾರವೇ ಖರೀದಿ ಮಾಡಲಿ. ಸಚಿವ ಅಶ್ವಥ್ ನಾರಾಯಣ್ ಕೇಂದ್ರ ಸರಕಾರ ಮೇಕೆದಾಟು ವಿಚಾರವಾಗಿ ನಮ್ಮ ಪರ ಇದೆ ಅಂತಾ ಹೇಳಿದ್ದಾರೆ. ಈ ಒಂದು ಮಾತು ಸಾಕು ತಮಿಳುನಾಡಿನ ಸರಕಾರಕ್ಕೆ ಇದನ್ನೇ ಹಿಡಿದುಕೊಂಡು ಕೋರ್ಟ್ಗೆ ಅರ್ಜಿ ಸಲ್ಲಿಸಿ ಬಿಡುತ್ತಾರೆ" ಎಂದರು.
"ಕೇಂದ್ರ ಹಾಗೂ ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಸರಕಾರ ಇದ್ದರೆ ಕೆಲಸ ಹಾಗಾಗುತ್ತೆ ಅಂತಾ ಅಶ್ವಥ್ ನಾರಾಯಣ್ ಹೇಳಿದ್ದರು. ಅವರು ಈಗ ಮಾಡಿಸಲಿ, ಬೇಜವಬ್ದಾರಿ ಹೇಳಿಕೆಗಳನ್ನು ಕೊಡಬಾರದು. ಅಶ್ವಥ್ ನಾರಾಯಣ್ ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲ ಅವರು ಸಚಿವರು. ಹೇಳಿಕೆ ಕೊಡುವಾಗ ಜವಾಬ್ದಾರಿಯಾಗಿ ಮಾತನಾಡಬೇಕು" ಎಂದು ಸಲಹೆ ನೀಡಿದರು.
"ಸಂಸದರು ಹಾಗೂ ಸಚಿವರು ಮೋದಿ ಮುಂದೆ ಮಾತನಾಡಲು ಹೆದುರುತ್ತಿದ್ದಾರೆ. ಎಲ್ಲಿ ನಮ್ಮ ಸ್ಥಾನ, ಅಧಿಕಾರ ಹೋಗುತ್ತೆ ಎಂದು ಮಹದಾಯಿ ವಿಚಾರ ಆಗಲಿ ಯಾವುದೇ ವಿಚಾರ ಆಗಲಿ ಮೋದಿ ಮುಂದೆ ಮಾತನಾಡಲು ಬೊಮ್ಮಾಯಿ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಮಾತಿಲ್ಲ" ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರಕ್ಕೆ ಸವಾಲು; ಕರ್ನಾಟಕ ಸರ್ಕಾರದ ಪ್ರಸ್ತಾವಿತ ಮೇಕೆದಾಟು ಕುಡಿಯುವ ನೀರಿನ ಯೋಜನೆ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಸವಾಲಾಗಿದೆ. ಯೋಜನೆಗೆ ತಮಿಳುನಾಡು ಮತ್ತು ಪುದುಚೇರಿ ಸರ್ಕಾರಗಳು ವಿರೋಧ ವ್ಯಕ್ತಪಡಿಸುತ್ತಿವೆ. ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಒಳಪಡುವ ರಾಜ್ಯಗಳ ಒಪ್ಪಿಗೆ ಇಲ್ಲದೇ ಯೋಜನೆ ಜಾರಿಗೊಳಿಸುವುದು ಸಾಧ್ಯವಿಲ್ಲ.
ಕಳೆದ ವಾರ ಲೋಕಸಭೆ ಕಲಾಪದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇಕೆದಾಟು ಯೋಜನೆ ಕುರಿತು ವಿಚಾರ ಪ್ರಸ್ತಾಪಿಸಿದ್ದರು. ಆಗ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಉತ್ತರವನ್ನು ನೀಡಿದ್ದರು. "ಮೇಕೆದಾಟು ಯೋಜನೆ ಡಿಪಿಆರ್ಗೆ ಕೇಂದ್ರ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಆದರೆ ಕಾವೇರಿ ಕಣಿವೆಯ ಕೆಳಹಂತದ ರಾಜ್ಯಗಳ ಒಪ್ಪಿಗೆ ಅಗತ್ಯವಿದೆ. ಕರ್ನಾಟಕ ಡಿಪಿಆರ್ ಸಲ್ಲಿಕೆ ಮಾಡಿದಾಗಲೇ ಇದನ್ನು ಸ್ಪಷ್ಟಪಡಿಸಲಾಗಿತ್ತು" ಎಂದು ಸಚಿವರು ಉತ್ತರಿಸಿದ್ದರು.
"ಯೋಜನೆ ಕುರಿತು ಕರ್ನಾಟಕ ಸಲ್ಲಿಕೆ ಮಾಡಿರುವ ಅರ್ಜಿಯ ಪರಿಶೀಲನೆಗೆ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸೂಚನೆ ನೀಡಲಾಗಿದೆ. ಈ ಸಂಬಂಧ ಅಗತ್ಯವಿರುವ ದಾಖಲೆಗಳನ್ನು ನಿರೀಕ್ಷೆ ಮಾಡಲಾಗುತ್ತಿದೆ" ಎಂದು ಸಚಿವರು ಉತ್ತರ ಕೊಟ್ಟಿದ್ದರು.
ಕರ್ನಾಟಕದಲ್ಲಿನ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಮೇಕೆದಾಟು ಯೋಜನೆ ಜಾರಿಗೊಳಿಸಿ. ಕೇಂದ್ರದಲ್ಲಿ ಇರುವುದು ಸಹ ನಿಮ್ಮದೇ ಸರ್ಕಾರ ಎಂದು ಬಿಜೆಪಿಯನ್ನು ಒತ್ತಾಯಿಸುತ್ತಿವೆ. ಆದರೆ ತಮಿಳುನಾಡು ಬಿಜೆಪಿ ಯೋಜನೆಗೆ ವಿರೋಧವನ್ನು ವ್ಯಕ್ತಪಡಿಸುತ್ತಿದೆ.












Click it and Unblock the Notifications