ಕೆಪಿಸಿಸಿ ಸದಸ್ಯ ಎ.ಮಂಜು ಜೆಡಿಎಸ್ ಸೇರ್ಪಡೆಗೆ ವೇದಿಕೆ ಸಜ್ಜು
ರಾಮನಗರ, ನವೆಂಬರ್ 04: ಈಗಾಗಲೇ ಕಾಂಗ್ರೆಸ್ ನಿಂದ ಒಂದು ಕಾಲು ಹೊರಗೆ ಇಟ್ಟಿರುವ ಮಾಗಡಿ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜು ಕಾಂಗ್ರೆಸ್ ತೊರೆದು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೆ ವೇದಿಕೆ ಸಿದ್ಧವಾಗಿದೆ.
ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಇದೇ ನವೆಂಬರ್ 10ರಂದು ಬೆಂಗಳೂರಿನಲ್ಲಿರುವ ಜೆಡಿಎಸ್ ಪಕ್ಷದ ಜೆಪಿ ಭವನದಲ್ಲಿ ಸೇರ್ಪಡೆಗೊಳ್ಳುವುದಾಗಿ ಎ.ಮಂಜು ರಾಮನಗರದಲ್ಲಿ ಶನಿವಾರ ಹೇಳಿದರು.
ಜೆಡಿಎಸ್ ಸೇರ್ಪಡೆಯ ಹಿನ್ನೆಲೆಯಲ್ಲಿ ಮಾಗಡಿ ಕ್ಷೇತ್ರದಲ್ಲಿ ಹಲವಾರು ಸರಣಿ ಸಭೆಗಳನ್ನು ನಡೆಸಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರುಗಳ ಅಶೀರ್ವಾದ ಪಡೆದು ಪಕ್ಷ ಸೇರುವುದಾಗಿ ತಿಳಿಸಿದರು.
ಹಿಂದಿನಿಂದಲೂ ನನ್ನೂಟಿಗೆ ಗುರುತಿಸಿಕೊಂಡಿದ್ದ ಹವಾರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಮತ್ತು ಚುನಾಯಿತ ಜನಪ್ರತಿನಿಧಿಗಳ ಬೆಂಬಲ ಪಡೆದು ಜೆಡಿಎಸ್ ಪಕ್ಷ ಸೇರುತ್ತಿದ್ದೇನೆ ಎಂದರು.

ಡಿಸೆಂಬರ್ ನಲ್ಲಿ ಬೃಹತ್ ಸಮಾವೇಶ
ಡಿಸೆಂಬರ್ ತಿಂಗಳಲ್ಲಿ ಕುಮಾರಸ್ವಾಮಿ ಮತ್ತು ದೇವೇಗೌಡ ಅವರು ಸೂಚಿಸಿದ ದಿನಾಂಕದಂದು ಮಾಗಡಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು. ಈ ವೇಳೆ ನನ್ನ ಅಪಾರ ಬೆಂಬಲಿಗರು ಪಕ್ಷ ಸೇರಲಿದ್ದಾರೆ ಎಂದು ಎ.ಮಂಜು ತಿಳಿಸಿದರು.

ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದಲ್ಲಿ ಮಂಜು
ಈಗಾಗಲೇ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಂಗಮವಾಗಿದೆ. ಎಲ್ಲರು ಇಟ್ಟಾಗಿ ಕ್ಷೇತ್ರದಲ್ಲಿ ಜೆಡಿಎಸ್ ಕಟ್ಟುವ ಸಂಕಲ್ಪ ಮಾಡಿದ್ದೇವೆ. ಎಲ್ಲರು ಒಟ್ಟಾಗಿ ಕ್ಷೇತ್ರದ ಎಲ್ಲಾ ಚುನಾವಣೆಯನ್ನು ಎದುರಿಸುತ್ತೇವೆ ಮತ್ತು ಗೆಲುವು ಸಾದಿಸುತ್ತೇವೆ ಎಂದು ಎ.ಮಂಜು ವಿಶ್ವಾಸ ವ್ಯಕ್ತಪಡಿಸಿದರು.

ಬಾಲಕೃಷ್ಣ ವಿರುದ್ಧ ಎ.ಮಂಜು
ಜೆಡಿಎಸ್ ಭಿನ್ನಮತೀಯ ಶಾಸಕ ಬಾಲಕೃಷ್ಣ ಜೆಡಿಎಸ್ ನಿಂದ ಕೈ ಪಾಳಯಕ್ಕೆ ಜಿಗಿದಿದ್ದಾರೆ. ಇದಕ್ಕೆ ತಿರುಗೇಟು ನೀಡುವಂತೆ ಕಾಂಗ್ರೆಸ್ ನ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜು ಅವರನ್ನು ಜೆಡಿಎಸ್ ಸೆಳೆದಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಾಲಕೃಷ್ಣ ವಿರುದ್ಧ ಮಂಜು ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಮಾಸ್ಟರ್ ಪ್ಲಾನ್ ಮಾಡಿದೆ.

ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಮಂಜು
ಇನ್ನು ಎ. ಮಂಜು ಅಧಿಕೃತವಾಗಿ ಜೆಡಿಎಸ್ ಗೆ ಸೇರ್ಪಡೆಯಾಗಿಲ್ಲ. ಆಗಲೇ 2018ರ ವಿಭಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಡದಿ ಪಟ್ಟಣದಲ್ಲಿ ನೆಲ್ಲಿಗುಡ್ಡ ಕೆರೆಗೆ ಜೆಡಿಎಸ್ ವತಿಯಿಂದ ಬಾಗಿನ ಅರ್ಪಣೆ ಮತ್ತು ಗಂಗೆ ಪೂಜೆ ಕಾರ್ಯಕ್ರಮ ನಡೆಸಿದ್ದರು.












Click it and Unblock the Notifications