ಅವಮಾನ ಮಾಡಿದರೆ ಕೂಗುವುದು ರೇಗುವುದು ಬೇಕಿಲ್ಲ, ಶಾಂತವಾಗಿದ್ದೇ ಹೀಗೆ ಮಾಡಿ ಎದುರಿನವರು ದಾರಿಗೆ ಬರ್ತಾರೆ
ಪ್ರತಿಯೊಬ್ಬರಿಗೂ ಆತ್ಮಗೌರವ ಅನ್ನೋದು ಬಹಳ ಮುಖ್ಯ. ಅದಕ್ಕೆ ಸಣ್ಣ ಪೆಟ್ಟು ಬಿದ್ದರೂ ನಮ್ಮ ಭಾವನೆಗಳು, ಅಹಂ ಎರಡೂ ಒಡೆದು ಹೋಗುತ್ತವೆ. ಅನೇಕ ಸಲ ನಮಗೆ ಎದುರಿನವರು ಅಗೌರವ ತೋರಿಸಿದಾಗ ಅಥವಾ ಮಾತಿನಲ್ಲೇ ಅವಮಾನ ಮಾಡಿದಾಗ ಒಂದು ಸಲಕ್ಕೆ ಫ್ರೀಜ್ ಆಗಿ ಬಿಡುತ್ತೇವೆ. ಇಲ್ಲಾ ಸಿಟ್ಟಿಗೆದ್ದು ಬಾಂಬಿನಂತೆ ಸಿಡೀತೇವೆ. ಇನ್ನು ಕೆಲವರು ನಕ್ಕು ಸುಮ್ಮನಾಗುತ್ತಾರೆ. ಆದರೆ ಆಮೇಲೆ ಈ ಬಗ್ಗೆ ಯೋಚಿಸಿದಾಗ ಛೇ, ನಾನು ಆ ರೀತಿ ಉತ್ತರ ಕೊಡಬಹುದಿತ್ತು, ಸುಮ್ಮನೆ ಇರಬಾರದಿತ್ತು ಅಥವಾ ಈ ರೀತಿ ಮಾತನಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದೆಲ್ಲಾ ಅಂದುಕೊಳ್ಳುತ್ತೇವೆ. ಅಷ್ಟರಲ್ಲಿ ಕಾಲ ಮೀರಿ ಹೋಗಿರುತ್ತದೆ. ಅದಕ್ಕಾಗಿಯೇ ಇಂಥಹ ಸನ್ನಿವೇಶ ಎದುರಾದಾಗ ಶಾಂತವಾಗಿದ್ದುಕೊಂಡು ದೃಢವಾಗಿ ಪ್ರತಿಕ್ರಿಯಿಸುವುದು ಹೇಗೆ ಎನ್ನುವುದನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಅನಗತ್ಯವಾಗಿ ಕೂಗಿ ಕಿರುಚಾಡಿ, ನಾಟಕೀಯ ಸನ್ನಿವೇಶ ನಿರ್ಮಿಸುವುದರ ಬದಲು ನಿಮ್ಮ ಸ್ವಾಭಿಮಾನವನ್ನು ಉಳಿಸಿಕೊಳ್ಳುವುದು ಹೇಗೆ ಎಂದು ನೋಡಿಕೊಳ್ಳಬೇಕು.
ಸಾಮಾಜಿಕ ಮನೋವಿಜ್ಞಾನವನ್ನು ಆಧರಿಸಿ ಮನಶ್ಶಾಸ್ತ್ರಜ್ಞ ಜಿಯಾಡ್ ರೌಮಿ, ಇಂಥ ಸ್ಥಿತಿಯಲ್ಲಿ ಯಾವ ರೀತಿ ವರ್ತಿಸಬೇಕು ಎನ್ನುವುದನ್ನು ಬಹಳ ಸರಳವಾಗಿ ತಿಳಿಸಿದ್ದಾರೆ. ಈ ಕುರಿತಾದ ಮೂರು-ಹಂತದ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಕೂಗಾಡದೆ, ಅಳದೆ, ಅತಿಯಾಗಿ ಮಾತನಾಡದೆ ವರ್ತಿಸಿದರೆ ಅದು ಹೇಗೆ ಪರಿಣಾಮಕಾರಿಯಾಗಿರುತ್ತದೆ ಎಂಬುದನ್ನು ವಿವರಿಸಿದ್ದಾರೆ.

ಹಂತ 1: ಎದುರಿನವರ ಯಾವ ಮಾತಿನಿಂದ ನಿಮ್ಮ ಮನಸ್ಸಿಗೆ ಘಾಸಿಯಾಗಿದೆಯೋ ಆ ಮಾತನ್ನು ರಿಪೀಟ್ ಮಾಡುವುದಕ್ಕೆ ಹೇಳಿ. ಒಂದು ಸಣ್ಣ ಪಾಸ್ ತೆಗೆದುಕೊಳ್ಳಿ. ಆತುರಪಡಬೇಡಿ, ಊರೆಲ್ಲಾ ಕೇಳುವ ರೀತಿ ಕಿರುಚಾಡಬೇಡಿ, ಅಳಬೇಡಿ, ನೀವು ಹಾಗಲ್ಲ ಎಂದು ನಿರೂಪಿಸುವ ಅಗತ್ಯವೂ ಇಲ್ಲ. ಬದಲಿಗೆ ನಿಧಾನವಾಗಿ, ಅವರ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ. ನೀವು ಹೇಳಿದ್ದು ಸರಿಯಾಗಿ ಅರ್ಥ ಆಗಿಲ್ಲ, ಈಗ ಹೇಳಿದ್ದನ್ನೇ ಮತ್ತೊಂದು ಸಲ ಹೇಳಬಹುದಾ ಅಂತ ಬಹಳ ಶಾಂತ ರೀತಿಯಲ್ಲಿ ಕೇಳಿ. ಇಲ್ಲಿ ನೀವು ಆ ವ್ಯಕ್ತಿಯ ಜೊತೆ ಜಗಳ ಮಾಡ್ತಾ ಇಲ್ಲ, ಬ್ಯಾಯ್ದಾಡುತ್ತಾ ಇಲ್ಲ ಬದಲಿಗೆ ಅವರು ಹೇಳಿದ ಮಾತಿನ ಅರ್ಥವನ್ನು ಅವರಿಗೇ ತಿಳಿಸಲು ಬಯಸ್ತಾ ಇದ್ದೀರಿ ಅನ್ನುವ ಸತ್ಯ ಆ ವ್ಯಕ್ತಿಗೂ ಅರಿವಾಗುತ್ತದೆ.ಹಾಗಾಗಿ ಅವರು ತಾವಾಡಿದ ಮಾತನ್ನು ರಿಪೀಟ್ ಮಾಡುವುದಿಲ್ಲ, ಸ್ವಲ್ಪ ಮೆತ್ತಗಾಗುತ್ತಾರೆ. ಈಗ ಅವರು ನಡೆದುಕೊಂಡ ರೀತಿ ಸರಿಯಿಲ್ಲ ಎನ್ನುವುದು ಅಲ್ಲಿರುವ ಎಲ್ಲರಿಗೂ ಸ್ಪಷ್ಟವಾಗುತ್ತದೆ.
ಹಂತ 2: ಒಂದು ವೇಳೆ ಅವರು ಆಡಿದ ಮಾತುಗಳನ್ನು ರಿಪೀಟ್ ಮಾಡಿ ತಮ್ಮ ವಾದವನ್ನು ಸಮರ್ಥಿಸಿಕೊಂಡರೆ ಸುಮ್ಮನೆ ನಕ್ಕು ಸುಮ್ಮನಾಗಬೇಡಿ. ಅವರು ಮಾತನಾಡುವುದನ್ನು, ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದನ್ನು ಮುಗಿಸಿದಾಗ, ನೀವು ಹೇಗೇಯೇ ಹೇಳಿರಲಿ ನನಗೆ ಮನಸ್ಸಿಗೆ ಮಾತ್ರ ನೋವಾಯಿತು ಎನ್ನುವುದನ್ನು ಸ್ಪಷ್ಟವಾಗಿ ಹೇಳಿ. ಹೀಗೆ ನೀವು ನೀಡುವ ಸ್ಪಷ್ಟನೆ ಎರಡು ಪ್ರಮುಖ ಕೆಲಸಗಳನ್ನು ಮಾಡುತ್ತದೆ:
- ಅವರ ಮಾತುಗಳು ಲೈನ್ ಕ್ರಾಸ್ ಮಾಡಿದೆ ಎನ್ನುವುದನ್ನು ಅವರಿಗೆ ಸ್ಪಷ್ಟವಾಗಿ ಸೂಚಿಸುತ್ತದೆ. ನೀವು ರೇಗುತ್ತಿಲ್ಲ, ಕೂಗುತ್ತಿಲ್ಲ ಎಂದಾದರೂ ಅವರ ಮಾತಿನ ಅರ್ಥ ನಿಮಗೆ ಚೆನ್ನಾಗಿಯೇ ಆಗಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತಿದ್ದೀರಿ.
ಹಂತ 3: ಒಂದು ಸ್ಪಷ್ಟ ಬೌಂಡರಿ ಹಾಕಿಕೊಳ್ಳಿ. ಇಲ್ಲಿ ಯಾರು ಸರಿ ಯಾರು ತಪ್ಪು ಎನ್ನುವುದರ ಬಗ್ಗೆ ವಾದಕ್ಕೆ ಇಳಿಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಭವಿಷ್ಯದಲ್ಲಿ ನೀವು ಏನನ್ನು ನಿರೀಕ್ಷಿಸುತ್ತೀರಿ ಎಂಬುದರ ಕಡೆಗೆ ಗಮನ ನೀಡಿ. ಮುಂದೆ ಇಂಥ ಘಟನೆ ನಡೆಯುವುದಿಲ್ಲ ಎನ್ನುವ ನಂಬಿಕೆಯಿದೆ ಎಂದು ಹೇಳುವ ಮೂಲಕ ಒಂದು ಬೌಂಡರಿ ಸೆಟ್ ಮಾಡಿಕೊಳ್ಳಿ. ಅಲ್ಲಿಗೆ ನಿಮ್ಮ ಲಿಮಿಟ್ ನಲ್ಲಿ ಇರಿ ಎನ್ನುವುದನ್ನು ಸೂಕ್ಷ್ಮವಾಗಿ ಅವರಿಗೆ ಹೇಳಿದ ಹಾಗಿರುತ್ತದೆ. ಇದು ಬಹಳ ಮುಖ್ಯ ಮತ್ತು ಪ್ರಬಲವಾದದ್ದು. ಇದು ಭವಿಷ್ಯದ ಸಂವಹನಗಳಿಗೆ ಮಾನದಂಡವನ್ನು ನಿರ್ಧರಿಸುತ್ತದೆ. ನಿಮ್ಮ ನಿರೀಕ್ಷೆಯನ್ನು ಬೆದರಿಕೆಯಾಗಿ ಅಲ್ಲ, ನಂಬಿಕೆಯಾಗಿ ರೂಪಿಸುತ್ತದೆ.
ಅವರು ಮುಂದೆ ನಿಮ್ಮ ಬಳಿ ಮಾತನಡಬೇಕು ಎಂದಾದಾಗ ಗೌರವವು ಮೂಲ ತತ್ವ ಎಂದು ನೀವು ಶಾಂತವಾಗಿ ಹೇಳಿದ ಹಾಗೆ ಆಗುತ್ತದೆ. ನೀವು ಯಾರನ್ನೂ ಬದಲಿಸಲು ಸಾಧ್ಯವಿಲ್ಲ, ಅದು ಬೇಕಾಗಿಯೂ ಇರುವುದಿಲ್ಲ. ಆದರೆ ಅವರೊಂದಿಗೆ ನೀವು ಹೇಗೆ ವರ್ತಿಸುತ್ತೀರಿ ಎನ್ನುವುದಷ್ಟೇ ಮುಖ್ಯ. ಯಾರ ಅಸಭ್ಯ ವರ್ತನೆಯನ್ನೂ ನೀವು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ಎಷ್ಟು ಬೇಗ ಅವರ ತಪ್ಪನ್ನು ಅವರ ಅರಿವಿಗೆ ತರುತ್ತೀರಿ ಎನ್ನುವುದು ಮುಖ್ಯ. ನಿಮ್ಮ ಮಿತಿ ಇಷ್ಟೇ ಎನ್ನುವ ಸ್ಪಷ್ಟವಾದ ಗೆರೆ ಎಳೆದರೆ ಅವರು ನಿಮ್ಮೊಡನೆ ತೋರುವ ವರ್ತನೆಯನ್ನು ನಿಯಂತ್ರಿಸಬಹುದು.
ನಿಮಗೂ ಯಾರಾದರೂ ಅಗೌರವ ತೋರಿದರೆ ಈ ಮೂರು ಹಂತಗಳಲ್ಲಿ ಯಾವುದನ್ನು ಬಳಸಬಹುದು ಎನ್ನುವುದನ್ನು ಯೋಚಿಸಿ ನೋಡಿ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications