ಕರ್ನಾಟಕಕ್ಕೆ ಆದ ಅನ್ಯಾಯ ಸರಿಪಡಿಸಿದ ನಂತರ ಕೇಂದ್ರ ನಾಯಕರು ಬರಲಿ; ಎಚ್ಡಿಕೆ
ರಾಮನಗರ, ಮಾರ್ಚ್ 30: ಕರ್ನಾಟಕದಲ್ಲಿ ಚುನಾವಣಾ ವರ್ಷ ಪ್ರಾರಂಭವಾಗಿದೆ, ಹಾಗಾಗಿ ಪ್ರತಿದಿನ ಒಂದಲ್ಲಾ ಒಂದು ಕಾರಣಕ್ಕೆ ರಾಷ್ಟ್ರೀಯ ರಾಜಕೀಯ ನಾಯಕರು ರಾಜ್ಯಕ್ಕೆ ಬಂದು ಮತ ಪಡೆಯಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಮೊದಲು ರಾಜ್ಯದ ಸಮಸ್ಯೆ ಬಗೆಹರಿಸಿ ನಂತರ ಮತ ಕೇಳಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ರಾಮನಗರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮತ್ತು ಪುರೋಹಿತ ರಾಜ್ಯ ಸಭೆಯು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ರಾಜ್ಯಕ್ಕೆ ಅಮಿತ್ ಶಾ- ರಾಹುಲ್ ಗಾಂಧಿ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
"ಕರ್ನಾಟಕದಲ್ಲಿ ಚುನಾವಣಾ ವರ್ಷ ಪ್ರಾರಂಭವಾಗಿದ್ದು, ರಾಷ್ಟ್ರೀಯ ಪಕ್ಷಗಳ ನಾಯಕರು ಮೊದಲು ನಮ್ಮ ರಾಜ್ಯದ ನದಿ ನೀರಿನ ಸಮಸ್ಯೆ ಬಗೆಹರಿಸಿಕೊಂಡು ಬಂದು ಮತ ಕೇಳುವುದು ಧರ್ಮ. ನಮ್ಮ ಕಣ್ಣ ಮುಂದೆ ನಮ್ಮ ನದಿಗಳ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ನಮಗೆ ಆಗಿರುವ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಕೆಲಸ ಮಾಡಬೇಕಿದೆ," ಎಂದು ಎಚ್ಡಿಕೆ ಸಲಹೆ ನೀಡಿದರು.

ಏ.10ರಿಂದ ಜೆಡಿಎಸ್ ಹೋರಾಟ ಪ್ರಾರಂಭ
"ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಮಾಡಿರುವ ಅನ್ಯಾಯ, ನದಿ ನೀರಿನ ವಿಚಾರ ಹಾಗೂ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ನಮ್ಮ ಬೇಡಿಕೆಗಳನ್ನು ಪೂರೈಸದೆ, ಪಕ್ಕದ ರಾಜ್ಯಗಳಿಗೆ ಹೋಲಿಕೆ ಮಾಡಿ ನಮ್ಮನ್ನು ಅತ್ಯಂತ ನಗಣ್ಯವಾಗಿ ಪರಿಗಣಿಸಿ, ನಮ್ಮನ್ನು ನಿರ್ಲಕ್ಷ್ಯ ಮಾಡಿರುವ ಧೋರಣೆಗಳನ್ನು ಜನತೆಯ ಮುಂದೆ ಇಟ್ಟು ಹೋರಾಟ ಮಾಡುತ್ತೇನೆ," ಎಂದರು.
"ಮುಂದಿನ ಏ.10ನೇ ತಾರೀಖಿನಿಂದ ನಮ್ಮ ಸಂಘಟನೆ ಪ್ರಾರಂಭವಾಗಲಿದೆ. ಹೆಚ್ಚು ಪ್ರಚಾರ ಮಾಡಿ ಹೇಳುವ ಬದಲು, ನಿಮಗೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಹೋರಾಟ ತಿಳಿಯಲಿದೆ. ರಾಜ್ಯವನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಉತ್ತಮ ರಾಜ್ಯ ನಿರ್ಮಾಣಕ್ಕೆ ಚುನಾವಣೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಜನರಿಗೆ ಸಂದೇಶ ನೀಡುತ್ತೇವೆ," ಎಂದು ಮಾಜಿ ಸಿಎಂ ಹೇಳಿದರು.
ಗುಜರಾತ್ ಚುನಾವಣೆಯೊಂದಿಗೆ ರಾಜ್ಯದ ಚುನಾವಣೆ ಆಗಬಹುದು
"ಅವಧಿಗೂ ಮುನ್ನವೇ ರಾಜ್ಯದಲ್ಲಿ ಚುನಾವಣೆ ಬಂದರೂ ಅಚ್ಚರಿ ಇಲ್ಲ. ರಾಜಕೀಯ ವಿಶ್ಲೇಷಕರ ಪ್ರಕಾರ ಗುಜರಾತ್ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಜೊತೆಗೆ ಕರ್ನಾಟಕದಲ್ಲಿಯೂ ಚುನಾವಣೆ ನಡೆದರೂ ನಡೆಯಬಹುದು. ಇಲ್ಲ ಮಾಮೂಲಿನಂತೆ ಮುಂದಿನ ಏಪ್ರಿಲ್ನಲ್ಲಿಯೂ ನಡೆಯಬಹುದು, ಯಾವಾಗ ನಡೆದರೂ ಕೂಡ ಚುನಾವಣೆ ಎದುರಿಸಲು ಜೆಡಿಎಸ್ ಸಿದ್ಧವಾಗಿದೆ," ಎಂದು ತಿಳಿಸಿದರು.

ತಮ್ಮ ತಾಯಿ ಚೆನ್ನಮ್ಮನವರಿಗೆ ಐಟಿ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಎಚ್ಡಿಕೆ, ನಾವು ಯಾವುದೇ ಅಕ್ರಮ ಮಾಡದೇ, ಅಕ್ರಮವಾಗಿ ಆಸ್ತಿ ಸಂಪಾದಿಸದೇ ಇದ್ದಾಗ ನಾವೇಕೆ ನೋಟಿಸ್ಗೆ ತಲೆಕೆಡಿಸಿಕೊಳ್ಳಬೇಕು. ಬಿಜೆಪಿಯ ಕೈಗೊಂಬೆಯಾಗಿರುವ ಇಡಿ ಮತ್ತು ಸಿಬಿಐ ಬಿಜೆಪಿಯ ಅಂಗ ಪಕ್ಷಗಳಿಂದ ನಮಗೆ, ನಮ್ಮ ಕುಟುಂಬಕ್ಕೆ ಏನು ಮಾಡಲು ಸಾಧ್ಯವಿಲ್ಲ ಎಂದರು.
ಸದನದಲ್ಲಿ ಹಲಾಲ್ ಚರ್ಚೆಗೆ ಬಂದಿಲ್ಲ
ಹಲಾಲ್ ವಿಚಾರವಾಗಿ ವಿಧಾನಸಭೆಯಲ್ಲಿ ಚರ್ಚೆಗೆ ಬಂದಿಲ್ಲ, ಬಂದರೆ ಚರ್ಚೆ ಮಾಡಬಹುದು. ಇವತ್ತು ಚುನಾವಣಾ ಸುಧಾರಣಾ ಬಗ್ಗೆ ಚರ್ಚೆ ಇದೆ. ಅಲ್ಲಿ ಅವಕಾಶ ಸಿಕ್ಕರೆ ಸಮಾಜದಲ್ಲಿ ಶಾಂತಿ ತರುವ ವಿಚಾರವಾಗಿ ಸಲಹೆ ಕೊಡುತ್ತೇನೆ. ಬಿಜೆಪಿ ಹಾಗೂ ಕಾಂಗ್ರೆಸ್ ಈ ಎರಡು ರಾಷ್ಟ್ರೀಯ ಪಕ್ಷಗಳು ಸಮಾಜವನ್ನು ಒಡೆಯುವ ಹುನ್ನಾರದ ಬಗ್ಗೆ ಎಚ್ಚರವಹಿಸಬೇಕಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ರಾಜ್ಯದಲ್ಲಿ ಬಗೆಹರಿಸದ ನೂರಾರು ಸಮಸ್ಯೆಗಳಿವೆ ಅದನ್ನು ಬಿಟ್ಟು ಬೇಡವಾದ ವಿಷಯಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಈ ಮೂಲಕ ಜನರ ಹಾದಿ ತಪ್ಪಿಸಿ ಧರ್ಮಗಳ ನಡುವೆ ವಿಷಬೀಜ ಭಿತ್ತಿ ಮತ ಗಳಿಕೆಗೆ ಹೊರಟಿರುವುದು ದುರದೃಷ್ಟಕರ. ಇಂತಹ ಬೇಡವಾದ ವಿಷಯಗಳ ಬಗ್ಗೆ ಜನರು ಗಮನ ನೀಡದೆ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗದಂತೆ ಜಾಗೃತರಾಗಬೇಕಿದೆ ಎಂದು ಎಚ್ಚರಿಸಿದರು.
ಅರ್ಚಕರ ಸಂಘದ ವಿಶೇಷ ಪೂಜೆ ಹಾಗೂ ಹೋಮ
ಇದೇ ಸಂದರ್ಭದಲ್ಲಿ ರಾಮನಗರದಲ್ಲಿ ಅರ್ಚಕರ ಸಂಘದ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜಾ ಕಾರ್ಯ ಹಾಗೂ ಹೋಮ ನಡೆಸಲಾಯಿತು. ಸುಮಾರು 1000ಕ್ಕೂ ಹೆಚ್ಚಿನ ಅರ್ಚಕರು ಭಾಗವಹಿಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಯಿಂದ ಅರ್ಚಕರು ಬಂದಿದ್ದಾರೆ.
ಈ ಪೂಜಾಫಲ ನಾಡಿನ ಜನರಲ್ಲಿ ಸುಖ ಶಾಂತಿ ಸಮೃದ್ಧಿ ತರಲಿ. ನಮ್ಮ ಜನ ನೆಮ್ಮದಿಯಿಂದ ಬದುಕುವ ವಾತಾವರಣ ನೀಡಲೆಂದು ಅರ್ಚಕರ ಸಂಘದ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಇದೇ ವೇಳೆ ಪ್ರಾರ್ಥಿಸಿದರು.












Click it and Unblock the Notifications