ರಾಮನಗರ : ನಾಯಿ ತಿನ್ನಲು ಬಂದ ಚಿರತೆ ಬೋನಿಗೆ ಬಿತ್ತು
ರಾಮನಗರ, ಫೆಬ್ರವರಿ 6 : ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆ ನಾಯಿಯನ್ನು ಹಿಡಿಯಲು ಹೋಗಿ ದನದ ಕೊಟ್ಟಿಗೆ ಯಲ್ಲಿ ಸಿಕ್ಕಿಬಿದ್ದ ಘಟನೆ ರಾಮನಗರ ತಾಲೂಕಿನ ಸಂಗಬಸವನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಚಿರತೆಯಿಂದ ತಪ್ಪಿಸಿಕೊಳ್ಳಲು ಓಡಿದ ನಾಯಿ, ದನದ ಕೊಟ್ಟಿಗೆಗೆ ನುಗ್ಗಿದೆ. ಚಿರತೆ ಸಹ ನಾಯಿಯನ್ನು ಓಡಿಸಿಕೊಂಡು ಕೊಟ್ಟಿಗೆಗೆ ನುಗ್ಗಿದೆ. ಈ ವೇಳೆ ಮನೆಯ ಮಾಲೀಕ ರವಿ ಚಿರತೆ ಕೊಟ್ಟಿಗೆಗೆ ನುಗ್ಗಿರುವುದನ್ನು ನೋಡಿ ಬಾಗಿಲನ್ನು ಹಾಕಿದ್ದಾರೆ.
ನಾಯಿಯೆಂದು ಚಿರತೆಯನ್ನು ತಬ್ಬಿ ಮಲಗಿದ ಭೂಪ!
ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬನ್ನೇರುಘಟ್ಟದಿಂದ ನುರಿತ ವೈದ್ಯರ ತಂಡವನ್ನು ಕರೆಯಿಸಿದರು.
ಬನ್ನೇರುಘಟ್ಟದಿಂದ ಆಗಮಿಸಿದ್ದ ತಜ್ಞರ ತಂಡ ಚಿರತೆಗೆ ಅರವಳಿಕೆ ನೀಡಿ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಆರಂಭಿಸಿದರು. ಚಿರತೆ ಸೆರೆ ಸಿಕ್ಕ ಬಳಿಕ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.
ಸೆರೆ ಸಿಕ್ಕಿರುವುದು ಮೂರು ವರ್ಷದ ಗಂಡು ಚಿರತೆಯಾಗಿದ್ದು ವೈದ್ಯರು ಆರೋಗ್ಯ ಪರೀಕ್ಷೆ ನಡೆಸಿದ್ದಾರೆ. ದಟ್ಟ ಅರಣ್ಯ ಅಥವಾ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಚಿರತೆಯನ್ನು ಬಿಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.