ರಾಮನಗರ : ಮಾಗಡಿ ಕ್ಷೇತ್ರದ ಚುನಾವಣಾ ಕಣದ ಚಿತ್ರಣ
ರಾಮನಗರ, ಏಪ್ರಿಲ್ 17 : ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರ ತವರೂರು ರಾಮನಗರ ಜಿಲ್ಲೆಯ ಮಾಗಡಿ. ಮಾಗಡಿಯಲ್ಲಿ 2018ರ ಚುನಾವಣೆ ಕಣ ರಂಗೇರಿದೆ. ಕ್ಷೇತ್ರದ ಚುನಾವಣಾ ಕಣ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿದೆ.
ಒಂದು ಕಾಲದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಪರಮಾಪ್ತ ಗಳೆಯರಾಗಿದ್ದ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಜೆಡಿಎಸ್ನಿಂದ ಬಂಡಾಯವೆದ್ದು ಕಾಂಗ್ರೆಸ್ ಸೇರಿದ್ದಾರೆ. ಮಾಗಡಿ ಕ್ಷೇತ್ರದಲ್ಲಿ ಒಮ್ಮೆ ಬಿಜೆಪಿ ಹಾಗೂ ಮೂರು ಭಾರಿ ಜೆಡಿಎಸ್ ನಿಂದ ಗೆದ್ದಿದ್ದ ಬಾಲಕೃಷ್ಣ ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿ.
ರಾಮನಗರ : ಕಾಂಗ್ರೆಸ್ ಅಭ್ಯರ್ಥಿಗಳ ಪರಿಚಯ
ಕಳೆದ ಚುನಾವಣೆಯಲ್ಲಿ ಬಾಲಕೃಷ್ಣ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಂಡಿದೆ. ಮಾಗಡಿ ಕ್ಷೇತ್ರದಲ್ಲಿ ಅವರೇ ಜೆಡಿಎಸ್ ಅಭ್ಯರ್ಥಿ. ಒಂದು ಕಾಲದ ಆಪ್ತಮಿತ್ರ ಹಾಗೂ ಇಂದಿನ ರಾಜಕೀಯ ಶತ್ರು ಬಾಲಕೃಷ್ಣ ಸೋಲಿಸಲು ಕುಮಾರಸ್ವಾಮಿ ತಂತ್ರ ರೂಪಿಸಿದ್ದಾರೆ.
ರಾಮನಗರ-ಚನ್ನಪಟ್ಟಣವನ್ನು ಟ್ವಿನ್ ಸಿಟಿ ಮಾಡಲಿದ್ದಾರಂತೆ ಕುಮಾರಸ್ವಾಮಿ!
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮಾಗಡಿಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಕಣಕ್ಕೆ ಇಳಿದಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಕೂಡ ಅಲ್ಪ ಸಾಂಪ್ರದಾಯಿಕ ಮತ ಹೊಂದಿದೆ. ಬಿಜೆಪಿಯಿಂದ ಹನುಂತರಾಜು ಅವರು ಅಭ್ಯರ್ಥಿ.
ಮಾಗಡಿ ಕ್ಷೇತ್ರದಲ್ಲಿ ಗೆದ್ದವರು, ಸೋತವರು
2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್.ಸಿ ಬಾಲಕೃಷ್ಣ ಅವರು 74,821 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ನ ಎ.ಮಂಜು ಅವರು 60,462 ಮತಗಳನ್ನು ಪಡೆದಿದ್ದರು. ಬಾಲಕೃಷ್ಣ ಅವರು 14, 359 ಮತಗಳ ಅಂತರದಿಂದ ಗೆದ್ದಿದ್ದರು.
ಈ ಬಾರಿ ಎಚ್.ಸಿ.ಬಾಲಕೃಷ್ಣ ಅವರು ಕಾಂಗ್ರೆಸ್ ಅಭ್ಯರ್ಥಿ. ಎ.ಮಂಜು ಅವರು ಜೆಡಿಎಸ್ ಅಭ್ಯರ್ಥಿ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ಇದೆ. ಯಾರಿಗೆ ಗೆಲುವು? ಕಾದು ನೋಡಬೇಕು.
ಅಂಕಿ ಸಂಖ್ಯೆಗಳಲ್ಲಿ ಲೆಕ್ಕಾಚಾರ
ಮಾಗಡಿ ಕ್ಷೇತ್ರದ ಒಟ್ಟು ಮತದಾರರು 2013ರಲ್ಲಿ 2,20957. ಪುರುಷರು 1,11998 ಮತ್ತು ಮಹಿಳೆಯರು 1,08959.
ಒಕ್ಕಲಿಗರು : 1,18400, ದಲಿತರು : 44000, ಮುಸ್ಲಿಮರು : 24860, ಲಿಂಗಾಯತರು :16400, ಕುರುಬರು : 3400, ದೇವಾಂಗ : 6200, ಕ್ರೈಸ್ತ : 1200, ಇತರೆ : 6491.
2018ರ ಚುನಾವಣೆಯಲ್ಲಿ ಪುರುಷರು 112598, ಮಹಿಳೆಯರು 110520, ತೃತೀಯ ಲಿಂಗ 21, ಒಟ್ಟು ಮತದಾರರು 223139.
ಕ್ಷೇತ್ರದ ಅಭ್ಯರ್ಥಿಗಳ ಪ್ಲಸ್ ಪಾಯಿಂಟ್
ಈ ಬಾರಿಯ ಚುನಾವಣೆಗೆ ಜೆಡಿಎಸ್ನಿಂದ ಎ.ಮಂಜುನಾಥ್, ಕಾಂಗ್ರೆಸ್ನಿಂದ ಎಚ್.ಸಿ.ಬಾಲಕೃಷ್ಣ, ಬಿಜೆಪಿಯಿಂದ ಹನುಮಂತರಾಜು ಅಭ್ಯರ್ಥಿಗಳು.
ಎಚ್.ಸಿ.ಬಾಲಕೃಷ್ಣ ಅವರಿಗೆ ನಾಲ್ಕು ಬಾರಿ ಗೆದ್ದ ಅಂಶ ಸಹಾಯಕವಾಗುವ ನಿರೀಕ್ಷೆ ಇದೆ. ಕ್ಷೇತ್ರದಲ್ಲಿ ಮಾಡಿರುವ ಕೆಲಸ, ಕಾಂಗ್ರೆಸ್ ಸೇರಿದ ಮೇಲೆ ಅಹಿಂದ ಮತಗಳು ಕೈಹಿಡುಯುತ್ತವೆ ಎನ್ನುವ ನಂಬಿಕೆ ಇದೆ.
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಜೆಡಿಎಸ್ ಪಕ್ಷಕ್ಕೆ ದ್ರೋಹ ಎಸಗಿದ ಆರೋಪ, ಬಹಿರಂಗವಾಗಿ ಪೋಲಿಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದು, ಸಾರ್ವಜನಿಕವಾಗಿ ಬಾಯಿ ಹರಿಬಿಟ್ಟು ಅಸಂಬದ್ಧ ಪದಬಳಕೆ ಮಾಡಿದ್ದು ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ.
ಜೆಡಿಎಸ್ ಪ್ಲಸ್ ಪಾಯಿಂಟ್
ಜೆಡಿಎಸ್ನ ಎ.ಮಂಜು ಅವರು ಕ್ಷೇತ್ರದಲ್ಲಿ ತಳಮಟ್ಟದಿಂದ ಕಾರ್ಯಕರ್ತರನ್ನು ಸಂಘಟನೆ ಮಾಡಿರುವುದು, ಹೇಮಾವತಿಯಿಂದ ಮಾಗಡಿಗೆ ನೀರು ತರಲು ಶ್ರಮಿಸಿರುವುದು ಸಹಾಯಕವಾಗುವ ನಿರೀಕ್ಷೆ ಇದೆ.
ಅರ್ಥಿಕ ಸಂಪನ್ಮೂಲದ ಕೊರತೆ, ಕ್ಷೇತ್ರಕ್ಕೆ ವಲಸೆ ಅಭ್ಯರ್ಥಿ ಎನ್ನುವ ಆರೋಪ ಚುನಾವಣೆಯಲ್ಲಿ ಹಿನ್ನಡೆ ಉಂಟು ಮಾಡುವ ನಿರೀಕ್ಷೆ ಇದೆ.