ಜೆಡಿಎಸ್ 7 ಬಂಡಾಯ ಶಾಸಕರಿಗೆ ವಿಪ್ ಬೆಲೆ ಈಗ ಗೊತ್ತಾಗಿದೆ: ಎಚ್ ಡಿಕೆ
ರಾಮನಗರ, ಮಾರ್ಚ್ 21: ವಿಪ್ ಬೆಲೆ ಏನು ಎಂದು ಈಗ ಅವರಿಗೆ ಅರಿವಾಗಿದೆ. ಅವರು ಏನು ಬೇಕಾದರು ಮಾತನಾಡಲಿ, ಹೇಳಿಕೆಗಳನ್ನು ನೀಡಲಿ. ಅವರ ಬಗ್ಗೆ ಪ್ರತಿಕ್ರಿಯೆಯೂ ಬೇಡ, ಚರ್ಚೆಯೂ ಬೇಡ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಬುಧವಾರ ಹೇಳಿದರು.
ರಾಜ್ಯಸಭಾ ಚುನಾವಣೆಗೆ ಜೆಡಿಎಸ್ ನ 7 ಬಂಡಾಯ ಶಾಸಕರಿಗೆ ವಿಪ್ ಜಾರಿ ಮಾಡುವ ವಿಚಾರವಾಗಿ ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ವಿಪ್ ವಿಚಾರವಾಗಿ ನಾನು ಏನನ್ನೂ ಮಾತನಾಡುವುದಿಲ್ಲ. ರಾಜ್ಯದಲ್ಲಿ ಪಕ್ಷವನ್ನು ಗೆಲ್ಲಿಸುವುದೇ ನನ್ನ ಮುಂದಿನ ಗುರಿ ಎಂದು ಹೇಳಿದರು.
ಭಿನ್ನಮತೀಯ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದು ಮುಗಿದ ಅಧ್ಯಾಯ. ಈಗ ಅವರು ದೊಡ್ಡವರು. ದೊಡ್ಡ ಪಕ್ಷ ಹುಡುಕಿಕೊಂಡು ಹೋಗಿದ್ದಾರೆ. ನಮ್ಮದು ಸಣ್ಣ ಪಕ್ಷ. ಅವರಂಥ ದೊಡ್ಡವರಿಗೆ ನಮ್ಮ ಸಣ್ಣ ಪಕ್ಷದಲ್ಲಿ ಏನು ಸಿಗುತ್ತದೆ? ಅವರು ರಾಷ್ಟ್ರೀಯ ಪಕ್ಷ ನೋಡಿಕೊಂಡು ಹೋಗಿದ್ದಾರೆ, ಚನ್ನಾಗಿರಲಿ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದರು.

ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಪಕ್ಷ 20-30 ಸ್ಥಾನ ಗೆಲ್ಲುವುದಿಲ್ಲ ಎಂದು ಹೇಳುತ್ತಿದ್ದಾರೆ. ನನ್ನ ಗುರಿ 120-130 ಸ್ಥಾನ. ಅಷ್ಟು ಸ್ಥಾನದಲ್ಲಿ ಪಕ್ಷವನ್ನು ಗೆಲ್ಲಿಸಲು ನಾನು ಹೋರಾಟ ಮಾಡುತ್ತಿದ್ದೇನೆ ಎಂದರು. ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕಡೆ ನಾನೇ ಅಭ್ಯರ್ಥಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಲವೇ ಉತ್ತರಿಸುತ್ತದೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ರಾಮನಗರ ನನ್ನ ಕರ್ಮ ಭೂಮಿ, ಇಲ್ಲಿನ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಚರ್ಚೆ ಮಾಡಿ, ತೀರ್ಮಾನ ತೆಗೆದುಕೊಳ್ಳುತ್ತೇನೆ. ಇದಕ್ಕೆಲ್ಲ ಕಾಲವೇ ಉತ್ತರ ನೀಡಲಿದೆ. ನನಗೆ ಚನ್ನಪಟ್ಟಣ ಕ್ಷೇತ್ರ ಕೂಡ ಮುಖ್ಯ. ಆ ಕ್ಷೇತ್ರದ ಜನತೆಯ ಋಣ ನನ್ನ ಮೇಲಿದೆ. ನನ್ನ ಮತ್ತು ರಾಮನಗರದ ಸಂಬಂಧವನ್ನು ಉಸಿರಿರುವವರೆಗೆ ಯಾರಿಂದಲೂ ತಪ್ಪಿಸಲು ಸಾದ್ಯವಿಲ್ಲ ಎಂದು ಭಾವುಕರಾಗಿ ನುಡಿದರು.
ಕುಟುಂಬದಿಂದ ನಾನು ಮತ್ತು ರೇವಣ್ಣ ಇಬ್ಬರೇ ಚುನಾವಣೆಗೆ ಸ್ಪರ್ಧಿಸುತ್ತೇವೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.












Click it and Unblock the Notifications