ಸಿ.ಪಿ.ಯೋಗೇಶ್ವರ್ ಗೆ ಜೆಡಿಎಸ್ ಎಂಎಲ್ ಸಿ ಪುಟ್ಟಣ್ಣ ಪರೋಕ್ಷ ಬೆಂಬಲ
ರಾಮನಗರ, ಮೇ. 07: ಜೆಡಿಎಸ್ ಭಿನ್ನ ಶಾಸಕರ ಬಣದಲ್ಲಿ ಗುರುತಿಸಿಕೊಂಡಿದ್ದ ಎಂಎಲ್ ಸಿ ಪುಟ್ಟಣ್ಣ ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆ ಪರೋಕ್ಷ ಬೆಂಬಲ ನೀಡುವ ಮೂಲಕ ಜೆಡಿಎಸ್ ನಾಯಕ ಹಾಗೂ ಚನ್ನಪಟ್ಟಣ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ರಾಮನಗರದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಜೊತೆಗೆ ಜಂಟಿಸುದ್ದಿಗೋಷ್ಟಿ ನಡೆಸಿದ ಎಂಎಲ್ ಸಿ ಪುಟ್ಟಣ್ಣ ಈ ಬಾರಿ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆ ಬೆಂಬಲ ಕೊಡುವುದಾಗಿ ಬಹಿರಂಗಪಡಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಸಂದರ್ಶನ
ನಾನು ರಾಜಕೀಯದಲ್ಲಿ ತಟಸ್ಥವಾಗಿದ್ದೆ. ನನ್ನ ಬೆಂಬಲಿಗರಿಗೆ ಜೆಡಿಎಸ್ ನಲ್ಲಿ ಸರಿಯಾದ ಗೌರವ ಸಿಗುತ್ತಿಲ್ಲ. ನಮ್ಮನ್ನ ಕಡೆಗಣಿಸುತ್ತಿದ್ದಾರೆ. ಹಾಗಾಗಿ ಕಾರ್ಯಕರ್ತರಿಗೆ ನಿಮ್ಮ ಅಸ್ತಿತ್ವಕ್ಕೆ ನಿಮ್ಮ ನಿರ್ಧಾರ ಕೈಗೊಳ್ಳಿ ಎಂದಿದ್ದೇನೆಂದು ಪುಟ್ಟಣ್ಣ ತಿಳಿಸಿದ್ದಾರೆ.
ಜೆಡಿಎಸ್ ನಲ್ಲಿ ನಮ್ಮನ್ನ ಯಾರು ಕರೆಯಲಿಲ್ಲ ಎಂದ ಮೇಲೆ ನಾವು ಇನ್ಯಾರಿಗೆ ಬೆಂಬಲ ಕೊಡಬೇಕು ಎಂದು ಹೇಳುವ ಮೂಲಕ ಆಂತರಿಕವಾಗಿ ಸಿ.ಪಿ.ಯೋಗೇಶ್ವರ್ ಗೆ ಬೆಂಬಲ ಎಂದು ಪುಟ್ಟಣ್ಣ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ಚನ್ನಪಟ್ಟಣದಲ್ಲಿ ಎಚ್ಡಿಕೆ ಜಯಭೇರಿ
ಕಳೆದ ಬಾರಿ ಅನಿತಾಕುಮಾರಸ್ವಾಮಿ ಸೋತಿದ್ದರು. ನಂತರ ನಡೆದ ಕಾರ್ಯಕರ್ತರ ಸಭೆಯಲ್ಲಿ ನಮ್ಮನ್ನ ವೇದಿಕೆಯಿಂದ ಕೆಳಗಿಳಿಸಿದ್ದರು. ಅದಾದ ಮೇಲೆ ನಾನು ಒಂದೇ ಒಂದು ಜೆಡಿಎಸ್ ಕಾರ್ಯಕ್ರಮದ ವೇದಿಕೆ ಹತ್ತಿಲ್ಲ ಎಂದು ಪುಟ್ಟಣ್ಣ ತಿಳಿಸಿದರು.
ಈ ಚುನಾವಣೆಯಲ್ಲೂ ನನ್ನನ್ನ, ನನ್ನ ಬೆಂಬಲಿಗರನ್ನ ಯಾರು ಕರೆದಿಲ್ಲ. ಹಾಗಾಗಿ ನಮ್ಮ ಅಸ್ತಿತ್ವಕ್ಕೆ ನಮ್ಮ ತೀರ್ಮಾನ ತೆಗೆದುಕೊಂಡಿದ್ದೇವೆ. ಪುಟ್ಟಣ್ಣನ ಶಕ್ತಿ ಕಡಿಮೆಯಾಗಿದೆ ಎಂದು ಜೆಡಿಎಸ್ ಪಕ್ಷಕ್ಕೆ ಅನಿಸಿರಬಹುದು. ಅದು ಸಹಜ, ಆದರೆ ಈಗ ಮೇ 12 ಕ್ಕೆ ಗೊತ್ತಾಗುತ್ತೆ ಎಂದು ಜೆಡಿಎಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಚನ್ನಪಟ್ಟಣದಲ್ಲಿನ ನೀರಾವರಿ ಯೋಜನೆಯನ್ನು ರಾಜ್ಯದ ಎಲ್ಲಾ ಜನಪ್ರತಿನಿಧಿಗಳು ನೋಡಿಕೊಂಡು ಹೋಗಿದ್ದಾರೆ. ಅದನ್ನ ಬೇರೆಯವರು ಅಳವಡಿಸಿಕೊಳ್ಳಲ್ಲಿ ಎನ್ನುವ ಮೂಲಕ ಸಿಪಿವೈ ಬೆಂಬಲಿಸುವಂತೆ ತಮ್ಮ ಬೆಂಬಲಿಗರಿಗೆ ಪರೋಕ್ಷವಾಗಿ ಕರೆ ನೀಡಿದರು.
ಸಾಮಂದಿಪುರ ಗ್ರಾಮಕ್ಕೆ ಯೋಗೇಶ್ವರ್ ಪ್ರವೇಶಿಸದಂತೆ ತಡೆದ ಗ್ರಾಮಸ್ಥರು
ಸಿ.ಪಿ.ಯೋಗೇಶ್ವರ್ ಮಾತನಾಡಿ, ನನಗೂ ಪುಟ್ಟಣ್ಣಗೂ ಯಾವುದೇ ರಾಜಕೀಯ ಒಡಂಬಡಿಕೆ ಇಷ್ಟು ವರ್ಷ ಇರಲಿಲ್ಲ. ಅವರು ನನಗೆ ಬಾಲ್ಯದ ಗೆಳೆಯರಾಗಿದ್ದರು. ರಾಜಕೀಯವಾಗಿ ಭಿನ್ನಾಭಿಪ್ರಾಯವಿತ್ತು. ಅವರು ಜೆಡಿಎಸ್ ನಲ್ಲಿದ್ದರು. ನಾನು ಅವರ ವಿರುದ್ಧವಾಗಿದ್ದೆ.
ಆದರೆ ಈಗ ಅವರು ,ಅವರ ಕುಟುಂಬದವರು, ಸಹೋದರರು ನನಗೆ ಬೆಂಬಲ ನೀಡಿದ್ದಾರೆ. ನನ್ನ ನೀರಾವರಿ ಯೋಜನೆಯ ಸಾಧನೆಯ ಫಲ ಅವರಿಗೂ ದಕ್ಕಿದೆ. ಪುಟ್ಟಣ್ಣರಿಗೆ ಅವರದ್ದೇ ಆದ ಶಕ್ತಿ ಇದೇ. ಪುಟ್ಟಣ್ಣರಿಗೆ ಜೆಡಿಎಸ್ ಪಕ್ಷದ ಸಿಂಬಲ್ ಇರಬಹುದು ಆದರೆ ಅವರದ್ದೇ ಆದ ಕಾರ್ಯಕರ್ತರ ಪಡೆ ಇದೇ.
ಪುಟ್ಟಣ್ಣನವರು ನೇರವಾಗಿ ಬೆಂಬಲ ಕೊಡದಿದ್ದರೂ ಆಂತರಿಕವಾಗಿ ಬೆಂಬಲ ಕೊಡ್ತಾರೆ. ಶ್ರೀಕೃಷ್ಣ ನೇರವಾಗಿ ಸಹಾಯ ಮಾಡದಿದ್ದರೂ, ಆಂತರಿಕವಾಗಿ ಬೆಂಬಲ ಕೋಡೋ ರೀತಿ ಪುಟ್ಟಣ್ಣನವರ ಸಹಾಯ ನನಗಿದೆ ಎಂದು ಸಿ.ಪಿ.ಯೋಗೇಶ್ವರ್ ತಿಳಿಸಿದರು.