ಮಾಗಡಿ; ಇಂದಿರಾ ಕ್ಯಾಂಟೀನ್ನಲ್ಲಿ ಊಟ ಕೊಡದೆ ವಂಚನೆ
ರಾಮನಗರ, ಮೇ 26; ಲಾಕ್ಡೌನ್ ಸಮಯದಲ್ಲಿ ಬಡವರಿಗೆ ಊಟವನ್ನು ಕೊಡದೇ ವಂಚಿಸಿರುವ ಘಟನೆ ಮಾಗಡಿಯ ಇಂದಿರಾ ಕ್ಯಾಂಟೀನ್ ನಲ್ಲಿ ನಡೆದಿದೆ. ಪುರಸಭಾ ಅಧ್ಯಕ್ಷರು ಮತ್ತು ಸದಸ್ಯರು ಕ್ಯಾಂಟೀನ್ ಮೇಲೆ ದಿಢೀರ್ ದಾಳಿ ಮಾಡಿದ್ದಾರೆ.
ಸರ್ಕಾರ ಲಾಕ್ಡೌನ್ ಸಮಯದಲ್ಲಿ ಕೂಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ನಿರ್ಗತಿಕರು, ಬಡವರಿಗೆ ಉಚಿತವಾಗಿ ಮೂರು ಹೊತ್ತು ಊಟ, ತಿಂಡಿ ವ್ಯವಸ್ಥೆ ಕಲ್ಪಿಸಿದೆ. ಆದರೆ ಪಟ್ಟಣದ ಇಂದಿರಾ ಕ್ಯಾಂಟೀನ್ ನಿರ್ವಹಣೆ ಹೊತ್ತಿರುವರು ಸಮರ್ಪಕವಾಗಿ ಊಟ, ತಿಂಡಿಯ ವ್ಯವಸ್ಥೆ ಕಲ್ಪಿಸಿಲ್ಲ.
ಒಂದು ಹೊತ್ತಿಗೆ 300 ಮಂದಿ ತಿಂಡಿ, ಊಟ ಮಾಡುತ್ತಾರೆ. ಆದರೆ ಪ್ರತಿದಿನ 900 ಮಂದಿಗೆ ಆಹಾರ ನೀಡುತ್ತಿರುವಿದಾಗಿ ಸುಳ್ಳು ಲೆಕ್ಕವನ್ನು ಬರೆಯುತ್ತಿದ್ದರು. ಪುರಸಭೆ ಅಧ್ಯಕ್ಷರು ಮತ್ತು ಸದಸಸ್ಯರು ಇದನ್ನು ಪತ್ತೆ ಹಚ್ಚಿದ್ದಾರೆ.

ಬುಧವಾರ ಬೆಳಗ್ಗೆ ಮಾಡಿದ್ದ ವಾಂಗಿ ಬಾತ್ನಲ್ಲಿ ಖಾರದ ಪುಡಿ, ಕಲ್ಲರ್ ಬಿಟ್ಟರೆ ಯಾವುದೇ ತರಕಾರಿ ಬಳಕೆ ಮಾಡಿರಲಿಲ್ಲ. ಇಂದಿರಾ ಕ್ಯಾಂಟೀನ್ನಲ್ಲಿ ಅಡುಗೆ ತಯಾರಕರು ಯಾರು ಇಲ್ಲ, ಇಲ್ಲಿನ ಸೂಪರ್ ವೈಸರ್ ಅಡುಗೆ ತಯಾರಿಸುತ್ತಿದ್ದಾರೆ. ರುಚಿ, ಶುಚಿ ಇಲ್ಲದ ಕಾರಣ ಒಂದು ಸಮಯಕ್ಕೆ ಕೇವಲ 50 ಮಂದಿಯೂ ಕ್ಯಾಂಟೀನ್ ಬರುತ್ತಿಲ್ಲ ಎಂಬ ದೂರು ಬಂದಿತ್ತು.
ಪುರಸಭಾಧ್ಯಕ್ಷೆ ಭಾಗ್ಯಮ್ಮ ಹಾಗೂ ಪುರಸಭಾ ಸದಸ್ಯೆ ಶಿವರುದ್ರಮ್ಮ ವಿಜಯ್ ಕುಮಾರ್ ಪರಿಶೀಲನೆ ನಡೆಸಿದಾಗ ಅವ್ಯವಸ್ಥೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪುರಸಭೆಯ ಮುಖ್ಯಾಧಿಕಾರಿ ಎಂ. ಎನ್. ಮಹೇಶ್ ಕರೆಸಿದ ಸದಸ್ಯರು ಪರಿಶೀಲನೆ ನಡೆಸಿದ ವೇಳೆ ಕ್ಯಾಂಟೀನ್ ಅಕ್ಕಿ ಬಿಟ್ಟು ಯಾವ ತರಕಾರಿ, ದಿನಸಿ ಸಾಮಾಗ್ರಿ ಸಹ ಪತ್ತೆಯಾಗಿಲ್ಲ.
ಕ್ಯಾಂಟೀನ್ನಲ್ಲಿ ಒಬ್ಬ ಕ್ಯಾಶಿಯರ್, ಸೂಪರ್ ವೈಸರ್, ಸ್ವಚ್ಚತೆಗಾರರು ಸೇರಿದಂತೆ ನಾಲ್ಕು ಮಂದಿ ಮಾತ್ರ ಇದ್ದಾರೆ. ಸ್ಥಳದಲ್ಲಿದ್ದ ಪರಮೇಶ್ ಎಂಬುವರನ್ನು ಕೇಳಿದರೆ ನಮಗೆ ನೀಡುವ ಅಡುಗೆ ಸಾಮಾಗ್ರಿಯಿಂದ ಅಡುಗೆ ತಯಾರು ಮಾಡುತ್ತೇವೆ ನಾವೇನು ಮಾಡೋಣ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಒಂದು ಸಮಯಕ್ಕೆ 300 ಮಂದಿಗೆ ಅಡುಗೆ ತಯಾರಿಸಲು 3 ಮಂದಿ ಅಡುಗೆ ತಯಾರಕರು ಅಗತ್ಯವಾಗಿದೆ. ಗುತ್ತಿಗೆ ಪಡೆದಿರುವರು ಪ್ರತಿದಿನ ರಾಮನ ಲೆಕ್ಕ, ,ಕೃಷ್ಣನ ಲೆಕ್ಕ ನೀಡಿ ಪ್ರತಿ ತಿಂಗಳು ಲಕ್ಷಾಂತರ ಹಣವನ್ನು ಪಡೆಯುವ ಮೂಲಕ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸುವಂತೆ ಪತ್ರ ಬರೆಯಲು ಒತ್ತಾಯಿಸಲಾಯಿತು.
ಈ ಬಗ್ಗೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಮಹೇಶ್, "ಕ್ಯಾಂಟೀನ್ಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಸೂಪರ್ ವೈಸರ್ ಅಡುಗೆ ಮಾಡುತ್ತಿದ್ದು, ಕೂಡಲೇ ಮ್ಯಾನೇಜರ್ ಮಹೇಂದ್ರರಿಗೆ ಕರೆ ಮಾಡಿ ಅಡುಗೆ ಭಟ್ಟರನ್ನು ನಿಯೋಜಿಸಿ ಗುಣಮಟ್ಟದ ತಿಂಡಿ, ಊಟ ನೀಡುವಂತೆ ಸೂಚನೆ ನೀಡಲಾಗಿದೆ" ಎಂದರು.












Click it and Unblock the Notifications