10 ದಿನದೊಳಗೆ ಜುಲೈ -ಆಗಸ್ಟ್ ಮೊದಲನೇ ವಾರದ ಬೆಳೆನಾಶಕ್ಕೆ ಪರಿಹಾರ: ಬೊಮ್ಮಾಯಿ
ರಾಮನಗರ, ಆಗಸ್ಟ್ 29 : ಜುಲೈ ತಿಂಗಳು ಮತ್ತು ಆಗಸ್ಟ್ ಮೊದಲನೇ ವಾರದಲ್ಲಿ ಜಿಲ್ಲೆಯಲ್ಲಾಗಿರುವ ಬೆಳೆ ನಾಶದ ಪರಿಹಾರ ಪಾವತಿಗೆ ಕಂದಾಯ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಇನ್ನು ಹತ್ತು ದಿನಗಳೊಳಗೆ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮವಾರ ರಾಮನಗರ ಮತ್ತು ಚೆನ್ನಪಟ್ಟಣ ತಾಲ್ಲೂಕುಗಳ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿ ನಂತರ ಪತ್ರಿಕಾಗೋಷ್ಟಿ ನಡೆಸಿದರು. ಬೆಳೆನಾಶದ ಬಗ್ಗೆ ಕೂಡಲೇ ಜಂಟಿ ಸರ್ವೆ, ದಾಖಲೆಗಳನ್ನು ಅಪಲೋಡ್ ಮಾಡಲಾಗುತ್ತಿದೆ. ಕಳೆದ 3 ದಿನದಿಂದ ಆಗಿರುವ ಹಾನಿಯ ವರದಿ ಸಲ್ಲಿಸಲು ತಿಳಿಸಲಾಗಿದೆ.
ರಾಮನಗರ ಪ್ರವಾಹ ಪೀಡಿತ ಪ್ರದೇಶಕ್ಕೆ ಸಿಎಂ ಭೇಟಿ: ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರದ ಎರಡುಪಟ್ಟು ಹೆಚ್ಚಿಸಿ ಬೆಳೆ ಪರಿಹಾರವನ್ನು ನೀಡಲಾಗುತ್ತಿದೆ. ಒಣಬೇಸಾಯಕ್ಕೆ 13,600 ರೂ., ತೋಟಗಾರಿಕೆ ಬೆಳೆಗೆ 28,000 ರೂ. , ನೀರಾವರಿಗೆ 25, 000 ರೂ. ಪರಿಹಾರ ನೀಡಲಾಗುತ್ತಿದೆ. ಕಳೆದ ಬಾರಿ ನಾಶವಾದ 14 ಲಕ್ಷ ಎಕರೆ ನಾಶಕ್ಕೆ 1100 ಕೋಟಿಗೂ ಹೆಚ್ಚುವರಿ ಪರಿಹಾರವನ್ನು ಕೇವಲ ಒಂದೂವರೆ ತಿಂಗಳಲ್ಲಿ ವಿತರಣೆ ಮಾಡಲಾಗಿದೆ. ಈ ಬಾರಿಯೂ ಒಂದೂವರೆ ತಿಂಗಳಲ್ಲಿ ಬೆಳೆ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.
ರಾಮನಗರ ಟೌನ್ ನಲ್ಲಿ ಮನೆ ವಸ್ತುಗಳು ನಷ್ಟವಾಗಿರುವ ಜೊತೆಗೆ ರೇಷ್ಮೆ ರೀಲಿಂಗ್ ಕಾರ್ಖಾನೆ, ರೇಷ್ಮೆ ದಾಸ್ತಾನು ನಾಶವಾಗಿದ್ದು, ಸರ್ವೇ ಮಾಡಲು ಸೂಚಿಸಲಾಗಿದೆ. ಸರ್ವೇ ವರದಿ ಬಂದ ನಂತರ ಎನ್ಡಿಆರ್ಎಫ್ ಮಾರ್ಗಸೂಚಿಯಲ್ಲಿ ಇಲ್ಲವಾದ ಕಾರಣ ವಿಶೇಷ ಪ್ರಕರಣ ಎಂದು ಪರಿಗಣಿಸಿ ಈ ನಷ್ಟವನ್ನು ಭರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ರಾಮನಗರದಲ್ಲಿ ಹೆದ್ದಾರಿ ಜಲಾವೃತ: ಮೈಸೂರು-ಬೆಂಗಳೂರಿಗೆ ಪರ್ಯಾಯ ಮಾರ್ಗ ಅನುಸರಿಸಿ
ಪರ್ಯಾಯ ಸಂಚಾರ ವ್ಯವಸ್ಥೆ
ಕಳೆದ ಮೂರು ದಿನಗಳಿಂದ ಅತಿಹೆಚ್ಚುಮಳೆಯಾಗಿ ರಾಜ್ಯದ 16 ಜಿಲ್ಲೆಗಳಲ್ಲಿ ಪ್ರವಾಹ, ಮನೆಗಳಿಗೆ ಹಾನಿ, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ಈ ಬಗ್ಗೆ ಭಾನುವಾರವೇ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ವಿಶೇಷವಾಗಿ ಬೆಂಗಳೂರು- ಮೈಸೂರು ರಸ್ತೆಯಲ್ಲಿ ನೀರು ನಿಂತಿದ್ದು, ಜಮೀನು, ಮನೆಗಳಗೆ ನೀರು ಹರಿಸಿದೆ. ಮೈಸೂರು, ಮಂಡ್ಯ, ರಾಮನಗರದ ಪರ್ಯಾಯ ಸಂಚಾರ ವ್ಯವಸ್ಥೆಯ ಬಗ್ಗೆ ಕ್ರಮವಹಿಸಲು ಈ ಜಿಲ್ಲೆಗಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
600 ಎಕರೆಯಷ್ಟು ಬೆಳೆನಾಶ
ರಾಮನಗರ ಜಿಲ್ಲೆ, ಚೆನ್ನಪಟ್ಟಣ, ಮಾಗಡಿಯಲ್ಲಿ ಕೆಲವು ಸೇತುವೆಗಳು ನಷ್ಟವಾಗಿವೆ. ರಾಮನಗರದಲ್ಲಿ ದೊಡ್ಡ ಕೆರೆ ಒಡೆದು ಊರಿಗೆ ನೀರು ಹರಿದು, ಮನೆಗಳಿಗೆ ನಷ್ಟವಾಗಿದೆ. ಸುಮಾರು ಒಟ್ಟು ಭಾಗಶಃ ನಾಶ 2222 ಮನೆಗಳಿಗೆ ಹಾನಿಯಾಗಿದೆ. ರಾಮನಗರ ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ ತಲಾ ಒಂದು ಪ್ರಾಣಹಾನಿ ಸಂಭವಿಸಿದೆ. ಸಣ್ಣ ಪ್ರಾಣಿಗಳಾದ 459 ಕುರಿ, ಮೇಕೆ, 16 ಹಸು, 5500 ಕೋಳಿಗಳು ಸಾವಾಗಿದೆ. ಬೆಳೆಹಾನಿ ಸುಮಾರು ಕೃಷಿ ಬೆಳೆ 600 ಎಕರೆಯಷ್ಟು ಬೆಳೆನಾಶ, ತೋಟಗಾರಿಕಾ ಬೆಳೆ 500 ಎಕರೆ ಬೆಳೆನಾಶ, ಸರ್ವೆ ನಂತರ ಹೆಚ್ಚಿನ ವಿವರಗಳು ದೊರೆಯಲಿವೆ ಎಂದರು.
ಗುಡಿಸಲು ಜಾಗದಲ್ಲಿ ಹೊಸ ಮನೆ ನಿರ್ಮಾಣಕ್ಕೆ ಸೂಚನೆ
ಗಾಂಧಿಗ್ರಾಮದಲ್ಲಿ ಎಸ್ ಸಿ ಎಸ್ ಟಿ ಯವರ ಸುಮಾರು 50ಕ್ಕಿಂತ ಹೆಚ್ಚು ಮನೆ ಹಾಗೂ ಗುಡಿಸಲುಗಳಿಗೆ ನೀರು ನುಗ್ಗಿದೆ. ಗುಡಿಸಲುಗಳನ್ನು ತೆರವುಗೊಳಿಸಿ ಹೊಸ ಮನೆಗಳನ್ನು ಕಟ್ಟಿಸಿಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ. ಮಾಗಡಿ ತಾಲ್ಲೂಕಿನಲ್ಲಿ ಸೇತುವೆ ಹಾಗೂ ಕೆರೆಕಟ್ಟೆಗಳಿಗೆ ಹಾನಿಯಾಗಿದೆ. ಕೆರೆಗಳಿಗೆ ಹಾನಿಯಾಗಿರುವುದಕ್ಕೆ ಬಂಡ್ ಕಟ್ಟಿ ತಾತ್ಕಾಲಿಕವಾಗಿ ನೀರು ನಿಲ್ಲಿಸುವ ವ್ಯವಸ್ಥೆ ಹಾಗೂ ಸಂಪೂರ್ಣವಾಗಿ ಮಳೆ ನಿಂತ ನಂತರ ಹೊಸ ಬಂಡ್ ನ್ನು ಶಾಶ್ವತವಾಗಿ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆಗೆ ಆದೇಶ ನೀಡಲಾಗುವುದು.
ಮುಖ್ಯ ನಾಲೆಗಳಿಗೆ ಎರಡೂ ಬದಿ ಆರ್ ಸಿ ಸಿ ತಡೆ ಗೋಡೆಗಳನ್ನು ಕಟ್ಟಲು ವ್ಯವಸ್ಥೆ ಮಾಡಲಾಗುವುದು. ಚನ್ನಪಟ್ಟಣದ ಮುಖ್ಯಕೆರೆಯಲ್ಲಿ ನೀರು ಉಕ್ಕಿ ಹರಿದಿದೆ. ಮನೆ ಪರಿಹಾರ ಕೊಡುವ ಜೊತೆಗೆ ಈ ಪ್ರದೇಶದಲ್ಲಿ 1. 8 ಕಿ.ಮೀ ಉದ್ದದ ಮುಖ್ಯ ಕಾಲುವೆ ನಿರ್ಮಾಣಗೊಳಿಸಿ ಶಾಶ್ವತ ಪರಿಹಾರ ನೀಡಲಾಗುವುದು ಎಂದರು.
ಹೆದ್ದಾರಿ ಮರು ವಿನ್ಯಾಸಕ್ಕೆ ಕ್ರಮ
ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಅಕ್ಕಪಕ್ಕದಲ್ಲಿ ತೊಂದರೆಯಾಗಿದ್ದು, ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಈ ಬಾರಿ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದೆ. ಪ್ರಾಧಿಕಾರದವರು ಕಳೆದ ಹಲವು ವರ್ಷಗಳ ಸರಾಸರಿ ಮಳೆಪ್ರಮಾಣವನ್ನುಆಧರಿಸಿ ಹೆದ್ದಾರಿಯ ವಿನ್ಯಾಸವನ್ನು ಮಾಡಿರುತ್ತಾರೆ. ಅಲ್ಲಿ ಒಳಚರಂಡಿ ವ್ಯವಸ್ಥೆಯನ್ನು ದೊಡ್ಡದಾಗಿಸಬೇಕು ಹಾಗೂ ಒಳಚರಂಡಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು.
ಮಂಡ್ಯ, ರಾಮನಗರ, ಚೆನ್ನಪಟ್ಟಣ ದಲ್ಲಿ ಇದೇ ಸಮಸ್ಯೆ ತಲೆದೋರಿದ್ದು, ಕೇಂದ್ರ ಹೆದ್ದಾರಿ ಪ್ರಾಧಿಕಾರದೊಂದಿಗೆ ಸಭೆ ನಡೆಸಿ, ನೀರು ನಿಲ್ಲುತ್ತಿರುವ ಹೆದ್ದಾರಿಯ ಮರುವಿನ್ಯಾಸ, ಸರಾಗವಾಗಿ ನೀರು ಹರಿಯುವಿಕೆ ಕಾರ್ಯವನ್ನು ಮಾಡಿಸಲಾಗುವುದು. ಈ ಮಧ್ಯೆ ಹೆದ್ದಾರಿಯಲ್ಲಿ ನಿಂತಿರುವ ನೀರು ಹರಿದುಹೋಗಲು ಅನುಕೂಲವಾಗುವಂತೆ ಮುಚ್ಚಿರುವ ಚರಂಡಿಗಳನ್ನು ತೆರೆಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೇಂದ್ರ ಸಾರಿಗೆ ಸಚಿವರೇ ಸಧ್ಯದಲ್ಲಿಯೇ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಹೆದ್ದಾರಿಗಳ ಸಮಸ್ಯೆಗಳ ಬಗ್ಗೆ ಖುದ್ದಾಗಿ ಮನವರಿಕೆ ಮಾಡಿಕೊಡಲಾಗುವುದು ಎಂದರು.