ಪಕ್ಷ ಕೇಳಿದರೆ ನಾನು ರಾಜೀನಾಮೆ ಕೊಡಬೇಕು; ಯೋಗೀಶ್ವರ್
ರಾಮನಗರ, ಜೂನ್ 06; "ನಮ್ಮದು ರಾಷ್ಟ್ರೀಯ ಪಕ್ಷ. ಉನ್ನತಮಟ್ಟದ ನಾಯಕರು ಇದ್ದಾರೆ. ಅವರು ತೆಗೆದುಕೊಳ್ಳುವ ತೀರ್ಮಾನದಂತೆ ನಾವು ನಡೆದುಕೊಳ್ಳಬೇಕಾಗುತ್ತದೆ. ನಾನು ಅಷ್ಟೇ ಪಕ್ಷ ರಾಜೀನಾಮೆ ಕೇಳಿದರ ಕೊಡಬೇಕು" ಎಂದು ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೀಶ್ವರ್ ಹೇಳಿದರು.
ಭಾನುವಾರ ಮುಖ್ಯಮಂತ್ರಿ ಯಡಿಯೂರಪ್ಪ "ಹೈಕಮಾಂಡ್ ಸೂಚಿಸಿದರೆ ರಾಜೀನಾಮೆಗೆ ಸಿದ್ಧ" ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತು ಚನ್ನಪಟ್ಟಣದಲ್ಲಿ ಸಚಿವ ಸಿ. ಪಿ. ಯೋಗೀಶ್ವರ್ ಪ್ರತಿಕ್ರಿಯೆ ನೀಡಿದರು.
ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ಫುಡ್ ಕಿಟ್ ವಿತರಣೆ ಮಾಡಿದ ಬಳಿಕ ಮಾತನಾಡಿದ ಅವರು, "ನಾನು ರಾಜಕೀಯ ವಿಚಾರವಾಗಿ ಯಾವುದೇ ಹೇಳಿಕೆ ಕೊಡುವುದಿಲ್ಲ. ನನ್ನ ಹೇಳಿಕೆ ಸಾಕಷ್ಟು ಸುದ್ದಿಯಾಗಿದೆ. ಇದರಿಂದ ನನಗೆ ನೋವಾಗಿದೆ" ಎಂದರು.

"ನಾನು ಮುಖ್ಯಮಂತ್ರಿ ಬಗ್ಗೆ ಮಾತನಾಡುವುದಿಲ್ಲ. ನನ್ನನ್ನ ಜಾಸ್ತಿ ಮಾತನಾಡಿಸಬೇಡಿ. ಈ ಸಂದರ್ಭದಲ್ಲಿ ಸಿಎಂ ಬಗ್ಗೆ ಮಾತನಾಡಿದರೆ ಸುಖಾಸುಮ್ಮನೆ ವಿವಾದವಾಗುತ್ತಿದೆ" ಎಂದು ಹೇಳಿದರು.
"ರಾಜ್ಯದಲ್ಲಿ ವಿರೋಧ ಪಕ್ಷಗಳು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ. ವಿರೋಧ ಪಕ್ಷಗಳು ನಮ್ಮ ಪಕ್ಷದವರ ಜೊತೆಯಲ್ಲಿ ಚೆನ್ನಾಗಿ ಇದ್ದಾರೆ. ಹಾಗಾಗಿ ನಾನೇ ವಿರೋಧ ಪಕ್ಷವಾಗಿ ಕೆಲಸ ಮಾಡುವ ಸಂದರ್ಭ ಬಂತು" ಎಂದುದ ತಿಳಿಸಿದರು.
"ಯಡಿಯೂರಪ್ಪ ಬಗ್ಗೆ ನಾನು ಯಾವಾಗಲೂ ಮಾತನಾಡಿಲ್ಲ. ಅವರು ನಮ್ಮ ನಾಯಕರು, ಬಿಜೆಪಿ ಪಕ್ಷಕ್ಕೆ ಯಡಿಯೂರಪ್ಪನವರೇ ನಾಯಕರು. ಹಾಗಾಗಿ ನಾನು ಅವರ ಬಗ್ಗೆ ಹಿಂದೆಯೂ ಮಾತನಾಡಿಲ್ಲ, ಈಗಲೂ ಮಾತನಾಡಲ್ಲ" ಎಂದು ಸ್ಪಷ್ಟಪಡಿಸಿದರು.












Click it and Unblock the Notifications