ರಾಜಕೀಯ ಪ್ರವೇಶದ ಬಗ್ಗೆ ಚಿಂತಿಸಿಲ್ಲ ಎಂದ ನಿಖಿಲ್ ಕುಮಾರಸ್ವಾಮಿ
ರಾಮನಗರ, ಜನವರಿ 23: ನಿಖಿಲ್ ಕುಮಾರಸ್ವಾಮಿ ಅವರ ಜನ್ಮದಿನವನ್ನು ಸೋಮವಾರ ರಾತ್ರಿ ರಾಮನಗರ ತಾಲೂಕಿನ ಬಿಡದಿ ಸಮೀಪ ಇರುವ ಎಚ್.ಡಿ.ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಆಚರಿಸಿಕೊಂಡರು. ಬೆಂಗಳೂರಿನಿಂದ ಬಂದ ನಿಖಿಲ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.
ಅಲ್ಲದೇ ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ಬಂದ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ತಂದಿದ್ದ ಕೇಕ್ ಗಳನ್ನು ಕತ್ತರಿಸಿದ ನಿಖಿಲ್, ಅಭಿಮಾನಿಗಳ ಜತೆಗೆ ಸಂಭ್ರಮಿಸಿದರು. ಫೋಟೋಗಾಗಿ ಮುಗಿಬಿದ್ದಿದ್ದ ಅಭಿಮಾನಿಗಳ ಜೊತೆ ಸಹ ಬಹಳ ಹೊತ್ತಿನ ತನಕ ಫೋಟೋ ತೆಗೆಸಿಕೊಂಡರು.
ಇದೇ ವೇಳೆ ಮಾತನಾಡಿದ ಅವರು, ಜಿಲ್ಲೆಯ ಜನರು ಮೊದಲಿನಿಂದಲೂ ನನಗೆ ಸಹಕಾರ ನೀಡಿದ್ದಾರೆ. ಜಾಗ್ವಾರ್ ಚಿತ್ರದ ಬಳಿಕ ಇದೀಗ ಕುರುಕ್ಷೇತ್ರ ಸಿನಿಮಾ ಮುಗಿದಿದ್ದು, ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಟಿಸ್ತಿದ್ದೇನೆ. ಸೀತಾರಾಮ ಕಲ್ಯಾಣ ಸಿನಿಮಾದ ಚಿತ್ರೀಕರಣ ಈ ತೋಟದ ಮನೆಯಲ್ಲಿ ನಲವತ್ತೈದು ದಿನಗಳ ಕಾಲ ನಡೆಯಲಿದೆ ಎಂದು ಹೇಳಿದರು.

ನನ್ನ ತಂದೆ ಅವರ ಪರವಾಗಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದ ಅವರು, ರಾಜಕೀಯ ಪ್ರವೇಶದ ಬಗ್ಗೆ ನಾನು ಚಿಂತನೆ ನಡೆಸಿಲ್ಲ, ಚಿತ್ರರಂಗದಲ್ಲಿಯೇ ಮುಂದುವರಿಯುತ್ತೇನೆ ಎಂದು ಅವರು ತಿಳಿಸಿದರು.











Click it and Unblock the Notifications