ಯೋಗೇಶ್ವರ್ ವಿರುದ್ಧ ನಾನೇ ಸ್ಪರ್ಧಿಸಬಹುದು: ಸಂಸದ ಡಿ.ಕೆ.ಸುರೇಶ್
ರಾಮನಗರ, ನವೆಂಬರ್ 6: ಶಾಸಕ ಯೋಗೇಶ್ವರ್ ಬಣ್ಣ ಬದಲಿಸುವ ಮನುಷ್ಯ ಎಂದು ಸಂಸದ ಡಿ.ಕೆ.ಸುರೇಶ್ ವಿರುದ್ದ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಮಾತನಾಡಿ, ಗೊಂದಲಗಳನ್ನು ಸೃಷ್ಟಿ ಮಾಡುವುದರಲ್ಲಿ ಯೋಗೇಶ್ವರ್ ನಿಸ್ಸೀಮರು. ಅವರ ಬಗ್ಗೆ ಮಾತನಾಡುವುದಕ್ಕೆ ನನಗೆ ಇಷ್ಟವಿಲ್ಲ. ಅವರು ಯಾವ ಸಂದರ್ಭದಲ್ಲಿ ಬಣ್ಣ ಹಾಕಿದ್ದಾರೆ, ಯಾವಾಗ ಏನು ಮಾಡ್ತಾರೆ, ಏನು ಹೇಳುತ್ತಾರೆ ಎಂದು ಈ ತಾಲೂಕಿನ ಜನರಿಗೆ ಗೊತ್ತಿದೆ ಎಂದರು.
ಇತಿಹಾಸ ಎಲ್ಲವನ್ನೂ ಹೇಳುತ್ತದೆ. ನಾನು ಏನನ್ನೂ ಹೇಳಬೇಕಿಲ್ಲ. ನಮ್ಮ ನಿಲುವು ಸ್ಪಷ್ಟವಿದೆ. ಕ್ಷೇತ್ರದಲ್ಲಿ ಶಕ್ತಿಯುತವಾಗಿದ್ದೇವೆ. ಗೆದ್ದೇ ಗೆಲ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕಚೇರಿ ತೆರೆಯಲು ಮನವಿ ಮಾಡಿದ್ದೇವೆ. ಆದರೆ ಯೋಗೇಶ್ವರ್ ಪಕ್ಷ ಸಂಘಟನೆಗೆ ಒತ್ತು ನೀಡಿರಲಿಲ್ಲ. ಶಾಸಕರ ವಿರುದ್ದ ಕೆಲಸ ಮಾಡಬಾರದು ಅಂತ ಸುಮ್ಮನಿದ್ದೆವು. ಡಿ.ಕೆ.ಶಿವಕುಮಾರ್ ನೇರ ಸ್ಪರ್ಧೆ ಮಾಡುವಂತೆ ಯೋಗೇಶ್ವರ್ ಸವಾಲು ನೀಡಿದ್ದಾರೆ. ನಮ್ಮ ಕಾರ್ಯಕರ್ತರು ಅದನ್ನು ಸ್ವೀಕರಿಸಿದ್ದಾರೆ, ಉತ್ತರವನ್ನೂ ಕೊಡತ್ತಾರೆ ಎಂದರು.
ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ವರಿಷ್ಠರು ಸೂಚಿಸಿದರೆ ನಾನೇ ಬೇಕಾದರೂ ಚನ್ನಪಟ್ಟಣದಲ್ಲಿ ಸ್ಪರ್ಧಿಸಬಹುದು. ನನ್ನನ್ನು ಹೊರತುಪಡಿಸಿ ನಮ್ಮ ಕುಟುಂಬದವರು ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದರು.
ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ
ಕೇಂದ್ರ ಸರಕಾರ ಏನು ಬೇಕಾದರೂ ಮಾಡಿಕೊಳ್ಳಲಿ, ಯಾರಾದರೂ ದೂರು ನೀಡಲಿ ನಾವು ಹೆದರುವುದಿಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಅವರ ಕುಟುಂಬದ ವ್ಯವಹಾರ ಪಾರದರ್ಶಕವಾಗಿದೆ. ನಾವು ಎಂಥ ತನಿಖೆಯನ್ನೂ ಎದುರಿಸಲು ಸಿದ್ಧರಿದ್ದೇವೆ. ರಾಜಕೀಯವಾಗಿ ನಮ್ಮನ್ನು ಮುಗಿಸಲು ಸಾಧ್ಯವಿಲ್ಲ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.
ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಐಟಿ ದಾಳಿ ಹಾಗೂ ವಿಚಾರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಇಲಾಖೆ ಅಥವಾ ಯಾವುದೇ ಕಾನೂನಿಗೆ ಹೆದರುವ ಅಗತ್ಯವಿಲ್ಲ. ನಮ್ಮ ಎಲ್ಲ ವ್ಯವಹಾರ ಕಾನೂನಿನ ಚೌಕಟ್ಟಿನಲ್ಲಿ ಮಾಡುತ್ತಿದ್ದೇವೆ. ಸಂವಿಧಾನದ ಹೆಸರಲ್ಲಿ ಅಧಿಕಾರ ಸ್ವೀಕರಿಸಿದ್ದೇವೆ, ಅದರಂತೆ ನಡೆದುಕೊಳ್ಳುತ್ತೇವೆ ಎಂದರು.
ಟಿಪ್ಪು ಜಯಂತಿ
ಟಿಪ್ಪು ಜಯಂತಿ ಆಚರಣೆ ಪರ-ವಿರೋಧ ವಿಚಾರ ಮುಂಚಿನಿಂದಲೂ ಇದೆ ಬೇಕೆಂದಾಗ ಹೊಗಳುತ್ತಾರೆ, ಬೇಡವೆಂದಾಗ ತೆಗಳುತ್ತಾರೆ. ಇತಿಹಾಸವನ್ನು ತಿರುಚುವಂತಹ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ ಎಂದು ಡಿ.ಕೆ.ಸುರೇಶ್ ಹೇಳಿದರು.
ಟಿಪ್ಪು ಜಯಂತಿಯನ್ನು ಸರಕಾರದಿಂದ ಆಚರಣೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಂಸ್ಕೃತಿಯನ್ನು ಬದಲಾವಣೆ ಮಾಡುವಂಥದ್ದು ಅವರಿಗೆ ಅಭ್ಯಾಸ. ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಮುಂದೆಯೂ ಮಾಡುತ್ತಾರೆ ಎಂದು ಬಿಜೆಪಿಯನ್ನು ಟೀಕಿಸಿದರು.
ನಾಲ್ಕು ವರ್ಷಗಳಿಂದ ಇರದ ಕೂಗು ಇದೀಗ ಚುನಾವಣೆಗೆ ಕೆಲವು ತಿಂಗಳಿರುವಾಗ ಎದ್ದಿದೆ. ಗಲಭೆಗಳನ್ನು ಸೃಷ್ಟಿ ಮಾಡಲು ಕೇಂದ್ರದ ನಾಯಕರಿಂದ ಅವರಿಗೆ ಆದೇಶವಾಗಿದೆ. ಕೋಮುವಾದಿ ಪಕ್ಷದ ಮುಖ್ಯ ಉದ್ದೇಶ ಹಿಂದು -ಮುಸ್ಲಿಮರ ನಡುವೆ ಗಲಭೆ ಸೃಷ್ಟಿಸುವುದು. ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವಿದು ಎಂದು ಆರೋಪಿಸಿದರು.












Click it and Unblock the Notifications