ಕುಮಾರಸ್ವಾಮಿ ಹುಟ್ಟುಹಬ್ಬ ವಿಶೇಷ: ತಿರುಪತಿಯ ಮೂಲ ವಿಗ್ರಹ ತಂದು ಶ್ರೀನಿವಾಸ ಕಲ್ಯಾಣ
ರಾಮನಗರ, ಡಿಸೆಂಬರ್ 13: ಡಿಸೆಂಬರ್ 16, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜನ್ಮದಿನ. ಈ ಹಿನ್ನೆಲೆಯಲ್ಲಿ ರೇಷ್ಮೆನಾಡು ರಾಮನಗರದಲ್ಲಿ ಇದೇ ಪ್ರಥಮ ಬಾರಿಗೆ ತಿರುಪತಿಯ ವಿಗ್ರಹ ತಂದು ಶ್ರೀನಿವಾಸ ಕಲ್ಯಾಣ ಮಹೋತ್ಸವ ಧಾರ್ಮಿಕ ಕಾರ್ಯಕ್ರಮಕ್ಕೆ ಹಮ್ಮಿಕೊಂಡಿದ್ದು, ಕಾರ್ಯಕ್ರಮವನ್ನು ಅವಿಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಸಕಲ ಸಿದ್ದತೆಗಳು ಭರದಿಂದ ಸಾಗಿದೆ.
ನಗರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದ್ದು, ನಗರ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಇನ್ನೊಂದೆಡೆ ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವಕ್ಕಾಗಿ ಬೃಹತ್ ವೇದಿಕೆ ಸಿದ್ದಗೊಳ್ಳುತ್ತಿದ್ದು ಜಿಲ್ಲೆಯ ಜನತೆಗೆ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಖುದ್ದು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
ಡಿಸೆಂಬರ್ 16ರಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬ. ಕಾಕತಾಳಿಯ ಎಂಬಂತೆ ಅದೇ ದಿನ ಪಂಚರತ್ನ ರಥಯಾತ್ರೆ ರಾಮನಗರಕ್ಕೆ ಪ್ರವೇಶ ಮಾಡಲಿದೆ. ಪಂಚರತ್ನ ರಥಯಾತ್ರೆಯನ್ನು ಯಶಸ್ವಿಗೊಳಿಸುವ ಜೊತೆಗೆ ಕುಮಾರಸ್ವಾಮಿ ಹುಟ್ಟುಹಬ್ಬದ ದಿನವನ್ನು ಐತಿಹಾಸಿಕ ಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿದೆ.

ಎಸ್ಬಿ ಟಾಕೀಸ್ ಸಂಸ್ಥೆಯಿಂದ ಬೃಹತ್ ವೇದಿಕೆ
ಇನ್ನು ತಿರುಪತಿ ತಿರುಮಲ ತಿಮ್ಮಪ್ಪ ದೇಗುಲದ ಮುಖ್ಯ ಪುರೋಹಿತರ ನೇತೃತ್ವದಲ್ಲಿ ಜರಗುವ ಈ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದೆ. ತಿರುಪತಿ ದೇಗುಲದ ಮಾದರಿಯಲ್ಲೇ ವೇದಿಕೆ ನಿರ್ಮಾಣಗೊಳ್ಳಲಿದ್ದು ವೇದಿಕೆಯ ಜವಾಬ್ದಾರಿಯನ್ನು ಎಸ್ಬಿ ಟಾಕೀಸ್ ಸಂಸ್ಥೆ ವಹಿಸಿಕೊಂಡಿದೆ. ಇನ್ನು 50ಕ್ಕೂ ಹೆಚ್ಚು ಕಾರ್ಮಿಕರು ವೇದಿಕೆಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿರೆ.

ಪಕ್ಷಾತೀತವಾಗಿ ಬಂದು ದೇವರ ದರ್ಶನ ಪಡೆಯುವಂತೆ ನಿಖಿಲ್ ಮನವಿ
ತಿರುಪತಿಯ ಟಿಟಿಡಿಯಿಂದ ಆಗಮಿಸುವ ಪುರೋಹಿತರ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣ ಧಾರ್ಮಿಕ ಪೂಜಾಕೈಂಕರ್ಯಗಳು ನೆರವೇರಲಿದೆ. ತಿರುಪತಿಯಿಂದ ಮೂಲ ವಿಗ್ರಹ ತಂದು ಶ್ರೀನಿವಾಸ ಕಲ್ಯಾಣ ಮಾಡುತ್ತಿರುವುದು ಐತಿಹಾಸಿಕವಾಗಿದೆ. ಹಿಂದೆ ಒಂದು ಬಾರಿ ಮಾತ್ರ ಬೆಂಗಳೂರಿನ ಪ್ಯಾಲೇಸ್ ಗ್ರಾಂಡ್ನಲ್ಲಿ ನಡೆದಿದ್ದು, ರಾಜ್ಯದ ಯಾವುದೇ ಭಾಗದಲ್ಲಿ ಈ ರೀತಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನಡೆದಿಲ್ಲ. ಹಾಗಾಗಿ ಜಿಲ್ಲೆಯ ಜನರು ಪಕ್ಷಾತೀತವಾಗಿ ಬಂದು ದೇವರ ದರ್ಶನ ಪಡೆಯುವಂತೆ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

ತಿರುಪತಿಯ ಮೂಲ ವಿಗ್ರಹದ ದರ್ಶನ ಮಾಡಲು ರಾಮನಗರ ಜನತೆಗೆ ಅವಕಾಶ
ತಿರುಪತಿಯ ದೇವಾಲಯದಿಂದ ಆಗಮಿಸಿದ್ದ ಪ್ರಚಾರ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, "ಇದೊಂದು ಪಕ್ಷಾತೀತವಾದ ಧಾರ್ಮಿಕ ಕಾರ್ಯಕ್ರಮ ಹಾಗಾಗಿ ಜಿಲ್ಲೆಯ ಪ್ರತಿ ಮನೆಗಳಿಗೂ ಆಹ್ವಾನ ಪತ್ರಿಕೆ ತಪಿಸುವ ವ್ಯವಸ್ಥೆ ಮಾಡಿದ್ದೇವೆ. ತಿರುಪತಿಯ ಮೂಲ ವಿಗ್ರಹದ ದರ್ಶನ ಮಾಡಲು ಸಾರ್ವಜನಿಕರನ್ನು ವಿನಂತಿಸುತ್ತೇನೆ ಎಂದರು.
ಇನ್ನು "ಲೈವ್ ಸ್ಟ್ರೀಮಿಂಗ್ ಮೂಲಕ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮವನ್ನು ಹತ್ತಿರದಿಂದ ಮತ್ತು ವಿವರವಾಗಿ ನೋಡಲು ಭಕ್ತರಿಗೆ ಅನುಕೂಲವಾಗುವಂತೆ ದೊಡ್ಡ ಎಲ್ಇಡಿ ಪರದೆಗಳನ್ನು ಇರಿಸಲಾಗುತ್ತದೆ. ಈ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮವು ಸಂಜೆ 6 ಗಂಟೆಯ ನಂತರ ಪ್ರಾರಂಭವಾಗಿ ರಾತ್ರಿ 10 ರವರೆಗೆ ನಡೆಯಲಿದೆ" ಎಂದು ನಿಖಿಲ್ ಕುಮಾರಸ್ವಾಮಿ ಮಾಹಿತಿ ನೀಡಿದರು.

ಕಾಲ್ನಡಿಗೆಯಲ್ಲೇ ತೆರಳಿ ಆಮಂತ್ರಣ ಪತ್ರಿಕೆ ನೀಡಿದ ನಿಖಿಲ್
ತಿರುಮಲ ಪ್ರಧಾನ ಅರ್ಚಕರ ತಂಡದ ಮೇಲ್ವಿಚಾರಣೆಯಲ್ಲಿ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಪೂರ್ಣಗೊಳ್ಳಲಿದ್ದು, ಈ ಬೃಹತ್ ಆಧ್ಯಾತ್ಮಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಲ್ಲದೇ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಭಕ್ತರನ್ನು ನಿರೀಕ್ಷಿಸಲಾಗಿದ್ದು, ತಿರುಪತಿ ಲಡ್ಡು ಪ್ರಸಾದ ವಿತರಿಸಲಾಗುವುದು ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನಿಖಿಲ್ ಕುಮಾರಸ್ವಾಮಿ, ಸ್ವತಃ ಖುದ್ದು ರಾಮನಗರದ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆಯಲ್ಲೇ ತೆರಳಿ ಸಾರ್ವಜನಿಕರಿಗೆ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.












Click it and Unblock the Notifications