ರಾಮನಗರದಲ್ಲಿ ಧಾರಾಕಾರ ಮಳೆ, ಹೆದ್ದಾರಿ ಜಲಾವೃತ, ರಜೆ ಘೋಷಣೆ
ರಾಮನಗರ, ಆಗಸ್ಟ್ 29: ಜಿಲ್ಲೆಯಲ್ಲಿ ಸೋಮವಾರ ಹಲವು ಕಡೆ ಬೆಳ್ಳಂ ಬೆಳಗ್ಗೆ ಮಳೆ ಅಬ್ಬರಿಸುತ್ತಿದೆ. ಮುಂಜಾನೆಯಿಂದಲೇ ಮಳೆ ಸುರಿಯುತ್ತಿದ್ದು, ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕೆಲಸ ಕಾರ್ಯಗಳಿಗೆ ತೆರಳುವವರು ಹಾಗೂ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ರಾಮನಗರ ಮತ್ತು ಚನ್ನಪಟ್ಟಣದ ಭಾಗಗಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆ ಹಲವು ಕೆರೆಗಳು ಕೋಡಿಬಿದ್ದಿವೆ. ಚನ್ನಪಟ್ಟಣದ ಬಿವಿ ಹಳ್ಳಿ, ಸಿಂಗರಾಜಿಪುರ, ಕುಡಿ ನೀರು ಕೋಡಿ ಕೆರೆಗಳು ಕೋಡಿ ಬಿದ್ದಿದ್ದರೆ, ರಾಮನಗರದ ಬೊಳಪ್ಪನ ಹಳ್ಳಿ ಕೆರೆ ಹಾಗೂ ರಾಜಕಾಲುವೆ, ಚರಂಡಿ ತುಂಬಿ ನೀರು ರಸ್ತೆಗೆ ಹರಿದು ಬರುತ್ತಿದ್ದು, ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ವಾಹನಗಳು ತೇಲುತ್ತಿದ್ದು, ಜನಜೀವನ ಸಂಪೂರ್ಣ ಅಸ್ಯವ್ಯಸ್ತಗೊಂಡಿದೆ.
Breaking: ಮಂಡ್ಯ, ಚಾಮರಾಜನಗರ, ರಾಮನಗರದಲ್ಲಿ ಶಾಲೆಗಳಿಗೆ ರಜೆ
ಧಾರಾಕಾರ ಮಳೆ ಹಿನ್ನೆಲೆ ಕೆರೆ, ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಚನ್ನಪಟ್ಟಣದ ಪೇಟೆಚೇರಿ, ರಾಮನಗರ, ಟಿಪ್ಪುನಗರ, ಅರ್ಕೇಶ್ವರ ಕಾಲೋನಿ ಸೇರಿದಂತೆ ಹಲವು ಬಡಾವಣೆಗಳಿಗೆ ನೀರು ನುಗ್ಗಿದ್ದು, ಹಲವು ಬಡಾವಣೆಗಳು ಜಲಾವೃತವಾಗಿದೆ. ಹಲವು ಮನೆಗಳು ಮುಕ್ಕಾಲು ಭಾಗ ಮುಳುಗಡೆಯಾಗಿದ್ದು, ಮನೆಯಲ್ಲಿದ್ದ ದಿನ ಬಳಕೆ ವಸ್ತು, ಬೈಕ್, ಕಾರು ಸಂಪೂರ್ಣ ಜಲಾವೃತಗೊಂಡಿದೆ. ಕಾಲೋನಿ ಮುಳುಗಡೆ ಹಿನ್ನೆಲೆ ಜನರಲ್ಲಿ ಹೆಚ್ಚಿದ ಆತಂಕ ಹೆಚ್ಚಿದೆ.
ರಜೆ ಘೋಷಣೆ
ರಾಮನಗರ ಜಿಲ್ಲೆಯಲ್ಲಿ ಧಾರಕಾರ ಮಳೆ ಹಿನ್ನಲೆ ಸರಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಾಮನಗರ, ಚನ್ನಪಟ್ಟಣ , ಕನಕಪುರ ಸರಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ಆದೇಶ ನೀಡಿದ್ದಾರೆ. ಖಾಸಗಿ ಶಾಲೆಗಳಿಗೂ ಆಡಳಿತ ಮಂಡಳಿಗಳು ರಜೆ ಘೋಷಣೆ ಮಾಡಿವೆ. ಇಂದು ನಡೆಯ ಬೇಕಿದ್ದ ತರಗತಿಯನ್ನು ಶನಿವಾರ ಪೂರ್ಣ ದಿನ ನಡೆಸುವುದಾಗಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತ
ಅಬ್ಬರದ ಮಳೆಯಿಂದಾಗಿ ಸಂಗನಬಸವನದೊಡ್ಡಿ ಬಳಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದ್ದು ದಶಪಥ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದ ಹೆದ್ದಾರಿ, ಸರ್ವೀಸ್ ರಸ್ತೆಯಲ್ಲಿ ನೀರು ನಿಂತಿದ್ದು, ದಶಪಥ ಹೆದ್ದಾರಿಯಲ್ಲಿ ಹಲವು ವಾಹನಗಳು ನೀರಿನಲ್ಲಿ ಸಿಲುಕಿ ಮುಳುಗಡೆಯಾಗಿವೆ. ದಶಪಥ ಹೆದ್ದಾರಿ ಮೇಲೆ ನಾಲ್ಕು ಅಡಿಗೂ ಅಧಿಕ ನೀರು ನಿಂತಿದೆ.
ಸಾರ್ವಜನಿಕರ ಆಕ್ರೋಶ
ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಹೆದ್ದಾರಿ, ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ನಿಲ್ಲುತ್ತಿರುವುದರಿಂದ ಹೆದ್ದಾರಿ ಗುತ್ತಿಗೆ ಪಡೆದಿರುವ ಡಿಬಿಎಲ್ ಕಂಪನಿ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚನ್ನಪಟ್ಟಣದ ಬಳಿಯೂ ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ರೈತರ ಜಮೀನುಗಳಿಗೆ ನುಗ್ಗಿದೆ. ಹಲವು ಜಮೀನು ಜಲಾವೃತಗೊಂಡಿದೆ.
ರೈಲು ಸಂಚಾರ ಸ್ಥಗಿತ
ಧಾರಾಕಾರ ಮಳೆಗೆ ರಾಮನಗರದ ಬಿಳಗುಂಬ ಬಳಿಯ ಸರ್ವೀಸ್ ರಸ್ತೆಯಲ್ಲಿ ಮಳೆ ನೀರಿನ ರಭಸಕ್ಕೆ ಖಾಸಗಿ ಬಸ್ ಕೊಚ್ಚಿ ಹೋಗುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಎಮರ್ಜನ್ಸಿ ಡೋರ್ ಮೂಲಕ ಎಲ್ಲಾ ಪ್ರಯಾಣಿಕರನ್ನು ರಕ್ಷಣ ಮಾಡಿದ್ದಾರೆ.
ಚನ್ನಪಟ್ಣಣದ ಬಳಿ ರೈಲ್ವೆ ನಿಲ್ದಾಣ ಸಂಪೂರ್ಣ ಜಲಾವೃತಗೊಂಡಿದ್ದು, ರೈಲ್ವೆ ಅಳಿ ತುಂಬಾ ಮಳೆ ನೀರು ತುಂಬಿದೆ. ರೈಲು ಬರಲು ಹಳಿ ಕಾಣದಂತೆ ನೀರು ತುಂಬಿದ್ದು, ರೈಲು ಸಂಚಾರಕ್ಕೂ ವರುಣ ಅಡ್ಡಿಪಡಿಸಿದೆ. ಮಳೆ ಅಬ್ಬರದಿಂದ ರೈಲು ಸಂಚಾರ ಈಗ ಸ್ಥಗಿತಗೊಂಡಿದೆ.