ಮೈತ್ರಿ ಸರಕಾರದ ವೇಳೆ ನನ್ನ ಕೈ ಎತ್ತಿ ಹಿಡಿದಿರಲಿಲ್ವಾ? ಕಾಂಗ್ರೆಸ್ ಒಗ್ಗಟ್ಟಿನ ಬಗ್ಗೆ ಎಚ್ಡಿಕೆ ವ್ಯಂಗ್ಯ
ರಾಮನಗರ, ಆಗಸ್ಟ್ 4: ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕೈ ಕೈ ಹಿಡಿದು ಒಗ್ಗಟ್ಟಿನ ಮಂತ್ರ ಜಪಿಸಿದ್ದನ್ನು ಕುರಿತು ವ್ಯಂಗ್ಯವಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, "ಮೈತ್ತಿ ಸರಕಾರದ ವೇಳೆ ನನ್ನ ಕೈ ಹಿಡಿದುಕೊಂಡು ಕೊನೆಗೆ ಕೈ ಎತ್ತಲಿಲ್ವಾ? ಕೈ ಎತ್ತೋದು ಕೈ ಇಳಿಸೋದು ಆಯಾಯ ಸಂದರ್ಭಕ್ಕೆ ತಕ್ಕಂತೆ ನಡೆಯುತ್ತಿರುತ್ತವೆ" ಎಂದು ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶನವನ್ನು ಟೀಕಿಸಿದ್ದಾರೆ.
ರಾಮನಗರದ ಚನ್ನಪಟ್ಟಣ ತಾಲೂಕಿನ ಕಣ್ವ ಜಲಾಶಯಕ್ಕೆ ಪತ್ನಿ ಅನಿತಾ ಕುಮಾರಸ್ವಾಮಿಯೊಂದಿಗೆ ಬಾಗಿನ ಅರ್ಪಿಸಿ ಮಾತನಾಡಿದ ಕುಮಾರಸ್ವಾಮಿ, ಡಿಕೆಶಿ ಹಾಗೂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕೈ-ಕೈ ಹಿಡಿದು ಮೇಲಕ್ಕೆ ಎತ್ತಿದ್ದಾರೆ. ಈ ಹಿಂದೆ ಡಿ.ಕೆ.ಶಿವಕುಮಾರ್ ನನ್ನ ಕೈಯನ್ನೂ ಮೇಲೆ ಎತ್ತಿ ಹಿಡಿದಿರಲಿಲ್ಲವೇ? ಇದೆಲ್ಲವನ್ನೂ ನಾನು ಕೂಡಾ ಮೈತ್ರಿ ಸರ್ಕಾರ ಇದ್ದಾಗ ನೋಡಿದ್ದೇನೆ. ಜನರನ್ನು ನಂಬಿಸಲು ಇಬ್ಬರೂ ಕೈ ಎತ್ತುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾರ ಬೆನ್ನಿಗೆ ಯಾರು ಚೂರಿ ಹಾಕುತ್ತಾರೆ ಎಂದು ನೋಡೋಣ ಎಂದು ಹೇಳಿದರು.
ಗೃಹ ಸಚಿವ ಅರಗಜ್ಞಾನೇಂದ್ರಗೆ ಅಮಿಶ್ ಶಾ ವಾರ್ನಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿ," ಕೇವಲ ಅರಗ ಜ್ಞಾನೇಂದ್ರಗೆ ಅಲ್ಲ ಇಡೀ ಸರಕಾರಕ್ಕೆ ವಾರ್ನಿಂಗ್ ಕೊಡಬೇಕು. ರಾಜ್ಯ ಎಲ್ಲಾ ಮಂತ್ರಿಗಳಿಗೂ ವಾರ್ನಿಂಗ್ ಕೊಡಬೇಕು. ರೈತರಿಗೆ ಕೊಡುವ ಸಬ್ಸಿಡಿಗೂ ಮಂತ್ರಿಗಳು 8 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ. ಇವೆಲ್ಲಾ ಹೊಸ ಸಿಸ್ಟಮ್ ಗಳನ್ನ ಪ್ರಾರಂಭಿಸಿದ್ದಾರೆ. ರಾಜ್ಯ ಲೂಟಿ ಆಗ್ತಿದೆ, ಇದರಲ್ಲಿ ಅಮಿತ್ ಶಾಗೂ ಶೇರ್ ಹೋಗ್ತಿದ್ಯಾ.? ಎಂದು ಪ್ರಶ್ನಿಸಿದರು.
ಆಡಳಿತದಲ್ಲಿ ಎ ಗ್ರೇಡ್ ನಲ್ಲಿದ್ದ ರಾಜ್ಯ ನಮ್ಮದು, ಇಂದು ಕಾನೂನು ಸುವ್ಯವಸ್ಥೆ ಒಂದೇ ಅಲ್ಲ ರಾಜ್ಯ ಲೂಟಿ ಆಗುತ್ತಿದೆ. ಈ ರೀತಿಯ ಆಡಳಿತವನ್ನು ಎಲ್ಲಾ ವಿಭಾಗದಲ್ಲೂ ಸಂಪೂರ್ಣ ಮಾಡ್ತಾ ಇದ್ದಾರೆ. ಕೇಂದ್ರ ಗೃಹ ಸಚಿವರಿಗೆ ಪ್ರಾಮಾಣಿಕತೆ, ರಾಜ್ಯದ ಬಗ್ಗೆ ಕಳಕಳಿ ಇದ್ದರೆ ಮೊದಲು ಸರ್ಕಾರಕ್ಕೆ ಕಿವಿ ಹಿಂಡಲಿ ಎಂದರು.
ಪಿಎಫ್ಐ ಮತ್ತು ಎಸ್ಡಿಪಿಐ ಸಂಘನೆಗಳ ಬ್ಯಾನ್ ಮಾಡಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಕೇವಲ ಹಿಂದೂಪರ ಸಂಘಟನೆಗಳ ಒತ್ತಾಯ ವಿಚಾರ.
ಹಿಂದೂಪರ ಸಂಘಟನೆ ಪರವಾದವರು ಹೇಳುತ್ತಿದ್ದಾರೆ. ಅವುಗಳನ್ನು ನಿಷೇಧಿಸಬೇಕಾದರೆ ಕಾನೂನು ಬಾಹಿರ , ದೇಶದ್ರೋಹಿ ವಿಚಾರಗಳನ್ನು ಇಟ್ಟುಕೊಂಡು ನಂತರ ತೀರ್ಮಾನ ಮಾಡಬೇಕು. ಸುಮ್ಮನೆ ಬಾಯಿ ಮಾತಿಗೆ ಹೇಳಿದರೆ ಆಗಲ್ಲ. ಇದನ್ನು ಸರ್ಕಾರ ತೀರ್ಮಾನ ಮಾಡಬೇಕು ಎಂದು ತಿಳಿಸಿದರು.
ಅತಿವೃಷ್ಠಿ
ಬಗ್ಗೆ
ಕೇಂದ್ರದಿಂದ
ಪರಿಹಾರ
ಕೇಂದ್ರದ
ಅಧಿಕಾರಿಗಳು
ರಾಜ್ಯಕ್ಕೆ
ಬಂದು
ಸರ್ವೆ
ಮಾಡುವುದು
ರೊಟೀನ್
ಕೆಲಸವಾಗಿದೆ.
ರಾಜ್ಯದಲ್ಲಿ
ಆಗಿರುವ
ಡ್ಯಾಮೇಜ್
ಬಗ್ಗೆ
ಮೊದಲು
ಎಸ್ಟಿಮೇಟ್
ಕಳುಹಿಸಬೇಕು.
ಆ ನಂತರ ಕೇಂದ್ರದ ಅಧಿಕಾರಿಗಳು ಬಂದು ಸರ್ವೆ ಮಾಡುತ್ತಾರೆ. ತಕ್ಷಣಕ್ಕೆ ಎಲ್ಲೆಲ್ಲಿ ಹಾನಿಯಾಗಿದೆ ಅದಕ್ಕೆ ರಾಜ್ಯ ಸರಕಾರ ವಿಶೇಷ ಅನುದಾನ ನೀಡಬೇಕು.
ಈ ಹಣ ಸರಿಯಾದ ರೀತಿಯಲ್ಲಿ ಬಳಕೆ ಆಗಬೇಕು. ಅನಾಹುತಕ್ಕೆ ಬಿಡುಗಡೆಯಾದ ಹಣ ಇನ್ನೆಲ್ಲೋ ಹೋಗಬಾರದು ಎಂದರು.