HD Kumaraswamy campaign: ರಾಮನಗರ, ಚನ್ನಪಟ್ಟಣ ಹಾಗೂ ಕನಕಪುರ ಕ್ಷೇತ್ರಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಮತಬೇಟೆ
ರಾಮನಗರ, ಮೇ, 08: ಬಹಿರಂಗ ಚುನಾವಣಾ ಪ್ರಚಾರ ಇಂದು ಸಂಜೆ 6ಕ್ಕೆ ಅಂತ್ಯ ಆಗಲಿದ್ದು, ಈ ಹಿನ್ನೆಲೆ ರೇಷ್ಮೆನಾಡು ರಾಮನಗರ ಹಾಗೂ ಚನ್ನಪಟ್ಟಣ, ಕನಕಪುರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಅಬ್ಬರದ ಪ್ರಚಾರ ಕೈಗೊಂಡು ಗಮನ ಸೆಳೆದರು.
ಚನ್ನಪಟ್ಟಣ ಸರ್ಕಾರಿ ಬಸ್ ನಿಲ್ದಾಣದ ಬಳಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, ನಾನು ಸಿಎಂ ಆದರೂ ಸಹ ಬಿಡದಿಯ ಕೇತಗಾನಹಳ್ಳಿಯಲ್ಲಿಯೇ ಇರುತ್ತೇನೆ. ಮೈಸೂರು ಭಾಗದ ಜನರು ಏನೇ ಕಷ್ಟ ಇದ್ದರೂ ಮನೆ ಬಳಿ ಬನ್ನಿ ಪೊಲೀಸರು ತಡೆಯುವುದಿಲ್ಲ ಎಂದು ಮನವಿ ಮಾಡಿದರು.

ಇಷ್ಟು ಜನರು ಬಂದಿರುವುದನ್ನು ನೋಡಿ ನನ್ನ ಜನ್ಮ ಸಾರ್ಥಕ ಆಯಿತು. ಕಾಂಗ್ರೆಸ್ನವರು ಏನೂ ತಪ್ಪಿಲ್ಲದಿದ್ದರೂ ಕೂಡ ದೇವೇಗೌಡರನ್ನು ಪ್ರಧಾನಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದರು. ಅಷ್ಟೇ ಅಲ್ಲದೆ ನನ್ನ ಸರ್ಕಾರವನ್ನು ಕೂಡ ಬೀಳಿಸಿದ್ದರು. ಹೀಗೆ ನನಗೆ ತುಂಬಾ ನೋವು ಕೊಟ್ಟಿದ್ದರು. ಆದರೆ ನಿಮ್ಮನ್ನೆಲ್ಲರನ್ನೂ ನೋಡಿ ನನಗೆ ಆನಂದಭಾಷ್ವ ಬರುತ್ತಿದೆ ಎಂದು ಹೇಳುವ ಮೂಲಕ ಬಂದ ಜನರ ಮುಂದೆ ಭಾವುಕರಾದರು.
ನಾನು ಕಣ್ಣೀರು ಹಾಕಿದರೆ ನನ್ನ ವಿರೋಧಿಗಳು ಬೇರೆ ಬಣ್ಣ ಕಟ್ಟುತ್ತಾರೆ. ಆದ್ದರಿಂದ ಎಷ್ಟೇ ನೋವಿದ್ದರೂ ಕೂಡ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತೇನೆ. ನಾನು ಕನಕಪುರಕ್ಕೂ ಹೋಗಬೇಕಿದೆ. ನೀವು ನಿಖಿಲ್ ಕುಮಾರಸ್ವಾಮಿಗೂ ಆಶೀರ್ವಾದ ಮಾಡಿ ಅಂತಾ ಸಂದೇಶ ಬಂದಿದೆ. ನಿಖಿಲ್ ಅವರನ್ನು ರಾಮನಗರ ಜನರ ಮಡಿಲಿಗೆ ಹಾಕಿದ್ದೇನೆ ಅವರು ಯಾವತ್ತೂ ಕೂಡ ಕೈ ಬಿಡಲ್ಲ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಹಾಗೆಯೆ ಇದೇ ವೇಳೆ ರಾಮನಗರ ಆಗಬಹುದು, ಚನ್ನಪಟ್ಟಣವೇ ಆಗಬಹುದು ಅವರು ನಮ್ಮ ಕುಟುಂಬದ ಸದಸ್ಯರನ್ನು ಕಾಪಾಡುತ್ತಾರೆ ಎಂದರು.
ಇನ್ನು ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಸ್ಥಗಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿ.ಪಿ.ಯೋಗೇಶ್ವರ್ ಹೆಸರು ಪ್ರಸ್ತಾಪಿಸದೆ ಟಾಂಗ್ ನೀಡಿದರು. ಇದೊಂದು ಪಾಪದ ಕೂಸು. ಅದನ್ನು ಆಗಿಯೇ ಬಿಟ್ಟಿದ್ದಾನೆ. ಸರಿಪಡಿಸುವ ವೇಳೆಗೆ ಸರ್ಕಾರ ಹೋಯ್ತು, ನಾನು ಅಧಿಕಾರಕ್ಕೆ ಬಂದಮೇಲೆ ಸರಿಪಡಿಸಿಯೇ ತೀರುತ್ತೇನೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಹಾಗೆಯೆ ನಂತರ ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು, ಹಳೇ ಮೈಸೂರು ರಸ್ತೆಯ ಶೇರು ಹೋಟೆಲ್ ವೃತ್ತದಿಂದ ಮಂಗಳವಾರ ಪೇಟೆ ಬಸವನಗುಡಿ ಸರ್ಕಲ್ರೆಗೂ ರೋಡ್ ಶೋ ಮಾಡಿ ಗಮನ ಸೆಳೆದರು. ಈ ವೇಳೆ ರಸ್ತೆ ತುಂಬೆಲ್ಲಾ ಕುಮಾರಸ್ವಾಮಿ ಅವರ ಅಭಿಮಾನಿಗಳ ದಂಡೇ ನೆರೆದಿತ್ತು. ಅಲ್ಲದೆ ದಾರಿಯುದ್ದಕ್ಕೂ ಕುಮಾರಸ್ವಾಮಿ ಪರ ಅಭಿಮಾನಿಗಳು ಜೈಘೋಷ ಮೊಳಗಿಸಿದರು. ಮುಂದಿನ ಸಿಎಂ ನಮ್ಮ ಕುಮಾರಣ್ಣ ಎನ್ನುವ ಘೋಷಣೆ ಮೊಳಗಿಸಿದರು.












Click it and Unblock the Notifications