ಹಾಸನ ಕ್ಷೇತ್ರ ಹೊರತುಪಡಿಸಿ ಇಂದೇ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ-ಕುಮಾರಸ್ವಾಮಿ ಸ್ಪಷ್ಟನೆ
ರಾಮನಗರ, ಏಪ್ರಿಲ್ 3: ಹಾಸನ ಕ್ಷೇತ್ರ ಹೊರತುಪಡಿಸಿ ಇಂದು ಸಂಜೆ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು, ಹಾಸನ ಟಿಕೆಟ್ ಬಗ್ಗೆ ಹಲವಾರು ಚರ್ಚೆ ಆಗಿದೆ, ಈ ಬಗ್ಗೆ ಸುಗಮವಾಗಿ ತೀರ್ಮಾನ ಆಗುತ್ತದೆ. ಮಾಜಿ ಪ್ರಧಾನಿ ದೇವೇಗೌಡರು ದೆಹಲಿಗೆ ಹೋಗಿದ್ದಾರೆ. ದೆಹಲಿಯಿಂದ ಬಂದ ಬಳಿಕ ಹಾಸನ ಕ್ಷೇತ್ರದ ಟಿಕೆಟ್ ತೀರ್ಮಾನವಾಗಲಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಸೋಮವಾರ ಚನ್ನಪಟ್ಟಣ ತಾಲೂಕಿನ ಸುಣಘಟ್ಟ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅನ್ಯ ಪಕ್ಷದ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇ ಗೌಡರು ದೆಹಲಿಯಿಂದ ಬಂದ ಮೇಲೆ ಹಾಸನ ಕ್ಷೇತ್ರದ ಟಿಕೆಟ್ ತೀರ್ಮಾನವಾಗುತ್ತದೆ. ಹಾಸನದ ವಿಷಯದಲ್ಲಿ ನನ್ನ ನಿಲುವು ಬದಲಾಗುವುದಿಲ್ಲ. ದೇವೇ ಗೌಡರು ದೆಹಲಿಯಿಂದ ಬಂದ ಮೇಲೆ ಎಲ್ಲಾ ಗೊತ್ತಾಗಲಿದೆ ಎಂದು ಹೇಳಿದರು.

ಹಾಸನದ ಜನಾಭಿಪ್ರಾಯ, ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಈಗಾಗಲೇ ದೇವೇಗೌಡರು ಜನಾಭಿಪ್ರಾಯ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಬಗ್ಗೆ ಅವರೇ ತೀರ್ಮಾನ ಮಾಡ್ತಾರೆ. ಎರಡನೇ ಪಟ್ಟಿಯಲ್ಲಿ ಕೆಲವರ ಹೆಸರುಗಳನ್ನು ಅಂತಿಮ ಮಾಡಲಾಗುತ್ತದೆ. ಕೆ.ಆರ್.ಪೇಟೆ ಕಾರ್ಯಕ್ರಮ ಮುಗಿಸಿ ನಂತರ ಸಂಜೆ ಪಕ್ಷದ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದರು.

ಸೋಮವಾರ ಸಂಜೆ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಎರಡನೇ ಪಟ್ಟಿ ಬಿಡುಗಡೆ ಆಗುತ್ತದೆ. ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಸುಮಾರು 40 ರಿಂದ 50 ಕ್ಷೇತ್ರದ ಅಭ್ಯರ್ಥಿಗಳ ಹೆಸರು ಅಂತಿಮ ಆಗಲಿದೆ. ಇನ್ನೊಂದು ನಾಲ್ಕು ಅಥವಾ ಐದು ದಿನದಲ್ಲಿ ಮೂರನೇ ಪಟ್ಟಿ ಕೂಡಾ ಬಿಡುಗಡೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎ.ಡಿ.ಕುಮಾರಸ್ವಾಮಿ ತಿಳಿಸಿದರು.
ಚುನಾವಣೆಯ ಬಗ್ಗೆ ಮಾತು ಮುಂದುವರಿಸಿದ ಕುಮಾರಸ್ವಾಮಿ, 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಚನ್ನಪಟ್ಟಣ ಕ್ಷೇತ್ರದಿಂದ ಇದೇ ಏಪ್ರಿಲ್ 19 ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ. ರಾಮನಗರ ವಿಧಾನಸಭಾ ಕ್ಷೇತ್ರದಿಂದ ಏಪ್ರಿಲ್ 17 ರಂದು ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುತ್ತಾರೆ ಎಂದು ತಿಳಿಸಿದರು.
ನೈತಿಕ ಪೊಲೀಸ್ಗಿರಿಗೆ ಕುಮಾರಸ್ವಾಮಿ ಖಂಡನೆ
ಇನ್ನು ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಕನಕಪುರ ತಾಲೂಕಿನ ಸಾತನೂರಿನಲ್ಲಿ ಕಸಾಯಿಖಾನೆಗೆ ಹಸು ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಾಳಿ ನಡೆಸಿದ ವೇಳೆ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆಯನ್ನು ಕುಮಾರಸ್ವಾಮಿ ಖಂಡಿಸಿದ್ದಾರೆ.
ಎತ್ತುಗಳನ್ನು ಹೋರಿಗಳನ್ನು ತೆಗೆದುಕೊಂಡು ಹೋದರು ಎಂದು ಕೊಲೆ ಮಾಡಲು ಹೋಗುತ್ತಾರಾ?, ಪುನೀತ್ ಕೆರೆಹಳ್ಳಿ ನೈತಿಕ ಪೋಲಿಸ್ ಗಿರಿ ಪ್ರದರ್ಶನ ಮಾಡಿದ್ದಾನೆ. ಕನಕಪುರದಲ್ಲಿ ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆ. ಸರ್ಕಾರಕ್ಕೆ ಏನಾದರೂ ಮಾನ ಮರ್ಯಾದೆ ಇದ್ದರೆ, ಅವನನ್ನು ಮೊದಲು ಒದ್ದು ಒಳಗೆ ಹಾಕಬೇಕು. ಚಿತ್ರ ಹಿಂಸೆ ಕೊಟ್ಟು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದರು.
ಈ ಕೆಲಸವನ್ನು ಮುಸ್ಲಿಂ ಸಮುದಾಯದವರು ಮಾಡಿದ್ದೆರೇ ಬಿಜೆಪಿಯ ಮಹಾನಾಯಕರು ದೇಶದಲ್ಲಿ ಬೆಂಕಿ ಹತ್ತಿಕೊಂಡಿದೆ ಎಂದು ಕುಣಿಯುತ್ತಿದ್ದರು. ಈಗ ಅವರು ಎಲ್ಲಿ ಹೋಗಿದ್ದಾರೆ. ಕೊಲೆ ಮಾಡಿ ಎಂದು ಹಿಂದೂ ಧರ್ಮ ಹೇಳುತ್ತಾ, ಸರ್ಕಾರದವರು ಒಬ್ಬರೂ ಕೂಡ ಈ ಬಗ್ಗೆ ತುಟಿ ಬಿಚ್ಚಲ್ಲ. ಮೊದಲು ಪುನೀತ್ ಕೆರೆಹಳ್ಳಿಯನ್ನು ಶೀಘ್ರವೇ ಬಂಧಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.












Click it and Unblock the Notifications