ಕಣ್ವ ನದಿ ಪಾತ್ರಕ್ಕೆ ಕಸ ಸುರಿಯುತ್ತಿರುವ ನಗರಸಭಾ ಸಿಬ್ಬಂದಿ, ಸ್ಥಳೀಯರಲ್ಲಿ ಕಾಯಿಲೆ ಭೀತಿ
ಚನ್ನಪಟ್ಟಣ, ನವೆಂಬರ್ 11: ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದೆ ಬೊಂಬೆನಾಡು ಚನ್ನಪಟ್ಟಣ ನಗರಸಭೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವುದು ಸಾಂಕ್ರಾಮಿಕ ಕಾಯಿಲೆಗಳಿಗೆ ಆಹ್ವಾನ ನೀಡುವಂತಿದ್ದು, ನಾಗರೀಕರಲ್ಲಿ ಆತಂಕ ಮೂಡಿಸಿದೆ.
ಪಟ್ಟಣದಲ್ಲಿ ಉತ್ಪತ್ತಿಯಾಗುತ್ತಿರುವ ಕಸ ವಿಲೇವಾರಿ ಮಾಡಿ ತಮ್ಮ ಜವಬ್ದಾರಿ ಮುಗಿಸುವ ಆತುರದಲ್ಲಿ ಚಿಕ್ಕಮಳೂರು ಗ್ರಾಮದ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ಕಣ್ವ ನದಿಗೆ ಪಟ್ಟಣದ ನಗರಸಭೆಯ ಕಾರ್ಮಿಕರು ಕಸವನ್ನು ಸುರಿದು ನದಿಯನ್ನು ಮಲಿನಗೊಳಿಸುತ್ತಿದ್ದಾರೆ.
ಶಿಥಿಲವಾಗಿದ್ದ ಹೊಯ್ಸಳ ಕಾಲದ ನೂರಾರು ವರ್ಷ ಇತಿಹಾಸವಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯವನ್ನು ಆಜಾದ್ ಬ್ರಿಗೇಡ್, ಸಂಘಟನೆಯ ಕಾರ್ಯಕರ್ತರು ಶ್ರಮದಾನದ ಮೂಲಕ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿದ್ದು, ದೇವಾಲಯದ ಪಕ್ಕದಲ್ಲೇ ನಗರ ಸಭೆಯ ಸಿಬ್ಬಂದಿಗಳು ಕಸ ಸುರಿಯುತ್ತಿರುವ ಹಿನ್ನಲೆಯಲ್ಲಿ ದೇವಾಲಯದ ವಾತಾವರಣ ಕಲುಸಿತಗೊಳ್ಳುತ್ತಿದೆ ಎಂದು ನಗರಸಭೆಗೆ ದೂರು ಸಲ್ಲಿಸಿದ್ದರು.
ದೇವಸ್ಥಾನದ ಪಕ್ಕದಲ್ಲಿ ಸಾರ್ವಜನಿಕರು ಸುರಿದಿದ್ದ ಕಸವನ್ನು ತೆರವುಗೊಳಿಸುವಂತೆ ಚಿಕ್ಕಮಳೂರು ವಾರ್ಡಿನ ನಗರಸಭೆ ಸದಸ್ಯರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ನಗರಸಭಾ ಸದಸ್ಯರು ಪೌರಾಯುಕ್ತರಿಗೆ ಮನವಿ ಮಾಡಿಕೊಂಡು ಕಸ ತೆರವುಗೊಳಿಸುವುದಾಗಿ ತಿಳಿಸಿದ್ದರು. ಆದರೆ ನಗರಸಭೆಯ ಮೇಸ್ತ್ರಿ ಹಾಗೂ ಕಾರ್ಮಿಕರು ಕಸವನ್ನು ತೆರವುಗೊಳಿಸುವ ಬದಲು ಜೆಸಿಬಿ ಮೂಲಕ ಸಂಪೂರ್ಣ ಕಸವನ್ನು ನದಿಗೆ ಸುರಿದ್ದಿದ್ದಾರೆ.
ನಗರಸಭೆಯ ಸಿಬ್ಬಂದಿ ಕಣ್ವ ನದಿಗೆ ಕಸ ಸುರಿಯುತ್ತಿರುವ ವಿಷಯವನ್ನು ನಗರಸಭೆಯ ಪೌರಾಯುಕ್ತರಾದ ಪುಟ್ಟಸ್ವಾಮಿಯವರ ಗಮನಕ್ಕೆ ತಂದಾಗ ಉಡಾಫೆಯಿಂದ ವರ್ತಿಸಿರುವುದರ ಹೊರತಾಗಿ ಕಸ ತೆರೆವುಗೊಳಿಸಲು ಮುಂದಾಗಿರುವುದಿಲ್ಲ. ನಂತರ ನಗರಸಭಾ ಅಧ್ಯಕ್ಷರಾದ ಪ್ರಶಾಂತ್ ಗಮನವನ್ನು ಸೆಳೆದಿದ್ದು ಅವರು ಸಹ ಕಸವನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿರುತ್ತಾರೆಯೇ ಹೊರತು ಇದುವರೆಗೂ ಕಸ ತೆರವುಗೊಳಿಸಲು ಮಾತ್ರ ಮುಂದಾಗಿಲ್ಲ ಎಂದು ಆಜಾದ್ ಬ್ರಿಗೇಡ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಸಮಸ್ಯೆಯನ್ನು ಬಗೆಹರಿಸಬೇಕಾದ ಅಧಿಕಾರಿಗಳು ಹಾಗೂ ನಗರಸಭಾ ಸದಸ್ಯರು ಹಾಗೂ ಅಧ್ಯಕ್ಷರ ಬೇಜವಾಬ್ದಾರಿತನ, ನಿರ್ಲಕ್ಷತೆ ಹಾಗೂ ಉಡಾಫೆಯಿಂದಾಗಿ ಸ್ವಚ್ಛವಾದ ಕಣ್ವ ನದಿ ಕಸ ವಿಲೇವಾರಿ ಗುತ್ತಿಗೆದಾರರ ಹಣದಾಸೆಯಿಂದ ಕಲುಷಿತಗೊಳ್ಳುತ್ತಿದೆ. ಇನ್ನಾದರು ನಗರಸಭೆ ಪೌರಾಯುಕ್ತರು, ಅಧ್ಯಕ್ಷರು ಹಾಗೂ ಸದರಿ ವಾರ್ಡಿನ ನಗರಸಭಾ ಸದಸ್ಯರು ಎಚ್ಚೆತ್ತುಕೊಂಡು, ನದಿಗೆ ಸುರಿದಿರುವ ಕಸ ತೆರವು ಮಾಡಬೇಕು ಇಲ್ಲವಾದಲ್ಲಿ ಆಜಾದ್ ಬ್ರಿಗೇಡ್, ಸಂಘಟನೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಣ್ವ ನದಿ ಪಾತ್ರ ಕಲುಷಿತಗೊಳಿಸುವ ನಿಟ್ಟಿನಲ್ಲಿ ಅಜಾದ್ ಬ್ರಿಗೇಡ್ ಸಂಘಟನೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಿ ಬೇಜವಾಬ್ದಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಬುದ್ಧಿ ಕಲಿಸಬೇಕಾಗುತ್ತದೆ ಎಂದು ನಗರಸಭೆ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.