ನಾಲ್ಕು ದಿನದ ಹಸುಗೂಸನ್ನು ಪೊದೆಗೆ ಎಸೆದು ಹೋದ ಪಾಪಿಗಳು
Recommended Video

ರಾಮನಗರ, ಜೂನ್. 26: ಮಾಗಡಿ ಪಟ್ಟಣದ ಗೌರಮ್ಮನ ಕೆರೆಯ ಬಳಿ ನಾಲ್ಕು ದಿನದ ಹಸುಗೂಸನ್ನು ಪೊದೆ ಮೇಲೆ ಬಿಸಾಕಿ ಹೋಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಆ ಮಗುವನ್ನು ತಾಯಿಯೇ ಬಿಟ್ಟು ಹೋಗಿದ್ದಾಳಾ ಅಥವಾ ಬೇರೆ ಯಾರಾದರೂ ಎಸೆದು ಹೋದರಾ? ಎಂಬ ಮಾಹಿತಿಗಳು ತನಿಖೆ ನಡೆದ ಮೇಲಷ್ಟೇ ತಿಳಿಯಲಿದೆ.
ನಾಲ್ಕು ದಿನಗಳ ಹಿಂದೆ ಜನಿಸಿದ ಹೆಣ್ಣು ಮಗುವನ್ನು ಸೋಮವಾರ ಸಂಜೆ ಕೆರೆಯ ದಂಡೆಯ ಮೇಲಿನ ಪೊದೆಗೆ ಹಾಕಲಾಗಿದ್ದು, ಮಗುವಿನ ಚೀರಾಟ ಕೇಳಿಸಿಕೊಂಡ ಸ್ಥಳೀಯರು, ಕೂಡಲೇ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ.

ಆನಂತರ ಅಧಿಕಾರಿಗಳು ಮಾಗಡಿ ಸರ್ಕಾರಿ ಆಸ್ಪತ್ರೆ ವೈದ್ಯರ ಜೊತೆ ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ರಕ್ಷಿಸಿದ್ದಾರೆ.
ಮಗುವಿನ ಮೂಗು, ಮುಖ, ಕಿವಿ ಹಾಗೂ ಕುತ್ತಿಗೆ ಭಾಗದಲ್ಲಿ ಇರುವೆ ಕಚ್ಚಿದ್ದ ಗಾಯವಾಗಿದ್ದು, ಮಗು ತೀವ್ರ ಅಸ್ವಸ್ಥವಾಗಿದೆ. ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಾಗಡಿ ಸರ್ಕಾರಿ ಆಸ್ಪತ್ರೆಯ ಮಕ್ಕಳ ವೈದ್ಯ ಜಗದೀಶ್ ತಿಳಿಸಿದ್ದಾರೆ.
ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸುರೇಂದ್ರ, ಮತ್ತಿತರರು ಹಾಜರಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮಾಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಣ್ಣು ಹುಟ್ಟಿದೆ ಎಂಬ ಕಾರಣಕ್ಕೆ ಈ ಮಗುವನ್ನ ಎಸೆದು ಹೋಗಿರಬಹುದು ಎಂದು ಶಂಕೆ ಇದೀಗ ವ್ಯಕ್ತವಾಗುತ್ತಿದೆ.












Click it and Unblock the Notifications