ಮೋದಿ ಅವರನ್ನು ನಕಲು ಮಾಡಿದ ಡಿಕೆಶಿ: ಗುರುತರ ಆರೋಪ
ರಾಮನಗರ, ಡಿ 28: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೋದಿಯವರನ್ನು ನಕಲು ಮಾಡಿದವರನ್ನು ರೈತರ ಮಕ್ಕಳು ಎಂದು ಕರೆಯಬೇಕಾ ಎಂದು ಎಚ್ಡಿಕೆ ಕಿಡಿಕಾರಿದ್ದಾರೆ.
ಪುರಸಭಾ ಚುನಾವಣೆಗೆ ಮತದಾನ ಮಾಡಿದ ನಂತರ ಮಾತನಾಡಿದ ಕುಮಾರಸ್ವಾಮಿ, "ನಾವೇನು ಮಣ್ಣಿನ ಮಕ್ಕಳು ಎಂದು ಎದೆ ಮೇಲೆ ಬೋರ್ಡ್ ಹಾಕಿಕೊಂಡಿಲ್ಲ. ನಮಗೆ ನಾಟಕ ಮಾಡಲು ಬರುವುದೂ ಇಲ್ಲ ಹಾಗೂ ಅದರ ಅಗತ್ಯ ನನಗಿಲ್ಲ" ಎಂದು ತಿರುಗೇಟು ನೀಡಿದ್ದಾರೆ.
ಪಂಚೆ ಕಟ್ಟಿದವರೆಲ್ಲಾ ರೈತರು ಅಲ್ಲ ಎನ್ನುವ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ ಕುಮಾರಸ್ವಾಮಿ, "ಪಂಚೆ ಕಟ್ಟಿದವರು ರೈತರು ಅಲ್ಲ ಎಂದಾದ ಮೇಲೆ ಪವಿತ್ರವಾದ ಕಾವೇರಿ ತಾಯಿ ಮುಂದೆ ನಿಂತು ನಾಟಕ ಮಾಡುವವರನ್ನು ಮಣ್ಣಿನ ಮಕ್ಕಳು ಎಂದು ಕರೆಯಬೇಕೇ" ಎಂದು ಪ್ರಶ್ನಿಸಿದ್ದಾರೆ.
ಎಲ್ಲಿಯೂ ಡಿಕೆಶಿ ಅವರ ಹೆಸರು ಬಳಸದೇ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, "ಈ ರಾಜ್ಯಕ್ಕೆ ಗೊತ್ತಿದೆ, ಕುಮಾರಸ್ವಾಮಿ ಕೊಡುಗೆ ಏನೆಂದು. ನೀರಾವರಿ ವಿಚಾರವಾಗಿ ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ ಏನೆಂದು ಗೊತ್ತಿದೆ"ಎಂದು ತಿರುಗೇಟು ನೀಡಿದ್ದಾರೆ.

ಏನ್ ಪಂಚೆ ಹಾಕಿದವರೆಲ್ಲ ರೈತರ ಮಕ್ಕಳಾ, ಡಿ.ಕೆ.ಶಿವಕುಮಾರ್ ಪ್ರಶ್ನೆ
"ಮೊನ್ನೆ ಹಾಸನದಲ್ಲಿ ಕೆಲವರು ಹೇಳಿದ್ದಾರೆ, ಏನ್ ಪಂಚೆ ಹಾಕಿದವರೆಲ್ಲ ರೈತರ ಮಕ್ಕಳಾ ಎಂದು, ನಾವು ಪಂಚೆ ಹಾಕಿದ್ದೇವೆ, ಹಾಗಾಗಿ ನಾವು ರೈತರು ಎಂದಿದ್ದಾರೆ. ಅವರು ಆ ರೀತಿ ಹೇಳಿರುವುದು ರೈತರ ಕುರಿತ ಅವರ ಭಾವನೆಗಳೇನು ಎನ್ನುವುದು ಅರ್ಥವಾಗುತ್ತದೆ. ಜನರೇ ಅವರವರ ಕೆಲಸ ನೋಡಿ ಬಿರುದು ಕೊಡುತ್ತಾರೆ. ಪಂಚೆ ಹಾಕಿಕೊಂಡು ಶೋ ಮಾಡಿದವರೆಲ್ಲ ಮಣ್ಣಿನ ಮಕ್ಕಳು ಆಗಲು ಸಾಧ್ಯವಿಲ್ಲ" ಎಂದು ಅವರು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು.

ತಲಕಾವೇರಿಯಲ್ಲಿ ಏನೆಲ್ಲಾ ನಡೆಯಿತು ಎನ್ನುವುದನ್ನು ನಾವು ನೋಡಿದ್ದೇವೆ
"ತಲಕಾವೇರಿಯಲ್ಲಿ ಏನೆಲ್ಲಾ ನಡೆಯಿತು ಎನ್ನುವುದನ್ನು ನಾವು ನೋಡಿದ್ದೇವೆ. ಎಲ್ಲರನ್ನೂ ದೂರ ಕಳುಹಿಸಿ ಕಾವೇರಿ ನೀರಿಗೆ ಅಕ್ಷತೆ ಹಾಕೋದನ್ನು ಈ ರಾಜ್ಯದ ಜನ ಕಣ್ತುಂಬಿ ಕೊಂಡಿದ್ದಾರೆ. ಹಾಗೆಯೇ, ಮೆಟ್ಟಲಿಗೆ ನಮಸ್ಕಾರ ಮಾಡಿಕೊಂಡಿದನ್ನು ಕೂಡ ನೋಡಿದ್ದೇನೆ. ಅವರು ನರೇಂದ್ರ ಮೋದಿಯವರನ್ನು ಕಾಪಿ ಮಾಡಿದ್ದಾರೆ. ಇಂಥ ಆರ್ಟಿಫಿಷಿಯಲ್ ಹೋರಾಟಗಳು ನಡೆಯಲ್ಲ" ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮೇಕೆದಾಟು ಪಾದಯಾತ್ರೆಗೆ ಪೂರ್ವಭಾಗಿಯಾಗಿ ಡಿಕೆಶಿ ಸದನದಕ್ಕೆ ಚಕ್ಕರ್ ಹೊಡೆದು ಕಾವೇರಿ ಸ್ಥಾನಕ್ಕೆ ಹೋಗಿದ್ದರು.

ಕುಮಾರಸ್ವಾಮಿಯವರು ಕಾಂಗ್ರೆಸ್ ನಾಯಕರ ಕಿವಿ ಹಿಂಡಿದ್ದಾರೆ
"ಈ ಐದು ವರ್ಷದಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಹೋರಾಟ ನೋಡಿದ್ದೇವೆ, ಕೃಷ್ಣೆಯ ನೀರನ್ನು ಇವರು ಹೇಗೆ ಉಳಿಸಿದರು ಅನ್ನೋದನ್ನೂ ನೋಡಿದ್ದೇವೆ. ಈಗ ಮೇಕೆದಾಟು ಹೋರಾಟ ಮಾಡುತ್ತಿದ್ದಾರೆ, ಪಾದಯಾತ್ರೆ ಮೂಲಕ ಮತಯಾತ್ರೆ ಮಾಡುತ್ತಿದ್ದಾರೆ. ಸ್ವಾಮೀಜಿಗಳನ್ನು ಪಾದಯಾತ್ರೆಗೆ ಕರೆಯುತ್ತಿದ್ದಾರೆ. ಶಕ್ತಿ ಇದ್ದರೆ ಹೋಗಿ ದೆಹಲಿಯಲ್ಲಿ ಉಪವಾಸ ಕುಳಿತುಕೊಳ್ಳಿ. ಕೇಂದ್ರ ಕೇಂದ್ರ ಸರ್ಕಾರದ ಮುಂದೆ ಹೋರಾಟ ಮಾಡಿ" ಎಂದು ಕುಮಾರಸ್ವಾಮಿಯವರು ಕಾಂಗ್ರೆಸ್ ನಾಯಕರ ಕಿವಿ ಹಿಂಡಿದ್ದಾರೆ.

ಜನರನ್ನು ಯಾಮಾರಿಸಲು ಎಲ್ಲಾ ಸಂದರ್ಭದಲ್ಲಿಯೂ ಆಗಲ್ಲ
"ಕಾಂಗ್ರೆಸ್ ಪಕ್ಷ ಜನರನ್ನು ಪರಿವರ್ತನೆ ಮಾಡುವ ಸಲುವಾಗಿ ಹೋರಾಟ ಮಾಡುತ್ತಿಲ್ಲ. ಇದು ಕೇವಲ ಮತಕ್ಕಾಗಿ ನಡೆಯುತ್ತಿರುವ ಪಾದಯಾತ್ರೆ ಅಷ್ಟೇ. ಜನರನ್ನು ಯಾಮಾರಿಸಲು ಎಲ್ಲಾ ಸಂದರ್ಭದಲ್ಲಿಯೂ ಆಗಲ್ಲ. ಅದಕ್ಕೆ ಮೂಲ ಉದ್ದೇಶ ಉತ್ತಮವಾಗಿ ಇರಬೇಕು" ಎಂದು ಅವರು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. "ರಾಷ್ಟೀಯ ಪರೀಕ್ಷಾ ಸಂಸ್ಥೆ ಭಾನುವಾರ ನಡೆಸಿರುವ ಯುಜಿಸಿ - ಎನ್ ಇಟಿ ಪರೀಕ್ಷೆಯ ಕನ್ನಡ ಭಾಷಾ ಐಚ್ಛಿಕ ಪ್ರಶ್ನೆ ಪತ್ರಿಕೆಯಲ್ಲಿ ಇದ್ದ 100 ಪ್ರಶ್ನೆಗಳಲ್ಲಿ 90 ಪ್ರಶ್ನೆಗಳು ಹಿಂದಿಯಲ್ಲಿ ಇದ್ದರೆ, ಉಳಿದ ಹತ್ತು ಪ್ರಶ್ನೆಗಳು ಮಾತ್ರ ಕನ್ನಡಲ್ಲಿ ಇದ್ದವು. ಇದು ಅತ್ಯಂತ ಖಂಡನೀಯ"ಎಂದು ಕುಮಾರಸ್ವಾಮಿ ಪುನರುಚ್ಚರಿಸಿದರು.












Click it and Unblock the Notifications