ರಾಮನಗರ: ರೈಸ್ ಪುಲ್ಲಿಂಗ್ ದಂಧೆಗಾಗಿ ರೈತರ ಚಿನ್ನ ದುರ್ಬಳಕೆ; ಸಹಕಾರ ಸಂಘದ ಮ್ಯಾನೇಜರ್ ಬಂಧನ
ರಾಮನಗರ, ಏಪ್ರಿಲ್ 20: ರೈತರು ಸಹಕಾರ ಸಂಘದಲ್ಲಿ ಗಿರವಿ ಇಟ್ಟಿದ್ದ ಕೋಟ್ಯಂತರ ಮೌಲ್ಯದ ಚಿನ್ನದ ಒಡವೆಗಳನ್ನು ದುರುಪಯೋಗ ಮಾಡಿಕೊಂಡಿದ್ದ ಸಹಕಾರ ಸಂಘದ ಮ್ಯಾನೇಜರ್ನನ್ನು ಬಂಧಿಸುವ ಮೂಲಕ ರಾಮನಗರ ಜಿಲ್ಲಾ ಪೊಲೀಸರು ನೊಂದ ರೈತರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೃಷಿ ಉತ್ಪನ್ನ ಸಹಕಾರ ಸಂಘದಲ್ಲಿ ಚಿನ್ನದ ಗಿರವಿ ಇಟ್ಟರೆ ಕಡಿಮೆ ಬಡ್ಡಿ ದರ ಹಾಗೂ ರೈತರು ತಮ್ಮ ಕಷ್ಟ ನಿವಾರಣೆಗಾಗಿ ಸಹಕಾರ ಸಂಘದಲ್ಲಿ ಗಿರವಿ ಇಟ್ಟಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಸಹಕಾರ ಸಂಘದ ಮ್ಯಾನೇಜರ್ ಒಡವೆಗಳನ್ನು ಬೇರೆಡೆ ಅಡ ಇಟ್ಟು ಪರಾರಿಯಾಗಿದ್ದ. ಇದೀಗ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಒಡವೆಗಳು ಮತ್ತೆ ಸಹಕಾರ ಸಂಘದ ಖಜಾನೆ ಸೇರಿವೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಕೃಷಿ ಉತ್ಪನ್ನ ವ್ಯವಸಾಯ ಸಹಕಾರ ಸಂಘದಲ್ಲಿ ರೈತರು ಗಿರವಿ ಇಟ್ಟಿದ್ದ ಚಿನ್ನದ ಆಭರಣಗಳನ್ನು ಸಂಘದ ಮ್ಯಾನೇಜರ್ ಗೋವಿಂದಪ್ಪ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ರೈತರ ಒಡವೆಗಳನ್ನು ಯಾರಿಗೂ ಅನುಮಾನ ಬಾರದಂತೆ ಲಾಕರ್ನಿಂದ 8 ಕೆಜಿ 530 ಗ್ರಾಂ ಒಡವೆಗಳನ್ನು ಕಳ್ಳತನ ಮಾಡಿದ್ದಾನೆ.

ಚಿನ್ನದ ಆಭರಣಗಳನ್ನು ಎಗರಿಸಿದ ಗೋವಿಂದಪ್ಪ ಒಡವೆಗಳನ್ನು ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಗಿರವಿ ಇಟ್ಟಿದ್ದ. ಈ ಸಂಬಂಧ ಕನಕಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿ ಗೋವಿಂದಪ್ಪನನ್ನು ವಶಕ್ಕೆ ಪಡೆದು ಚಿನ್ನಾಭರಣಗಳನ್ನು ದಸ್ತಗಿರಿ ಮಾಡಿದ್ದಾರೆ.
ರೈಸ್ ಪುಲ್ಲಿಂಗ್ ಮೋಡಿಗೆ ಸಿಲುಕಿದ್ದ ಗೋವಿಂದಪ್ಪ
ಅಂದ ಹಾಗೆ ಸಂಘದ ಮ್ಯಾನೇಜರ್ ಗೋವಿಂದಪ್ಪ ಚಿನ್ನದ ಒಡವೆಗಳನ್ನು ಗಿರವಿ ಇಟ್ಟು ಬಂದ ಹಣದಿಂದ ರೈಸ್ ಪುಲ್ಲಿಂಗ್ ದಂಧೆಯಲ್ಲಿ ತೊಡಗಿಸಿದ್ದ. ಈ ರೈಸ್ ಪುಲ್ಲಿಂಗ್ ಎಂಬ ಮಾಯ ಜಾಲಕ್ಕೆ ಸಿಲುಕಿ ಗೋವಿಂದಪ್ಪ ಕೋಟಿ ಕೋಟಿ ಹಣವನ್ನು ಕಳೆದುಕೊಂಡಿದ್ದ. ಕೋಟಿ ಕನಸು ಕಂಡಿದ್ದ ಗೋವಿಂದಪ್ಪ ಪೊಲೀಸರ ಅತಿಥಿಯಾಗಿದ್ದಾನೆ.

ಇನ್ನು ಕೋಟಿ ಕನಸು ಕಂಡು ರೈತರ ಚಿನ್ನ ದುರುಪಯೋಗ ಮಾಡಿಕೊಂಡು ಕನಕಪುರ ಟೌನ್ನ ಮಣಪ್ಪುರಂ, ಮುತ್ತೂಟ್ ಫೈನಾನ್ಸ್, ಮುತ್ತೂಟ್ ಫಿನ್ಕಾರ್ಫ್, ಐಐಎಫ್ಎಲ್, ಕೋಸಮಟ್ಟಂ ಫೈನಾನ್ಸ್ಗಳಲ್ಲಿ ಹಾಗೂ ರಾಮದೇವ್ ಬ್ಯಾಂಕರ್ಸ್ಗಳಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಏಳು ಖಾಸಗಿ ಬ್ಯಾಂಕ್ಗಳಲ್ಲಿ ಅಡಮಾನವಿಟ್ಟಿದ್ದ ಸುಮಾರು 3 ಕೋಟಿ 37 ಲಕ್ಷದ 86 ಸಾವಿರ ರೂಪಾಯಿ ಬೆಲೆಬಾಳುವ 7 ಕೆಜಿ 113 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿರುವ ಕನಕಪುರ ಪೊಲೀಸರು ಆರೋಪಿ ಗೋವಿಂದಪ್ಪನನ್ನು ಜೈಲಿಗಟ್ಟಿದ್ದಾರೆ.

ಸಹಕಾರ ಸಂಘದ ಅಧ್ಯಕ್ಷರ ಪ್ರತಿಕ್ರಿಯೆ
ಬ್ಯಾಂಕ್ನ ಗೌರವ ಕಾಪಾಡಬೇಕಾದ ಮ್ಯಾನೇಜರ್ ಗೋವಿಂದಪ್ಪ ರೈತರ ಚಿನ್ನದ ಆಭರಣಗಳನ್ನು ದುರುಪಯೋಗ ಮಾಡಿಕೊಂಡು ಸಹ ಸಂಘದ ಮೇಲೆ ಜನರು ಅನುಮಾನದ ದೃಷ್ಟಿಯಿಂದ ನೋಡುವಂತಾಗಿತ್ತು. ಅಲ್ಲದೇ ತಮ್ಮ ಚಿನ್ನಾಭರಣ ಮತ್ತೆ ನಮಗೆ ಸಿಗುವುದಿಲ್ಲ ಎಂಬ ದಿಗಿಲುಗೊಂಡಿದ್ದ ರೈತರ ಚಿನ್ನಾಭರಣಗಳನ್ನು ರಿಕವರಿ ಮಾಡಿದ್ದಕ್ಕೆ ಕೃಷಿ ಉತ್ಪನ್ನ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ತಮ್ಮಣ್ಣಗೌಡ ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ತಿಳಿಸಿದರು.
ಪೊಲೀಸ್ ವರಿಷ್ಠಾಧಿಕಾರಿಗಳ ಪ್ರತಿಕ್ರಿಯೆ
ನೂರಾರು ರೈತರನ್ನು ವಂಚಿಸಿದ ಪ್ರಕರಣವನ್ನು ಭೇದಿಸಿ 3 ಕೋಟಿ ಮೌಲ್ಯದ ರೈತರ ಚಿನ್ನಾಭರಣಗಳನ್ನು ಸೊಸೈಟಿಗೆ ಹಿಂತಿರುಗಿಸಿದ್ದು, ಅಲ್ಲದೇ ಆರೋಪಿ ದುರುಪಯೋಗ ಮಾಡಿಕೊಂಡಿದ್ದ 8 ಲಕ್ಷದ 27 ಸಾವಿರ ಹಣವನ್ನು ಸಹಕಾರ ಸಂಘಕ್ಕೆ ಮರು ಪಾವತಿ ಮಾಡಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಶ್ಲಾಘಿಸಿದ್ದು, ಸೂಕ್ತ ಬಹುಮಾನವನ್ನು ನೀಡುವುದಾಗಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದರು.












Click it and Unblock the Notifications