ಪಂಚಾಯತಿ ಚುನಾವಣೆ; ಸದಸ್ಯತ್ವ ರದ್ದತಿಗೆ ಕೋರ್ಟ್ಗೆ ಮೊರೆ
ರಾಮನಗರ, ಫೆಬ್ರವರಿ 5; ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸದಸ್ಯರ ಸದಸ್ಯತ್ವ ರದ್ದುಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತರೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಚುನಾವಣಾಧಿಕಾರಿಗಳ ವಿರುದ್ಧವೂ ದೂರು ನೀಡಲಾಗಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಬ್ಬಾಳು ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರ ಸದಸ್ಯತ್ವವನ್ನು ಅಸಿಂಧುಗೊಳಿಸುವಂತೆ ಹಾಗೂ ಚುನಾವಣಾ ಆಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್ ಕಬ್ಬಾಳು ಗ್ರಾಮ ಪಂಚಾಯತಿ ಸದಸ್ಯರಾದ ಕೆ. ವಿ. ಶಿವಣ್ಣ, ಭಾಗ್ಯಮ್ಮ, ಸವಿತಾ ಎಂ, ದಿಲೀಪ್, ಕಾರ್ತಿಕ್ ಹಾಗೂ ಪರಾಜಿತರಾದ ಕುಳ್ಳೇಗೌಡ, ಕೆ. ಬಿ. ನಾಗರಾಜು ಅಲ್ಲದೇ ನಾಮಪತ್ರ ಹಿಂಪಡೆದ ವರಲಕ್ಷ್ಮಿ ಚುನಾವಾಣ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಈ ಕುರಿತು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಇದೇ ಪ್ರಕರಣದಲ್ಲಿ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಎಂ. ಎಸ್. ಅರ್ಚನಾ, ತಹಶೀಲ್ದಾರ್ ವರ್ಷಾ ಒಡೆಯರ್, ಚುನಾವಣಾಧಿಕಾರಿ ರುದ್ರೇಶ್, ಪಿಡಿಒ ಲೋಕೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ನಂದಿನಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದಿರುವ ಹಾಗೂ ಸೋತಿರುವ ಮತ್ತು ನಾಮಪತ್ರ ಹಿಂಪಡೆದಿರುವ ಅಭ್ಯರ್ಥಿಗಳು ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿಯನ್ನು ನೀಡಿ ತಮ್ಮ ವರಮಾನ, ಉದ್ಯೋಗ, ಸರ್ಕಾರಿ ನೌಕರಿ, ಆಸ್ತಿ, ಪಾನ್ಕಾರ್ಡ್ ಮಾಹಿತಿಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಕಂಚನಹಳ್ಳಿ ಆಶಾ ಕಾರ್ಯಕರ್ತೆ ಯಾಗಿರುವ ಸುಮಾ ಅವರ ಪತಿ ಕೆ. ವಿ. ಶಿವಣ್ಣ ಕಂಚನಹಳ್ಳಿ ಸದಸ್ಯತ್ವ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಇಲ್ಲಿ ಸುಮಾ ತಮ್ಮ ಪತಿ ಗೆಲುವಿಗೆ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ.
ಕಬ್ಬಾಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಲೋಕೇಶ್ ಅವರನ್ನು ಕಬ್ಬಾಳು ಗ್ರಾಮ ಪಂಚಾಯತಿ ಚುನಾವಣಾ ಸಹಾಯಕರಾಗಿ ನಿಯೋಜನೆ ಮಾಡಿರುವುದು ಚುನಾವಣಾ ನಿಯಮಕ್ಕೆ ವಿರುದ್ಧ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.












Click it and Unblock the Notifications