ಮತದಾರರಿಗೆ ಹಂಚಲು ತಂದಿದ್ದ ಸೀರೆ, ಹಣ ವಶ
ಮಾಗಡಿ: ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷವೊಡ್ಡಲು ತಂದಿದ್ದ ಹಣ ಮತ್ತು ಸೀರೆಯನ್ನು ಚುನಾವಣಾಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಉಡುವೆಗೆರೆಯ ಬಸವೇಶ್ವರ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ.
ಉಡುವೆಗೆರೆಯ ಬಸವೇಶ್ವರ ಕಾಲೋನಿಯ ಪರಮಶಿವಯ್ಯ ಮನೆಯಲ್ಲಿ 58 ಹಾಗೂ ಶಿವಲಿಂಗಯ್ಯ ಎಂಬುವವರ ಮನೆಯಲ್ಲಿ 50 ಸೀರೆಗಳು ಪತ್ತೆಯಾಗಿದ್ದು, ಇದು ಮತದಾರರಿಗೆ ಹಂಚಲು ತಂದಿದ್ದು ಎಂದು ತಿಳಿದು ಬಂದಿದೆ. ಯಾವ ಪಕ್ಷಕ್ಕೆ ಸೇರಿದ್ದು ಎಂಬುದನ್ನು ಚುನಾವಣಾಧಿಕಾರಿಗಳು ಖಚಿತ ಪಡಿಸಿಲ್ಲ.
ಚುನಾವಣಾಧಿಕಾರಿಗಳು ದಾಳಿ ನಡೆಸಿದ ವೇಳೆ ಬೈಕ್ನಲ್ಲಿ 1 ಲಕ್ಷದ 48 ಸಾವಿರ ರೂಪಾಯಿ ಹಣವನ್ನು ರಸ್ತೆ ಬದಿಯಲ್ಲಿ ಎಸೆದು ಬೈಕ್ ಸವಾರ ಪರಾರಿಯಾಗಿದ್ದಾನೆ.

ಈ ಹಣವು ಮತದಾರರಿಗೆ ಹಂಚಲು ತರಲಾಗಿತ್ತು ಎಂಬುದು ತಿಳಿದು ಬಂದಿದೆ. ಯಾವ ಪಕ್ಷಕ್ಕೆ ಸೇರಿದೆ ಎಂಬುದು ಗೊತ್ತಾಗಿಲ್ಲ ಎಂದು ಆರ್ಒ ಕೃಷ್ಣಮೂರ್ತಿ ಹೇಳಿದ್ದಾರೆ.

ಗ್ರಾಮಸ್ಥರು ನೀಡಿದ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಬೆಳಗ್ಗೆ 10.30ರ ಸಮಯದಲ್ಲಿ ಚುನಾವಣೆ ನೀತಿ ಸಂಹಿತೆ ತಂಡದ ಅಶೋಕ್, ಅಬಕಾರಿ ವೃತ್ತ ನಿರೀಕ್ಷಕ ಸುಬ್ರಹ್ಮಣ್ಯ, ಮಾಗಡಿ ಎಎಸ್ಐ ಮರಿಸ್ವಾಮಿ, ಪಿಸಿ ನರೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ಸ್ಥಳದಲ್ಲಿ ಸೀರೆ ಮತ್ತು ಹಣ ಪತ್ತೆಯಾಗಿದೆ. ಹಣ ಮತ್ತು ಸೀರೆಯನ್ನು ವಶಪಡಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.












Click it and Unblock the Notifications