Breaking: ರಾಮನಗರದ ಕೆಲವು ಭಾಗದಲ್ಲಿ ಭೂ ಕಂಪನ!
ರಾಮನಗರ, ಸೆಪ್ಟೆಂಬರ್ 10: ಕೆಲವು ದಿನಗಳಿಂದ ಮಳೆಯಿಂದ ತತ್ತರಿಸಿದ್ದ ರಾಮನಗರ ಜಿಲ್ಲೆಗೆ ಇದೀಗ ಭೂಕಂಪದ ಆತಂಕ ಎದುರಾಗಿದೆ. ಶನಿವಾರ ಮುಂಜಾನೆ ನಗರದ ಕೆಲವೆಡೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.
ರಾಮನಗರ ತಾಲೂಕಿನ ಬೆಜ್ಜರ ಹಳ್ಳಿ, ಪಾದರ ಹಳ್ಳಿ, ತಿಮ್ಮಸಂದ್ರ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪನದ ಅನುಭವ ಉಂಟಾಗಿದೆ. ಇದರಿಂದ ಜನರು ಭೀತಿಗೊಳಗಾಗಿ ಮನೆಯಿಂದ ಹೊರಗೆ ಓಡೋಡಿ ಬಂದಿದ್ದಾರೆ.
ಬೆಳಗ್ಗೆ 5:30ರ ಸುಮಾರಿಗೆ ಭಾರಿ ಶಬ್ಧದೊಂದಿಗೆ ಮೂರು ಬಾರಿ ಭೂಕಂಪನ ದ ಅನುಭವ ಆಗಿದ್ದಾಗಿ ತಿಳಿದುಬಂದಿದೆ. ಇದರ ಬಗ್ಗೆ ಇನ್ನೂ ಜಿಲ್ಲಾಡಳಿತ ಅಥವಾ ಕರ್ನಾಟಕ ರಾಜ್ಯ ನೈಸರ್ಗಿಕ ನಿರ್ವಹಣಾ ಕೇಂದ್ರ ಯಾವುದೇ ಮಾಹಿತಿಯನ್ನು ತಿಳಿಸಿಲ್ಲ, ಪರಿಶೀಲನೆ ಬಳಿಕ ಎಷ್ಟು ಪ್ರಮಾಣದಲ್ಲಿ ಭೂಮಿ ಕಂಪಿಸಿದೆ ಎನ್ನುವುದರ ಬಗ್ಗೆ ಮಾಹಿತಿ ತಿಳಿಯಲಿದೆ.

ಇನ್ನೂ ರಾಮನಗರದ ಚನ್ನಪಟ್ಟಣ ತಾಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ 5 ವರ್ಷಗಳ ಹಿಂದೆ ಇದೇ ರೀತಿ ಭೂಮಿ ಕಂಪಿಸಿತ್ತು. ಆಗ ಮನೆಯಲ್ಲಿದ್ದ ಪಾತ್ರ ಪಗಡೆಗಳೆಲ್ಲಾ ಬಿದ್ದಿದ್ದು, ಮನೆಯವರೆಲ್ಲಾ ಆಘಾಕ್ಕೊಳಗಾಗಿ ಹೊರಬಂದಿದ್ದರು. ನಾಲ್ಕೈದು ಮನೆಗಳೆ ಗೋಡೆಗಳು ಕೂಡ ಬಿರುಕು ಮೂಡಿದ್ದವು.
ಇನ್ನು ಮುಂಗಾರು ಆರಂಭವಾದ ಕಳೆದ ಎರಡೂ ತಿಂಗಳಿಂದಲೂ ರಾಜ್ಯದ ಹಲವೆಡೆ ಭೂಮಿ ಕಂಪನದ ಅನುಭವವಾಗಿದೆ. ಹಾಸನ, ಕೊಡಗು, ದಕ್ಷಿಣ ಕನ್ನಡ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.












Click it and Unblock the Notifications