ಬಿಜೆಪಿ ಸೇರಲ್ಲ, ಕಾಂಗ್ರೆಸ್ ತೊರೆಯಲ್ಲ: ಸಂಸದ ಡಿ.ಕೆ ಸುರೇಶ್ ಸ್ಪಷ್ಟನೆ
ರಾಮನಗರ, ನವೆಂಬರ್ 9: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಮೇಲೆ ಕೇಂದ್ರ ಸಚಿವರು ಬಿಜೆಪಿ ಸೇರುವಂತೆ ಒತ್ತಡ ಹೇರಿದ್ದಾರೆ ಎನ್ನುವ ಬಗ್ಗೆ ಸುರೇಶ್ ಸ್ಪಷ್ಟನೆ ನೀಡಿದ್ದಾರೆ. ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆದು ಬೇರೆಡೆ ಹೋಗಲ್ಲ. ಈಗಾಗಲೇ ಡಿ.ಕೆ. ಶಿವಕುಮಾರ್ ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಅವರು ಹೇಳಿದರು.
ರಾಮನಗರದ ಯಾರಬ್ ನಗರದಲ್ಲಿ ಟಿಪ್ಪು ಜನ್ಮ ದಿನದ ಅಂಗವಾಗಿ ಏರ್ಪಡಿಸಿದ್ದ, ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಸುದ್ದಿಗಾರರ ಜತೆ ಅವರು ಮಾತನಾಡಿದರು.

"ನಮ್ಮ ಮೇಲೆ ಎಷ್ಟೇ ಒತ್ತಡ ತಂದು ರಾಜಕೀಯ ತಂತ್ರಗಾರಿಕೆ ಮಾಡಿದರೂ ನಾವು ಜಗ್ಗುವುದಿಲ್ಲ. ನಮ್ಮಿಬ್ಬರ ಮುಂದೆ ಯಾವುದೇ ಒತ್ತಡ ನಡೆಯೋದಿಲ್ಲ. ನಮಗೆ ರಾಜ್ಯದ ಜನ, ಕಾಂಗ್ರೆಸ್ ಪಕ್ಷ ಹಾಗೂ ನಾವು ನಂಬಿರುವ ದೇವರು ಸಾಕಷ್ಟು ಶಕ್ತಿ ಕೊಟ್ಟಿದ್ದಾರೆ. ನಾವು ಕಾಂಗ್ರೆಸ್ ತೊರೆಯುವ ಮಾತೇ ಇಲ್ಲ," ಎಂದು ಡಿ.ಕೆ ಸುರೇಶ್ ಸ್ಪಷ್ಟವಾಗಿ ಹೇಳಿದರು.
ನಾವು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರು. ಯಾವುದೇ ಆತಂಕ ಯಾರಿಗೂ ಬೇಡ. ಯಾವುದೇ ಒತ್ತಡ, ರಾಜಕೀಯ ತಂತ್ರಗಾರಿಕೆಗೆ ಹೆದರುವ ಜಾಯಮಾನ ನಮ್ಮದಲ್ಲ ಎಂದು ಅವರು ಹೇಳಿದರು.
ಟಿಪ್ಪು ಜಯಂತಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಟಿಪ್ಪು ಜಯಂತಿ ಬಗ್ಗೆ ಬಿಜೆಪಿ ಮತ್ತು ಸಂಘ ಪರಿವಾರ ವಿರೋಧ ವ್ಯಕ್ತಪಡಿಸುತ್ತಿದ್ದು, ಚುನಾವಣೆ ಬರುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಸೂಚನೆ ನೀಡಿದ್ದಾರೆ ಎಂದು ಸಂಸದ ಡಿ.ಕೆ ಸುರೇಶ್ ಆರೋಪಿಸಿದರು.

ಸರ್ಕಾರ ಈಗಾಗಲೇ ಎಚ್ಚರಿಕೆ ವಹಿಸಿದೆ. ಅವರ ಷಡ್ಯಂತ್ರಕ್ಕೆ ರಾಜ್ಯ ಸರ್ಕಾರ ತಕ್ಕ ಉತ್ತರ ನೀಡಲಿದೆ. ಕೋಮುವಾದಿಗಳು ದೇಶ ಹೇಗೆ ಒಡೆಯಲು ಯತ್ನಿಸುತ್ತಿದ್ದಾರೆ ಎನ್ನುವ ಬಗ್ಗೆ ಮುಸ್ಲಿಂ ಬಾಂಧವರಿಗೆ ಮನದಟ್ಟಾಗಿದೆ. ಆದ್ದರಿಂದ ಅಲ್ಪಸಂಖ್ಯಾತ ಮುಖಂಡರು ಸಂಘಟಿತರಾಗಿದ್ದಾರೆ. ಟಿಪ್ಪು ಜಯಂತಿಯಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಸರ್ಕಾರ ಹಾಗೂ ಜಿಲ್ಲಾಡಳಿತ ಮುಂಜಾಗ್ರತ ಕ್ರಮ ಕೈಗೊಂಡಿದೆ ಎಂದು ಹೇಳಿದರು.
"ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನೇನು ಮಾಡುತ್ತೇನೆಯೋ ಅದನ್ನು ದೇಶದ ಜನರು ಮಾಡಬೇಕೆನ್ನುವ ಇರಾದೆ ಇಟ್ಟುಕೊಂಡಿದ್ದಾರೆ. ನಾನು ತಿಂದದ್ದನ್ನು ಜನರು ತಿನ್ನಬೇಕು. ಯೋಗ ಮಾಡಿದರೆ ನೀವೂ ಮಾಡಬೇಕು. ಕಸ ಗುಡಿಸಿದರೆ ನೀವು ಗುಡಿಸಬೇಕೆನ್ನುವ ಮನಸ್ಥಿತಿಯಲ್ಲಿದ್ದಾರೆ. ಇನ್ನೂ ಮೋದಿಯವರು ನಾನೇ ನೋಟುಗಳನ್ನು ಮುದ್ರಿಸಿದ್ದೇನೆ ಎನ್ನುವ ಮನೋಭಾವದಲ್ಲಿದ್ದಾರೆ. ಹಳೆ ನೋಟನ್ನು ತೆಗೆದು ಹೊಸ ನೋಟನ್ನು ತಂದಿದ್ದೇ ತಮ್ಮ ದೊಡ್ಡ ಸಾಧನೆ ಎಂದು ಮೋದಿ ತಿಳಿದುಕೊಂಡಿದ್ದಾರೆ," ಎಂದು ಹಾಸ್ಯ ಮಾಡಿದರು.












Click it and Unblock the Notifications