ಚನ್ನಪಟ್ಟಣದಿಂದ ನಟಿ ರಮ್ಯಾ ಸ್ಪರ್ಧೆ ವಿಚಾರ: ಓವರ್ ಟು ಡಿ.ಕೆ.ಸುರೇಶ್
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ನಿಟ್ಟಿನಲ್ಲಿ ಸಾಕಷ್ಟು ತಂತ್ರಗಳನ್ನು ಮಾಡುತ್ತಿದ್ದು ನಟಿ ರಮ್ಯಾ ಚನ್ನಪಟ್ಟಣ ಕ್ಷೇತ್ರಕ್ಕೆ ಬರುವುದು ಸುಳ್ಳು ಎಂದು ಸಂಸದ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಮನಗರ, ಫೆಬ್ರವರಿ 15: ಮಂಡ್ಯದ ಮಾಜಿ ಸಂಸದೆ ಕನ್ನಡ ಚಲನಚಿತ್ರ ನಟಿ ರಮ್ಯಾ ಚನ್ನಪಟ್ಟಣ ಕ್ಷೇತ್ರದಿಂದ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿಗೆ ಡಿ.ಕೆ.ಸುರೇಶ್ ಸ್ಪಷ್ಟನೆ ನೀಡಿದ್ದಾರೆ.
ಮಾಗಡಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಂಸದೆ ರಮ್ಯಾ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಕೇಲವ ಮಾಧ್ಯಮಗಳ ಸೃಷ್ಟಿ. ಪಕ್ಷದಲ್ಲಿ ರಮ್ಯಾ ಸ್ಪರ್ಧೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ನಿಟ್ಟಿನಲ್ಲಿ ಸಾಕಷ್ಟು ತಂತ್ರಗಳನ್ನು ಮಾಡುತ್ತಿದ್ದು ರಮ್ಯಾ ಚನ್ನಪಟ್ಟಣ ಕ್ಷೇತ್ರಕ್ಕೆ ಬರುವುದು ಸುಳ್ಳು ಎಂದು ಸಂಸದ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದರು.
ಮೋದಿ ಭೇಟಿ ಬಿಜೆಪಿಗೆ ಲಾಭ: ಡಿ.ಕೆ ಸುರೇಶ್ ಹೇಳಿದ್ದೇನು..?
ರಾಜ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪದೇ ಪದೇ ಭೇಟಿ ನೀಡುತ್ತಿರುವುದರಿಂದ ಬಿಜೆಪಿಗೆ ಲಾಭವಾಗುತ್ತದೆಯೇ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೋದಿಯವರು ಕಳೆದ 9 ವರ್ಷಗಳಿಂದ ಪ್ರಧಾನ ಮಂತ್ರಿಗಳಾಗಿದ್ದು, ರಾಜ್ಯಕ್ಕೆ ಒಂಬತ್ತು ಬಾರಿಯೂ ಭೇಟಿ ಕೊಟ್ಟಿರಲಿಲ್ಲ. ಈಗ ಚುನಾವಣೆಯ ದೃಷ್ಟಿಯಿಂದ ಬೇರೆ ಬೇರೆ ಕಾರ್ಯಕ್ರಮಗಳ ನೆಪ ಮಾಡಿಕೊಂಡು ರಾಜ್ಯಕ್ಕೆ ಬರುತ್ತಿದ್ದಾರೆ ಅಷ್ಟೇ ಎಂದರು.

ಕರ್ನಾಟಕ ಜನತೆ ಪ್ರಜ್ಞಾವಂತರಾಗಿದ್ದಾರೆ. ಹಿಂದಿ ಏರಿಕೆ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದು 40% ಕಮಿಷನ್ ಸರ್ಕಾರ ಎಂದು ಅವರ ಹಿರಿಯ ಶಾಸಕರೇ ಬಹಿರಂಗಪಡಿಸಿದ್ದಾರೆ. ಮಂತ್ರಿಯಾಗಬೇಕಾದರೆ, ಮುಖ್ಯಮಂತ್ರಿಗಳಾಗಬೇಕಾದರೆ ಹಣ ಕೊಡಬೇಕು ಎಂದು ಅವರ ಪಕ್ಷದವರೇ ಹೇಳುತ್ತಿದ್ದಾರೆ ಎಂದರು.
ಇನ್ನು ರಾಜ್ಯಕ್ಕೆ ಬರುವ ವರಿಷ್ಠರು ಅವರ ಪಕ್ಷದ ಶಾಸಕರ ಹೇಳಿಕೆಗೆ ಸ್ಪಷ್ಟನೆ ನೀಡಿ ನಂತರ ಮತಯಾಚನೆ ಮಾಡಬೇಕು. ಇಲ್ಲವಾದಲ್ಲಿ 2023ರ ಚುನಾವಣೆಯಲ್ಲಿ ರಾಜ್ಯದ ಜನತೆಯೇ ಸ್ಪಷ್ಟ ಉತ್ತರ ಕೊಡುತ್ತಾರೆ. ರಾಜ್ಯಕ್ಕೆ ಮೋದಿ ಮತ್ತು ಅಮಿತ್ ಶಾ ಭೇಟಿ ಲಾಭವೋ ನಷ್ಟವೋ ಎನ್ನುವುದು ಚುನಾವಣೆ ನಂತರ ತಿಳಿಯುತ್ತದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯ ರಾಜಕೀಯಕ್ಕೆ ಬರ್ತಾರ ಡಿ.ಕೆ ಸುರೇಶ್..?
ಮಾತು ಮುಂದುವರಿಸಿದ ಡಿ.ಕೆ ಸುರೇಶ್, ರಾಜ್ಯ ರಾಜಕಾರಣಕ್ಕೆ ಬರುವಂತೆ ಬೇರೆ ಬೇರೆ ಕಡೆಗಳಿಂದ ಒತ್ತಡ ಕೇಳಿ ಬರುತ್ತಿದೆ. ನಾನು ಯಾವುದೇ ಕಾರಣಕ್ಕೂ ರಾಜ್ಯ ರಾಜಕಾರಣಕ್ಕೆ ಬರುವ ಚಿಂತನೆಯನ್ನು ಮಾಡಿಲ್ಲ. ಕಳೆದ ಎರಡು ವರ್ಷಗಳಿಂದಲೂ ಹಾಸನ ಉಸ್ತುವಾರಿಯಾಗಿ ನಮ್ಮ ವರಿಷ್ಠರು ಜವಾಬ್ದಾರಿ ನೀಡಿದ್ದಾರೆ. ಅಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ನಾನು ರಾಜ್ಯ ರಾಜಕಾರಣಕ್ಕೆ ಬರುವ ತೀರ್ಮಾನ ಮಾಡಿಲ್ಲ. ಇದನ್ನು ಪಕ್ಷಕ್ಕೆ ಮತ್ತು ಕ್ಷೇತ್ರದ ಜನತೆಗೆ ಬಿಟ್ಟಿದ್ದೇನೆ. ನನಗೆ ಕ್ಷೇತ್ರದ ಜನತೆ ಪ್ರೀತಿಯಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಿಸಿ ಕೊಟ್ಟಿದ್ದು, ಜವಾಬ್ದಾರಿಯುತವಾಗಿ ನಿಭಾಯಿಸುತ್ತಿದ್ದೇನೆ. ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ. 2023ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಘಟನೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.












Click it and Unblock the Notifications